ಬೆಂಗಳೂರಿನ ಜಿಕೆವಿಕೆಯ ವಿಜ್ಞಾನಿ ಹಾಗೂ ಅಧಿಕಾರಿಗಳ ತಂಡ ಶೂಕ್ರವಾರ ತಾಲ್ಲೂಕಿನ ವಿವಿದೆಡೆ ಭೇಟಿ ನೀಡಿ ಕಳಪೆ ಬಿತ್ತನೆ ರಾಗಿಯ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ ರೈತರಿಂದ ಮಾಹಿತಿ ಪಡೆದು ರಾಗಿ ತೆನೆಯನ್ನು ಸಂಗ್ರಹಿಸಿ ತೆರಳಿದರು.
ಕೃಷಿ ಇಲಾಖೆಯಿಂದ ವಿತರಿಸಿದ್ದ ಬಿತ್ತನೆ ರಾಗಿಯನ್ನು ಬಿತ್ತಿದ ಹೊಲಗಳಲ್ಲಿ ರಾಗಿ ಬೆಳೆಯು ವಿಫಲವಾಗಿದೆ. ಸರಿಯಾಗಿ ತೆನೆ ಹೊಡೆಯದೆ ಬೆಳೆ ಕೈ ಕೊಟ್ಟಿದೆ.
ಒಂದು ತೆನೆ ಕಟಾವಿಗೆ ಬಂದಿದ್ದರೆ ಇನ್ನೊಂದು ತೆನೆಯಲ್ಲಿ ಇದೀಗ ರಾಗಿ ಹಾಲು ಕಟ್ಟುತ್ತಿದೆ. ಮತ್ತೊಂದು ತೆನೆಯಲ್ಲಿ ರಾಗಿ ಕಾಳೇ ಮೂಡಿಲ್ಲ. ಹೀಗೆ ಏರು ಪೇರಾಗಿದೆ.
ಹೀಗಾಗಿ ಬಿತ್ತನೆ ಬೀಜ ಕಳಪೆ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಸೂಚನೆಯಂತೆ ಜಿಕೆವಿಕೆಯ ವಿಜ್ಞಾನಿಗಳು ಹಾಗೂ ಕೃಷಿ ವಿಭಾಗದ ಹಿರಿಯ ಅಧಿಕಾರಿಗಳ ತಂಡ ಶಿಡ್ಲಘಟ್ಟ ತಾಲ್ಲೂಕಿನ ಹಲವು ಹೊಲಗಳಿಗೆ ಭೇಟಿ ನೀಡಿದರು.
ಈ ವೇಳೆ ಅಧಿಕಾರಿಗಳು, ವಿಜ್ಞಾನಿಗಳ ತಂಡಕ್ಕೆ ಮಾಹಿತಿ ನೀಡಿದ ರೈತರು, ಕೃಷಿ ಇಲಾಖೆಯಿಂದ ವಿತರಿಸಿದ ಬಿತ್ತನೆ ರಾಗಿಯನ್ನು ಬಿತ್ತಿದ ಹೊಲಗಳಲ್ಲಿ ಮಾತ್ರ ಬೆಳೆ ಕೈ ಕೊಟ್ಟಿದೆ. ಆದರೆ ಮನೆಯಲ್ಲಿದ್ದ ಬಿತ್ತನೆ ರಾಗಿ ಬಿತ್ತಿದ ಹೊಲಗಳಲ್ಲಿ ರಾಗಿ ಪೈರು ಚನ್ನಾಗಿ ಬೆಳೆದಿದ್ದು ರಾಗಿಯೂ ಸಿಗಲಿದೆ ಎಂದು ವಿವರಿಸಿದರು.
ಬಿತ್ತನೆ ರಾಗಿ ಕಳಪೆ ಆಗಿರುವುದೆ ಇದಕ್ಕೆ ಕಾರಣವಾಗಿದ್ದು ಕಳಪೆ ರಾಗಿ ಪೂರೈಸಿದ ಕಂಪನಿಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕು, ರೈತರಿಗೆ ಪರಿಹಾರ ನೀಡಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.
ರೈತರಿಂದ ಮಾಹಿತಿ ಪಡೆದ ತಂಡ, ಬಿತ್ತನೆ ರಾಗಿಯ ಪ್ಯಾಕೇಟ್, ಬಿಲ್ಲುಗಳು, ಬ್ಯಾಗುಗಳನ್ನು ಹಾಗೂ ವಿಫಲ ಆದ ರಾಗಿ ಪೈರನ್ನು ಸಂಗ್ರಹಿಸಿಕೊಂಡರು.
ಪ್ರಯೋಗಾಲಯಕ್ಕೆ ಕಳುಹಿಸಿ ಬಿತ್ತನೆ ರಾಗಿಯ ಕಳಪೆ ಬಗ್ಗೆ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ತಂಡದ ಅಧಿಕಾರಿಗಳು ತಿಳಿಸಿದರು.
ಜಿಕೆವಿಕೆಯ ಸಹ ವಿಸ್ತರಣಾ ನಿರ್ದೆಶಕ ಡಾ.ನಾರಾಯಣಗೌಡ, ರಾಗಿ ತಳಿ ತಜ್ಞ ಡಾ.ರವಿಶಂಕರ್, ಬೇಸಾಯ ಶಾಸ್ತ್ರಜ್ಞ ಡಾ.ಮುರಳಿ, ಜಂಟಿ ನಿರ್ದೇಶಕ ಮಲ್ಲಿಕಾರ್ಜುನ್, ಅಧಿಕಾರಿಗಳಾದ ಮುರಳೀಧರ್, ಪಂಕಜ, ಮಾಲತೇಶ್, ಗೋಪಾಲರಾವ್, ರೈತರಾದ ಶಿವಮೂರ್ತಿ, ಬೂದಾಳ ಮಂಜುನಾಥ್, ರಾಮಾಂಜಿ, ಕೃಷ್ಣಯ್ಯ, ಮೂರ್ತಿ, ವೆಂಕಟೇಶ್, ಮುನಿರೆಡ್ಡಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -