ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡಿದ್ದ ಗ್ರಾಮಸ್ಥರಿಗೆ ಆರೋಗ್ಯ ಇಲಾಖೆಯಿಂದ ಎಲ್.ಮುತ್ತುಗದಹಳ್ಳಿಯ ಅಂಗನವಾಡಿಯಲ್ಲಿ ಚಿಕಿತ್ಸೆ ಸೋಮವಾರವೂ ಮುಂದುವರೆದಿದ್ದು, ಪರಿಸ್ಥಿತಿ ಹತೋಟಿಗೆ ಬಂದಿರುವುದಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದ್ದಾರೆ.
“ಭಾನುವಾರ ಚಿಕಿತ್ಸೆ ಪಡೆದು ಹೋಗಿದ್ದ 104 ಮಂದಿಯಲ್ಲಿ 27 ಮಂದಿ ಸೋಮವಾರವೂ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಏಳು ಮಂದಿಗೆ ಸುಸ್ತು ಇದೆ ಎಂದಾಗ ಡ್ರಿಪ್ಸ್ ಹಾಕಿದ್ದೇವೆ. ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಹೋಗಿದ್ದ ಐವರಲ್ಲಿ ಮೂವರು ವಾಪಸಾಗಿದ್ದು, ಆರೋಗ್ಯದಿಂದಿದ್ದಾರೆ. ಇನ್ನಿಬ್ಬರ ಆರೋಗ್ಯವೂ ಸುಧಾರಿಸಿದ್ದು, ಸಂಜೆಗೆ ವಾಪಸಾಗಲಿದ್ದಾರೆ. ಹೊಸದಾಗಿ ಯಾರ ಆರೋಗ್ಯದಲ್ಲೂ ಏರುಪೇರಾಗದಿರುವುದು ಒಳ್ಳೆಯ ಬೆಳವಣಿಗೆ. ಗುರುವಾರದವರೆಗೂ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ತೆರೆದು ಮೇಲೂರು ವೈದ್ಯ ಡಾ.ರಮೇಶ್ ಅವರಿಂದ ಚಿಕಿತ್ಸೆ ಕೊಡಲಾಗುವುದು” ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.
“ಇನ್ನೂ ಒಂದು ವಾರದ ಮಟ್ಟಿಗೆ ಯಾರೂ ಮಾಂಸಾಹಾರ ಸೇವನೆ ಮಾಡಬಾರದು. ಮಸಾಲೆ ಪದಾರ್ಥ ತಿನ್ನಬೇಡಿ. ತಿಳಿ ಸಾರು, ತರಕಾರಿ, ಅನ್ನ ಬಿಸಿಬಿಸಿಯಾಗಿರುವಾಗಲೇ ತಿನ್ನಿ. ಶೌಚಾಲಯಕ್ಕೆ ಹೋಗಿ ಬಂದು ಸೋಪನ್ನು ಬಳಸಿ ಕೈತೊಳೆದುಕೊಳ್ಳಿ ಎಂದು ಗ್ರಾಮಸ್ಥರಿಗೆ ತಿಳಿಹೇಳಿದ್ದೇವೆ. ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತೆ ಕಾರ್ಯಕ್ರಮ ನಡೆಸಿದ್ದು, ಚರಂಡಿ ಹೂಳು ತೆಗೆದು ಬ್ಲೀಚಿಂಗ್ ಪುಡಿ ಹಾಕಿದ್ದಾರೆ” ಎಂದು ವಿವರಿಸಿದರು.
ತಹಶೀಲ್ದಾರ್ ಅರುಂಧತಿ ಎಲ್.ಮುತ್ತುಗದಹಳ್ಳಿಗೆ ಭೇಟಿ ನೀಡಿ ಗ್ರಾಮಸ್ಥರು ಹಾಗೂ ವೈದ್ಯರಿಂದ ಮಾಹಿತಿ ಪಡೆದರು. ಗ್ರಾಮ ಪಂಚಾಯಿತಿ ಪಿಡಿಒ ಅಂಜನ್ ಕುಮಾರ್, ಡಾ.ರಮೇಶ್ ಹಾಜರಿದ್ದರು.
- Advertisement -
- Advertisement -
- Advertisement -