ತಾಲ್ಲೂಕಿನ ಕಾಚಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಹಿಳಾ ದಿನಾಚರಣೆ ಹಾಗೂ ಅಮ್ಮನ ಕೈತುತ್ತು ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ವಿದ್ಯಾರ್ಥಿಗಳ ತಾಯಂದಿರು ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸಿಕೊಂಡು ತಂದಿದ್ದರು. ಎಲ್ಲ ಮಕ್ಕಳಿಗೂ ಕೈತುತ್ತನ್ನು ತಾಯಂದಿರು ನೀಡಿದರು. ಪುಟಾಣಿ ಮಕ್ಕಳಿಗೆ ತಿನ್ನಿಸಿದರು. ತರಹೇವಾರಿ ತಿಂಡಿ ತಿನಿಸುಗಳನ್ನು ಮಕ್ಕಳು ಖುಷಿಯಿಂದ ತಿಂದರು.
“ಹಿಂದೆ ಒಟ್ಟು ಕುಟುಂಬದಲ್ಲಿ ಮಕ್ಕಳನ್ನೆಲ್ಲಾ ಕೂರಿಸಿಕೊಂಡು ಕುಟುಂಬದ ಹಿರಿಯ ಮಹಿಳೆ ಕೈತುತ್ತನ್ನು ಕೊಡುತ್ತಿದ್ದರು. ಮಕ್ಕಳೆಲ್ಲಾ ಆಗ ಹೆಚ್ಚೆಚ್ಚು ತಿನ್ನುತ್ತಿದರು. ಈಗಿನ ತಲೆಮಾರಿಗೆ ಈ ಸಂಪ್ರದಾಯ ಮಾತೃಪ್ರೇಮ, ಬಾಂಧ್ಯವ್ಯ, ಸಮಾನತೆ ತಿಳಿಯಬೇಕು. ಆ ಮೂಲಕ ಅವರಲ್ಲಿ ತಾಯಿಯ ಬಗ್ಗೆ ಗೌರವ ಹೆಚ್ಚ್ಸಬೇಕು. ಎಂಬ ಉದ್ದೇಶದಿಂದ ಈ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡೆವು. ಗ್ರಾಮಸ್ಥರು, ಮಕ್ಕಳ ಪೋಷಕರು ಸಕಾರಾತ್ಮಕವಾಗಿ ಸ್ಪಂದಿಸಿದರು” ಎಂದು ಮುಖ್ಯಶಿಕ್ಷಕಿ ಆರ್.ರಾಜೇಶ್ವರಿ ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಕಸಾಪ ತಾಲ್ಲೂಕು ಘಟಕದ ವತಿಯಿಂದ ಭಾರತಾಂಬೆ ಮಹಿಳಾ ರೈತ ಒಕ್ಕೂಟದ ಅಧ್ಯಕ್ಷೆ ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಮ್ಮ ಶಿವಕುಮಾರ್, ಉಪಾಧ್ಯಕ್ಷ ಗೋಪಾಲಪ್ಪ, ಸದಸ್ಯೆ ಕಾಚಹಳ್ಳಿ ಮುನಿಯಮ್ಮ, ಎಸ್.ಡಿ.ಎಂ.ಸಿ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷೆ ನಾಗರತ್ನ, ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಅಂಗನವಾಡಿ ಕಾರ್ಯಕರ್ತೆ ಸುಜಾತ, ಗ್ರಾಮದ ರಾಜಣ್ಣ, ಬಿ.ಆರ್.ಪಿ. ಶಾರದಾಂಬ, ಸಿ.ಆರ್.ಪಿ. ಚಂದ್ರಶೇಖರ್, ಶಿಕ್ಷಕರಾದ ಜಗದೀಶ್, ಅರುಣ, ಮಂಜುನಾಥ್, ಕೆ.ಮುನಿಯಪ್ಪ, ಕೆ.ಸುಮ, ಮುಖ್ಯಶಿಕ್ಷಕಿ ಆರ್.ರಾಜೇಶ್ವರಿ, ಶಿಕ್ಷಕ ವಿ.ಚಂದ್ರಶೇಖರ್ ಹಾಜರಿದ್ದರು.
- Advertisement -
- Advertisement -
- Advertisement -