ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಸುಂದರಲಾಲ್ ಬಹುಗುಣ ಇಕೋಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಪವಾಡಭಂಜಕ ಡಾ.ಹುಲಿಕಲ್ ಕೆ.ನಟರಾಜು ಮಾತನಾಡಿದರು.
ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿರುವ ಮೂಡನಂಬಿಕೆಗಳ ಹಿಂದಿರುವ ವೈಜ್ಞಾನಿಕ ಸತ್ಯಗಳ ಅರಿವನ್ನು ವಿದ್ಯಾರ್ಥಿ ದಿಸೆಯಿಂದ ಮೂಡಿಸುವ ಮೂಲಕ ಮಕ್ಕಳಲ್ಲಿ ವಿಜ್ಞಾನದ ಬೆಳಕು ಚೆಲ್ಲಬೇಕು ಎಂದು ಅವರು ತಿಳಿಸಿದರು.
ಮೌಡ್ಯಮುಕ್ತ ಸಮಾಜದ ನಿರ್ಮಾಣ ಇಂದಿನ ಅನಿವಾರ್ಯವಾಗಿದ್ದು, ವಿದ್ಯಾರ್ಥಿದಿಸೆಯಿಂದಲೇ ವೈಜ್ಞಾನಿಕ ಸತ್ಯಾಸತ್ಯತೆಗಳನ್ನು ಅರಿಯಲು ಮಾರ್ಗದರ್ಶನ ನೀಡಬೇಕು. ಪರಿಸರನಾಶದ ಬಗ್ಗೆ ಜಾಗೃತಿಮೂಡಿಸಿ ಮರಗಳನ್ನು ಹೆಚ್ಚೆಚ್ಚು ಬೆಳೆಸುವಂತಾಗಬೇಕು. ಮೋಸಹೋಗುವವರು ಇರುವವರೆಗೂ ಮೋಸಮಾಡುವ ಜನರಿರುತ್ತಾರೆಂಬ ಸತ್ಯವನ್ನು ಅರಿಯಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಜೆ.ಎನ್.ನಾಗರಾಜು ಮಾತನಾಡಿ, ದೇವರು, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅಮಾನವೀಯ ಆಚರಣೆಗಳಿಗೆ ಕಡಿವಾಣ ಬೀಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜದಲ್ಲಿ ನಡೆಯುವ ಮೂಢನಂಬಿಕೆ ಹಾಗು ಪವಾಡಗಳ ಹಿಂದಿನ ರಹಸ್ಯಗಳನ್ನು ಬಯಲುಮಾಡಿ ಜಾಗೃತಿ ಮೂಡಿಸಿದ ಹುಲಿಕಲ್ ನಟರಾಜು ಅವರನ್ನು ಸನ್ಮಾನಿಸಲಾಯಿತು.
ಅಕ್ಷರದಾಸೋಹ ಸಹಾಯಕನಿರ್ದೇಶಕ ಆಂಜನೇಯ, ಬಿಜೆಪಿ ಮುಖಂಡ ಶ್ರೀನಿವಾಸ್, ಸುಂದರಲಾಲ್ ಬಹುಗುಣ ಇಕೋಕ್ಲಬ್ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಎಸ್ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ ಉಪಾಧ್ಯಕ್ಷ ಜಗದೀಶ್, ಸದಸ್ಯೆ ವಿನುತಾ, ಗ್ರಾಮ ಪಂಚಾಯಿತಿ ಸದಸ್ಯ ಶಿವಶಂಕರಪ್ಪ, ಎಂಪಿಸಿಎಸ್ ಅಧ್ಯಕ್ಷ ಮಂಜುನಾಥ್ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







