ಗ್ರಾಮ ಪಂಚಾಯತಿಗಳಲ್ಲಿ ನಡೆಯುವ ಸಾಕ್ಷರ ಭಾರತ್ ಕಾರ್ಯಕ್ರಮದಲ್ಲಿ ಪ್ರೇರಕರ ಪಾತ್ರ ಬಹು ಮುಖ್ಯ ಎಂದು ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ತುಕಾರಾಮ್ ತಿಳಿಸಿದರು.
ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸಾಕ್ಷರ ಭಾರತ್ ಕಾರ್ಯಕ್ರಮದಡಿ ಮುಖ್ಯ ತರಬೇತುದಾರರ ನಾಲ್ಕು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಬ್ಬರು ಪ್ರೇರಕರಲ್ಲಿ ಒಬ್ಬರು ಅಕ್ಷರ ಕಲಿಸಿದರೆ ಮತ್ತೊಬ್ಬರು ಕಲಿಕೆಯ ಅಭಿವೃದ್ಧಿಯತ್ತ ಗಮನವಹಿಸಬೇಕು. ಕೆಲಸವನ್ನು ಹಂಚಿಕೊಂಡು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದಲ್ಲಿ ಕಾರ್ಯಕ್ರಮದ ಉದ್ದೇಶ ಸಫಲವಾಗುತ್ತದೆ. ಕೇವಲ ಸಹಿ ಮಾಡಿದರಷ್ಟೆ ಕಲಿತರೆ ಅಕ್ಷರಸ್ಥರಾಗುವುದಿಲ್ಲ. ವ್ಯವಹಾರಕ್ಕೆ ಬೇಕಾಗುವಷ್ಟು ಅಕ್ಷರಜ್ಞಾನ ಸಿಕ್ಕಾಗ ಮಾತ್ರ ಅಕ್ಷರಸ್ಥರಾಗುತ್ತಾರೆ. ಸ್ವತಂತ್ರವಾಗಿ ಪತ್ರಿಕೆ, ಪುಸ್ತಕಗಳನ್ನು ಓದುವಂತೆ ಪ್ರೇರಕರು ತಯಾರು ಮಾಡಬೇಕು ಎಂದು ಹೇಳಿದರು.
ಪ್ರೊ.ಕೋಡಿರಂಗಪ್ಪ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಮುಖ್ಯತರಬೇತುದಾರರಿಗೆ ಮತ್ತು ಪ್ರೇರಕರಿಗೆ ಸಾಕ್ಷರತೆಯಲ್ಲಿನ ಅವರ ಪಾತ್ರದ ಕುರಿತಂತೆ ಸವಿವರವಾಗಿ ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ದಾವೂದ್ಪಾಷ, ಶಿವಪ್ಪ, ಕ್ಯಾತಪ್ಪ, ಶೈಲಜ, ತಾಲ್ಲೂಕು ಸಾಕ್ಷರತಾ ಸಂಯೋಜಕ ಟಿ.ವಿ.ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -