ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕಶಾಲಾ ಆವರಣದಲ್ಲಿನ ಸ್ವಾಮಿವಿವೇಕಾನಂದ ವೇದಿಕೆಯಲ್ಲಿ ಸುಂದರಲಾಲ್ ಬಹುಗುಣ ಇಕೋಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಉತ್ತಮ ಪರ್ಯಾಯ ಆರೋಗ್ಯ ಕ್ರಮಗಳ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಪರ್ಯಾಯ ಚಿಕಿತ್ಸಕಿ, ಹೀಲಿಂಗ್ ತಜ್ಞೆ ಡಾ.ಅನ್ಷಿತಾ ಮಾತನಾಡಿದರು.
ಆರೋಗ್ಯವೇ ಮಾಹಾಭಾಗ್ಯ. ಲೌಕಿಕ ಸುಖಗಳು ಮನಸ್ಸಿಗೆ ಸುಖ, ಶಾಂತಿ, ನೆಮ್ಮದಿಯನ್ನು ಕೊಡುವುದಿಲ್ಲ. ಒತ್ತಡರಹಿತ ಬದುಕನ್ನು ನಮ್ಮದಾಗಿಸಿಕೊಳ್ಳುವ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಂಡು ಆಯಸ್ಸು ಹೆಚ್ಚಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ದೈಹಿಕ ಆರೋಗ್ಯಕ್ಕಾಗಿ ನಿಯಮಿತವಾದ ದಿನಚರಿಯುಳ್ಳ ವ್ಯಾಯಾಮ, ಶಾರೀರಿಕ ಚಟುವಟಿಕೆ, ನಿಯಮಿತ ಆಹಾರಸೇವನೆಯನ್ನು ಅನುಸರಿಸಬೇಕು. ಮಾನಸಿಕ ಸ್ವಾಸ್ಥ್ಯಕ್ಕಾಗಿ ಪರಸ್ಪರ ಸೌಹಾರ್ದಯುತ, ಸಹಕಾರ, ಶಾಂತಿ, ಸಾಮರಸ್ಯವನ್ನು ಕಾಯ್ದುಕೊಳ್ಳಬಲ್ಲ ಮನೋಗುಣವು ಬೆಳೆಸಿಕೊಳ್ಳಬೇಕು ಎಂದರು.
ಸುಂದರಲಾಲ್ ಬಹುಗುಣ ಇಕೋಕ್ಲಬ್ನ ಶಿಕ್ಷಕಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಮನಸ್ಸು ಮತ್ತು ದೇಹಗಳಲ್ಲಿನ ಗೌರವತತ್ವ ದೂರವಾಗಿ ದೀರ್ಘಾವಧಿಯ ಋಣಾತ್ಮಕ ಪರಿಣಾಮಗಳಾಗುತ್ತಿವೆ. ನಿತ್ಯಬಳಕೆಯ ಔಷಧಿಗಳ ಬಳಕೆಯಿಂದ ವ್ಯತಿರಿಕ್ತ ಪರಿಣಾಮ, ಪರಿಸರಮಾಲಿನ್ಯ, ಒತ್ತಡದ ಬದುಕು ಆರೋಗ್ಯವನ್ನು ಹಾಳುಮಾಡುತ್ತಿವೆ. ಪರ್ಯಾಯ ಆರೋಗ್ಯಕ್ರಮಗಳಿಂದಾಗಿ ನಿದ್ರಾಹೀನತೆ, ಬುದ್ಧಿಚುರುಕುತನ, ಸ್ಮರಣಶಕ್ತಿಯ ವೃದ್ಧಿ ಸಾಧ್ಯವಿದೆ ಎಂದರು.
ಆರೋಗ್ಯ, ಸ್ಮರಣಶಕ್ತಿ ವೃದ್ಧಿಯ ಬಗ್ಗೆ ಉಪಯುಕ್ತ ಮಾಹಿತಿಯನ್ನು ಹೇಳಲಾಯಿತು. ಪ್ರೀತಿ, ಶಾಂತಿ, ಸಾಮರಸ್ಯ ಕುರಿತ ಹಾಡುಗಳನ್ನು ಹಾಡಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ, ಮಾಜಿ ಸದಸ್ಯ ಬಚ್ಚೇಗೌಡ, ಮುಖ್ಯಶಿಕ್ಷಕಿ ಉಮಾದೇವಿ, ಪರ್ಯಾಯ ಚಿಕಿತ್ಸಾ ತಜ್ಞರಾದ ಕಲ್ಪನಾ, ಹರ್ಷವರ್ಧಿನಿ, ಎಸ್.ಎನ್.ಪ್ರಮೀಳಾದೇವಿ, ಜಿ.ವರುಣ್ರಾಜ್, ಶಿಕ್ಷಕ ಬಿ.ನಾಗರಾಜು, ಎ.ಬಿ.ನಾಗರಾಜ, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್ ಹಾಜರಿದ್ದರು.
- Advertisement -
- Advertisement -
- Advertisement -