ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಹಿತಿ, ಅನುವಾದಕ ಧನಪಾಲ ನಾಗರಾಜಪ್ಪ ಅವರು ತೆಲುಗಿನಿಂದ ಅನುವಾದಿಸಿರುವ “ಗುಹೆಯಲ್ಲಿ ಒಂದು ದಿನ” ಎಂಬ ಮಕ್ಕಳ ಸಚಿತ್ರ ಕಥೆಯ ಪುಸ್ತಕವನ್ನು ಸೋಮವಾರ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್, “ಮಕ್ಕಳ ಸಾಹಿತ್ಯವು ಮಕ್ಕಳಿಗೆ ಸಂತೋಷ ನೀಡುವುದಷ್ಟೇ ಅಲ್ಲದೆ ಅರಿವಿನ ಜ್ಞಾನವನ್ನು ಪಡೆಯಲು ಸಹಕಾರಿಯಾಗಿದೆ. ಮಕ್ಕಳ ಸಾಹಿತ್ಯದಿಂದ ಸಂಸ್ಕೃತಿ, ಶಿಕ್ಷಣ, ಕುಟುಂಬ, ಪರಿಸರದಂತಹ ಅಮೂಲ್ಯವಾದ ಮೌಲ್ಯಯುತ ವಿಷಯಗಳನ್ನು ಮಕ್ಕಳ ಸಾಹಿತ್ಯವು ಒಳಗೊಂದಿರುತ್ತದೆ. ಮಕ್ಕಳ ಮಾನಸಿಕ, ಬೌದ್ಧಿಕ ಸಮಾಜಿಕ ಮತ್ತು ಭಾಷೆಯ ಬೆಳವಣಿಗೆಗೆ ಸಾಹಿತ್ಯ ಉಪಯುಕ್ತವಾಗಿದೆ. ಕಥೆಗಳು ಮಕ್ಕಳ ಆಲೋಚನಾ ಶಕ್ತಿಯನ್ನು ಬೆಳೆಸುತ್ತದೆ ಅಲ್ಲದೆ ಬದುಕುವ ವಿವೇಕವನ್ನು ಮೂಡಿಸುತ್ತದೆ. ಭಾವೈಕ್ಯತೆಯ ಭಾವನೆ ಮೂಡಿಸುವುದರ ಜೊತೆಗೆ ಮನರಂಜನೆಯನ್ನು ನೀಡುತ್ತವೆ” ಎಂದರು.
ಸಾಹಿತಿ ಅನುವಾದಕ ಧನಪಾಲ ನಾಗರಾಜಪ್ಪ ಮಾತನಾಡಿ, “ನಮ್ಮ ಬಾಲ್ಯದಲ್ಲಿದ್ದ ಸಮೃದ್ಧ ಜಗತ್ತು ಈಗಿನ ಮಕ್ಕಳಿಗೆ ಸಿಗುತ್ತಿಲ್ಲ. ಸುತ್ತಲಿನ ಪರಿಸರ ಹಾಳಾಗುತ್ತಿದೆ. ಕಾಡು ಕಾಡಾಗಿ ಉಳಿದಿಲ್ಲ, ಬಾವಿಗಳು ಬತ್ತುತ್ತಿವೆ, ಗಿಡಗಳು ಒಣಗಿಹೋಗಿವೆ. ಹಕ್ಕಿಗಳು ಕಾಣುತ್ತಿಲ್ಲ. ಇವುಗಳ ಕುರಿತು ಅರಿವು ಮೂಡಿಸುವಂಥ ಸಾಹಿತ್ಯ ರಚಿಸುವುದು ಇಂದಿನ ಸವಾಲಾಗಿದೆ. ಮಕ್ಕಳಿದ್ದಲ್ಲಿಗೆ ಹೋಗಿ ಅವರಿಗೆ ಆಸಕ್ತಿ ಹುಟ್ಟಿಸುವ ರೀತಿ ಕಥೆ ಹೇಳಿದರೆ, ಪುಸ್ತಕದ ಕುರಿತು ಹೇಳಿದರೆ ಅವರಲ್ಲಿ ಅಭಿರುಚಿ ಬೆಳೆಯುತ್ತದೆ. ಆ ಕಾರಣ ದಿಂದ ಈ ಶಾಲೆಯ ಸಹಕಾರದಿಂದ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಅನುವು ಮಾಡಿಕೊಟ್ಟಿದ್ದಕ್ಕೆ ಶಾಲೆಯ ಎಲ್ಲಾ ಮುಖ್ಯಸ್ಥರಿಗೆ ಧನ್ಯವಾದ” ಎಂದರು.
ಚಿತ್ರಕಲಾವಿದ ಗಂಗಾಧರ್ ಅಡ್ಡೇರಿ ಮಾತನಾಡಿ, “ಮಕ್ಕಳ ಸಾಹಿತ್ಯಕ್ಕೆ ಚಿತ್ರಗಳನ್ನು ರಚಿಸುವುದು ಒಂದು ಸವಾಲು. ಆದರೆ ಕಥೆಯ ತಿರುಳನ್ನು ಓದಿಕೊಂಡು ಚಿತ್ರಗಳನ್ನು ರಚಿಸುವುದಕ್ಕೆ ಏಕಾಗ್ರತೆ ಬಹಳ ಮುಖ್ಯವಾಗಿರುತ್ತದೆ. ಮಕ್ಕಳು ಚಿತ್ರಕಲೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಕಲಿಕೆಯ ಜೊತೆಗೆ ಚಿತ್ರಕಲೆ ಉತ್ತಮ ಹವ್ಯಾಸವಾಗಿದೆ” ಎಂದರು.
ವಿದ್ಯಾರ್ಥಿಗಳಾದ ಚರಣ್, ಶಿವಮೂರ್ತಿ,ನಿನಾದ್, ನವಿತ, ಪ್ರಜ್ವಲ್ ಅವರು ಪುಸ್ತಕದ ಬಗ್ಗೆ ಮಾತನಾಡಿದರು. ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಕೃಷ್ಣಪ್ಪ, ಶಿಕ್ಷಕರಾದ ಲೋಕೇಶ್, ನಾಗರಾಜ್, ದೇವರಾಜ್, ಎಸ್. ಕಲಾಧರ್, ಶ್ರೀಕಾಂತ್, ಅಶ್ವಿನಿ ಧನಪಾಲ್ ಹಾಜರಿದ್ದರು.
- Advertisement -
- Advertisement -
- Advertisement -