ನಗರದ ಕಂದಾಯ ಭವನದ ಮುಂಭಾಗದಲ್ಲಿ ಭಾನುವಾರ ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ದಲಿತರ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ.ಶ್ರೀನಿವಾಸ್ ಮಾತನಾಡಿದರು.
ತಾಲ್ಲೂಕಿನಾದ್ಯಂತ ಇರುವ ಗ್ರಾಮೀಣ ಪ್ರದೇಶದ ದಲಿತ ಕೇರಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯಮಾರಾಟಕ್ಕೆ ಕೂಡಲೇ ಕಡಿವಾಣ ಹಾಕಲು ಅಗತ್ಯ ಕ್ರಮಗಳನ್ನು ಜರುಗಿಸುವುದಾಗಿ ಅವರು ಹೇಳಿದರು.
ಅಕ್ರಮ ಮದ್ಯಮಾರಾಟದ ಬಗ್ಗೆ ಪೊಲೀಸ್ ಇಲಾಖೆ ತೆಗೆದುಕೊಳ್ಳುವ ಕಠಿಣವಾದ ತೀರ್ಮಾನಗಳಿಗೆ ನಾಗರಿಕರೂ ಸೇರಿದಂತೆ ಮುಖಂಡರು ಸಹಕರಿಸಬೇಕು ಎಂದರು.
ಅಕ್ರಮ ಮದ್ಯ ಮಾರುವವರಿಗೆ ಪೊಲೀಸರೇ ಮಾಹಿತಿ ನೀಡುತ್ತಾರೆ ಎಂಬ ದೂರಿಗೆ ಉತ್ತರಿಸಿದ ಅವರು, ತಾಲ್ಲೂಕಿನಾದ್ಯಂತ ಇರುವ ಕಾಲೋನಿಗಳ ಅಂಗಡಿಗಳಿಗೆ ಸ್ವತಃ ಪಿಎಸ್ಸೈ ನೇತೃತ್ವದಲ್ಲಿ ಸಿಬ್ಬಂದಿ ಭೇಟಿ ನೀಡಿ ವಾರದೊಳಗೆ ಅಕ್ರಮ ಮದ್ಯ ಮಾರುವವರ ವಿರುದ್ದ ಕ್ರಮ ಜರುಗಿಸಲಾಗುತ್ತದೆ. ಅಕ್ರಮ ಮದ್ಯ ಮಾರಾಟ ಮಾಡುವ ಬಗ್ಗೆ ಯಾವುದೇ ಪೊಲೀಸ್ ಪೇದೆಗಳಿಗೆ ಮಾಹಿತಿ ನೀಡದೇ ಸಂಬಂದಪಟ್ಟ ಪಿಎಸ್ಸೈ ಅಥವ ಸರ್ಕಲ್ ಇನ್ಸ್ ಪೆಕ್ಟರ್ ಗೆ ಮಾಹಿತಿ ನೀಡಿ ಎಂದರು.
ಇನ್ನು ಇತ್ತೀಚೆಗೆ ರಾತ್ರಿ ವೇಳೆ ಪೊಲೀಸ್ ಬೀಟ್ ಬರುತ್ತಿಲ್ಲ ಎಂಬ ದೂರಿಗೆ ಕಡ್ಡಾಯವಾಗಿ ಬೀಟ್ ಮಾಡಲು ಸೂಚನೆ ನೀಡಿದರು.
ದಲಿತರ ಮೇಲೆ ದೌರ್ಜನ್ಯವಾದಾಗ ದೂರು ನೀಡಿದರೆ ಸ್ವತಃ ಪೊಲೀಸರೇ ದಲಿತರ ವಿರುದ್ದ ದೂರು ದಾಖಲಿಸುವಂತೆ ದೌರ್ಜನ್ಯಮಾಡಿದವರಿಗೆ ಪ್ರೇರೇಪಿಸುತ್ತಾರೆ. ಜನರನ್ನು ರಕ್ಷಿಸಬೇಕಾದ ಪೊಲೀಸರೇ ಈ ರೀತಿ ಮಾಡಿದರೆ ನಮಗೆ ನ್ಯಾಯ ಎಲ್ಲಿಂದ ಸಿಗುತ್ತೆ ಎಂಬ ದಲಿತ ಮುಖಂಡರ ವಾದಕ್ಕೆ, ಮುಂದಿನ ದಿನಗಳಲ್ಲಿ ಅಂತಹ ಯಾವುದೇ ಘಟನೆ ನಡೆಯದಂತೆ ನೋಡಿಕೊಳ್ಳುವುದು ಹಾಗೂ ದಲಿತರ ವ್ಯಾಜ್ಯಗಳನ್ನು ಬಗೆಹರಿಸಿ ಅವರಿಗೆ ಸೂಕ್ತ ರಕ್ಷಣೆ ನೀಡುವ ಕೆಲಸವನ್ನು ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಲಿದ್ದಾರೆ ಎಂದರು.
ನಗರಠಾಣೆ ಪಿಎಸ್ಸೈ ಅವಿನಾಶ್, ಗ್ರಾಮಾಂತರ ಠಾಣೆ ಪಿಎಸ್ಸೈ ಹರೀಶ್ಗೌಡ, ದಿಬ್ಬೂರಹಳ್ಳಿ ಠಾಣೆಯ ಪಿಎಸ್ಸೈ ರಂಜನ್ಕುಮಾರ್, ದಲಿತ ಮುಖಂಡರಾದ ಮುನೆಯ್ಯ, ದ್ಯಾವಕೃಷ್ಣ, ಎನ್.ಎ.ವೆಂಕಟೇಶ್, ದಡಂಘಟ್ಟ ತಿರುಮಲೇಶ್, ಲಕ್ಷ್ಮಿನಾರಾಯಣ, ಕೃಷ್ಣಮೂರ್ತಿ, ಸುರೇಶ್ ಹಾಜರಿದ್ದರು.
- Advertisement -
- Advertisement -
- Advertisement -







