ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಪಟಾಲಮ್ಮ ಮತ್ತು ವೀರಸೊಣ್ಣಮ್ಮ ದೇವಿಯವರ ೨೩ನೇ ವರ್ಷದ ರಥೋತ್ಸವ ಮತ್ತು ಉಟ್ಲು ಮಹೋತ್ಸವವನ್ನು ಸೋಮವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರಧಾನ ಹೋಮ, ಮಹಾಕುಂಬಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು. ಗ್ರಾಮದ ಕರಗದ ಮನೆ ಬಳಿಯಿಂದ ರಥೋತ್ಸವ ಪ್ರಾರಂಭವಾಗಿ ದೇವಸ್ಥಾನದವರೆಗೂ ವಿವಿಧ ವಾದ್ಯವೃಂದದ ಸಮೇತ ತರಲಾಯಿತು. ರಥೋತ್ಸವದ ಸಂದರ್ಭದಲ್ಲಿ ವಿವಿಧ ವೇಷಭೂಷಣಗಳಿಂದ ಕೂಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕ್ಷೀರ ಉಟ್ಲು ಹಾಗೂ ಕಾಯಿ ಉಟ್ಲು ಮಹೋತ್ಸವವನ್ನು ನಡೆಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಗ್ರಾಮಸ್ಥರಿಂದ ಪಾನಕ ಹಾಗೂ ಮಜ್ಜಿಗೆ ಬಂಡಿಯನ್ನು ವ್ಯವಸ್ಥೆ ಮಾಡಿದ್ದು, ಭಕ್ತರಿಗೆಲ್ಲಾ ವಿತರಿಸಲಾಯಿತು. ದೇವರಿಗೆ ಅರ್ಪಿಸಿರುವ ಬೆಲೆ ಬಾಳುವ ಸೀರೆಗಳನ್ನು ಮಾರಾಟಕ್ಕಿಡಲಾಗಿದ್ದು, ಅದನ್ನು ಕೊಳ್ಳಲು ಮಹಿಳೆಯರು ಮುಗಿಬಿದ್ದಿದ್ದರು.
ತಾಲ್ಲೂಕಿನ ಚೀಮನಹಳ್ಳಿ, ಗುಡಿಹಳ್ಳಿ, ಅಬ್ಲೂಡು, ಶೆಟ್ಟಿಹಳ್ಳಿ, ಮಲ್ಲಹಳ್ಳಿ, ಕೋಟಹಳ್ಳಿ, ಕೆಂಪನಹಳ್ಳಿ, ಚಾಗೆ, ತಾತಹಳ್ಳಿ, ದೇವರಮಳ್ಳೂರು, ತಲದುಮ್ಮನಹಳ್ಳಿ, ಸೊಣ್ಣೇನಹಳ್ಳಿ, ಅಮ್ಮನಲ್ಲೂರು, ಬೂದಾಳ, ವೀರಾಪುರ, ಇದ್ಲೂಡು, ಕುತ್ತಾಂಡಹಳ್ಳಿ, ಹನುಮಂತಪುರ, ಹಂಡಿಗನಾಳ, ಎಲ್.ಮುತ್ತುಗದಹಳ್ಳಿ, ಪೆಯಿಲಹಳ್ಳಿ, ಎಲ್ಲಹಳ್ಳಿ, ಕೊಂಡೇನಹಳ್ಳಿ, ಪರಸದಿನ್ನೆ, ರಾಮಚಂದ್ರಹೊಸೂರು, ಲಕ್ಕಹಳ್ಳಿ, ಹರಳಹಳ್ಳಿ, ಹಿರೇಬಲ್ಲ, ತಾದೂರು, ಆನೂರು, ತಿಪ್ಪೇನಹಳ್ಳಿ, ತಳಗವಾರ ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -