ಮಾತೃ ಭಾಷೆಯ ಬಗ್ಗೆ ಅಭಿಮಾನ ಶೂನ್ಯರಾಗಿ, ಅನ್ಯ ಭಾಷೆಗಳನ್ನು ಪ್ರೀತಿಸುವ ಧೋರಣೆಯನ್ನು ಬದಿಗಿರಿಸಿ. ಕನ್ನಡ ಭಾಷೆಗೆ ನೀಡಬೇಕಾದ ಗೌರವ ನೀಡುವುದನ್ನು ಎಲ್ಲಿಯವರೆಗೆ ಕೊಡುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಭಾಷೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ತಹಶೀಲ್ದಾರ್ ಮನೋರಮಾ ತಿಳಿಸಿದರು.
ನಗರದಲ್ಲಿ ಸೋಮವಾರ ಸಮಾನ ಮನಸ್ಕರ ಹೋರಾಟ ಸಮಿತಿ ವತಿಯಿಂದ ತಾಲ್ಲೂಕು ಮಟ್ಟದ 60 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರಿ ಬಸ್ ನಿಲ್ದಾಣದ ಬಳಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ನಾವು ಮಾತೃಭಾಷೆಯಲ್ಲಿ ತಿಳಿಯುವಷ್ಟು, ಕಲಿಯುವಷ್ಟು ಬೇರೆ ಯಾವ ಭಾಷೆಯಲ್ಲೂ ತಿಳಿಯಲು ಸಾಧ್ಯವಿಲ್ಲ. ಕನ್ನಡ ನಾಡಿನ ಪ್ರಖ್ಯಾತ ಬರಹಗಾರರ ಕೃತಿಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ನಮ್ಮ ಭಾಷೆ, ಸಂಸ್ಕೃತಿಯನ್ನು ನಾವು ಬಳಸಿ ಬೆಳೆಸದೆ ಬೇರೆ ಯಾರು ತಾನೆ ಉಳಿಸಲು ಸಾಧ್ಯ ಎಂದು ಹೇಳಿದರು.
ನಾಡಿನ ಹಿರಿಮೆ ಗರಿಮೆಗಳನ್ನು ಸಾರುವ ಸ್ತಬ್ದ ಚಿತ್ರಗಳು, ವೇಷಭೂಷಣಗಳು, ಜಾನಪದ ಕಲಾ ಪ್ರದರ್ಶನ, ಮಂಗಳ ವಾದ್ಯಗಳೊಡನೆ ಭುವನೇಶ್ವರಿಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಮೆರವಣಿಗೆಗೆ ಚಾಲನೆ ನೀಡಿದ ಹಿರಿಯ ಕನ್ನಡಪರ ಹೋರಾಟಗಾರ ಖ.ರಾ.ಖಂಡೇರಾವ್, ‘ನಮ್ಮ, ಭಾಷೆ, ಪರಂಪರೆ, ಸಂಸ್ಕೃತಿ, ಮಣ್ಣು, ಕೃಷಿ ಮುಂತಾದ ನಮ್ಮತನಗಳನ್ನು ಮೆಲುಕು ಹಾಕುತ್ತಾ ಭಾಷೆಯನ್ನು ಉಳಿಸಿ ಬೆಳೆಸುವ ಬಗ್ಗೆ ಚಿಂತನೆ ನಡೆಸುವ ದಿನವಿದು. ಮುಂದಿನ ದಿನಗಳಲ್ಲಿ ಭಾಷೆಯ ಕುರಿತು ಎಲ್ಲರೂ ಒಗ್ಗೂಡಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಹೇಳಿದರು.
ತಾಲ್ಲೂಕಿನ ಹೊಸಪೇಟೆ, ಅಬ್ಲೂಡು, ಕುಂಬಿಗಾನಹಳ್ಳಿ, ಚೀಮಂಗಲ, ವೈ.ಹುಣಸೇನಹಳ್ಳಿ, ಮಳಮಾಚನಹಳ್ಳಿ, ಕುಂದಲಗುರ್ಕಿ, ಸಾದಲಿ, ಈ.ತಿಮ್ಮಸಂದ್ರ, ಬಶೆಟ್ಟಹಳ್ಳಿ, ನಾಗಮಂಗಲ, ಎಸ್.ದೇವಗಾನಹಳ್ಳಿ, ಮೇಲೂರು, ಮಳ್ಳೂರು, ಆನೂರು, ಪಲಿಚೇರ್ಲು, ದೇವರಮಳ್ಳೂರು ಮುಂತಾದ ಗ್ರಾಮ ಪಂಚಾಯತಿಗಳಿಂದ ಅಲಂಕೃತವಾದ ಟ್ರಾಕ್ಟರ್ಗಳು ಆಗಮಿಸಿದ್ದವು. ಪಂಚಾಯತಿಯ ವಿವಿಧ ಯೋಜನೆಗಳ ಭಿತ್ತಿಚಿತ್ರಗಳನ್ನು ಅಂಟಿಸಿಕೊಂಡು ಬಂದಿದ್ದ ಟ್ರಾಕ್ಟರ್ಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ವೀರಗಾಸೆ, ಗಾರುಡಿಗೊಂಬೆ ಮುಂತಾದ ಕಲಾತಂಡಗಳು ತಮಟೆ ನಾದದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಸಮಾನ ಮನಸ್ಕರ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹುಸೇನ್ಸಾಬ್, ತಾಲ್ಲೂಕು ಅಧ್ಯಕ್ಷ ರವಿಕುಮಾರ್, ಪ್ರತೀಶ್, ತಾದೂರು ಮಂಜುನಾಥ್, ಜಗದೀಶ್ಬಾಬು, ಅಕ್ರಂಪಾಷ, ಪುರುಷೋತ್ತಮ್, ಶ್ರೀಧರ್, ಹರ್ಷದ್, ಅಫ್ಜಲ್, ತ್ಯಾಗರಾಜ್, ಮುರಳಿ, ಭರತ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು
- Advertisement -
- Advertisement -
- Advertisement -
- Advertisement -