ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲು ಕಲ್ಪಿಸುವ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್ ಬೆಂಬಲಿಸಿ ಗುರುವಾರ ತಾಲ್ಲೂಕು ವಕೀಲರ ಸಂಘ ಕಲಾಪದಿಂದ ಹೊರಗುಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಗೌರವಾಧ್ಯಕ್ಷ ಎಂ.ಪಾಪಿರೆಡ್ಡಿ, ಡಾ.ಸರೋಜಿನಿ ಮಹಿಷಿ ವರದಿ ಬಗ್ಗೆ ಈಗಾಗಲೇ ಹಲವೆಡೆ ಗಂಭೀರ ಚಿಂತನೆ ನಡೆಡಿದೆ. ಹಲವು ವರ್ಷಗಳಿಂದ ಸರೋಜಿನಿ ಮಹಿಷಿ ವರದಿ ಸಂಪೂರ್ಣವಾಗಿ ಅನುಷ್ಠಾನ ಆಗದಿರುವುದರಿಂದ ಅದಕ್ಕಿರುವ ತೊಂದರೆಗಳೆಲ್ಲವನ್ನೂ ನಿವಾರಣೆ ಮಾಡಿ ನಮ್ಮ ಕನ್ನಡಿಗರಿಗೆ ಕೆಲಸ ಕೊಡುವುದಕ್ಕೆ ಗಂಭೀರ ಚಿಂತನೆ ಸರ್ಕಾರ ನಡೆಸಬೇಕೆಂದು ಒತ್ತಾಯಿಸಿದರು.
ಸರೋಜಿನಿ ಮಹಿಷಿ ವರದಿ ದಶಕಗಳಷ್ಟು ಹಳೆಯದ್ದು. ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ತಯಾರಿಸಲಾದ ವರದಿಯಿದು. ಕರ್ನಾಟಕದ ಸಾರ್ವಜನಿಕ ವಲಯ ಸಂಸ್ಥೆಗಳು, ಖಾಸಗಿ ಮತ್ತು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗಗಳಲ್ಲಿ ನಿರ್ದಿಷ್ಟ ಶೇಕಡಾವಾರು ಮೀಸಲಾತಿಯನ್ನು ಕನ್ನಡಿಗರಿಗೆ ಮಾತ್ರ ನೀಡಬೇಕೆಂದು ಸರೋಜಿನಿ ಮಹಿಷಿ ಸಮಿತಿ ಶಿಫಾರಸು ಮಾಡಿದೆ. ಕನ್ನಡ ನಾಡಿನಲ್ಲಿ ಹುಟ್ಟಿಬೆಳೆದವರಿಗೆ ಕೆಲಸದಲ್ಲಿ ಆದ್ಯತೆ ನೀಡಲೇಬೇಕು ಎಂದು ಆಗ್ರಹಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಎಸ್.ಎನ್.ಚಂದ್ರಶೇಖರ್, ಕಾರ್ಯದರ್ಶಿ ಬಿ.ಎಂ.ಲೋಕೇಶ್, ವಿ.ನಾಗೇಂದ್ರಬಾಬು, ಜಿ.ನಾಗರಾಜು, ರಾಮಕೃಷ್ಣ, ಸಿ.ಜಿ.ಭಾಸ್ಕರ್, ಪ್ರಭು, ಡಿ.ಸಿ.ಮಂಜುನಾಥ, ಕೃಷ್ಣಮೂರ್ತಿ, ಮೋಹನ್, ಎನ್.ಎಂ.ಮಂಜುನಾಥ್, ಜಿ.ಎ.ವೆಂಕಟೇಶ್ ಹಾಜರಿದ್ದರು.
- Advertisement -
- Advertisement -
- Advertisement -







