Chikkadasarahalli, Sidlaghatta Taluk : ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸರಹಳ್ಳಿ ಗ್ರಾಮದ ಗುಡ್ಡದ ಮೇಲಿರುವ ಮುಜರಾಯಿ ಇಲಾಖೆಗೆ ಸೇರಿದ ಬ್ಯಾಟರಾಯಸ್ವಾಮಿ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಹುಂಡಿ ಒಡೆದು ₹50 ಸಾವಿರಕ್ಕೂ ಅಧಿಕ ಹಣ ದೋಚಿಕೊಂಡು ಪರಾರಿಯಾಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಬೆಳಿಗ್ಗೆ ದೇವಸ್ಥಾನಕ್ಕೆ ಬಂದ ಸ್ಥಳೀಯರು ಕಳ್ಳತನ ನಡೆದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಗಗನಸಿಂಧು ಹಾಗೂ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪಿ.ಎಸ್.ಐ ಸುನೀಲ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇವಸ್ಥಾನದ ಬಾಗಿಲು ಹಾಗೂ ಹುಂಡಿಯನ್ನು ಪರಿಶೀಲಿಸಿರುವ ಪೊಲೀಸರು, ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಭ್ಯವಿರುವ ಸುಳಿವುಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ.
ಈ ಹಿಂದೆಯೂ ಕಳ್ಳತನ, ಶಾಶ್ವತ ಭದ್ರತೆ ಇರಲಿಲ್ಲ
ದೇವಸ್ಥಾನದಲ್ಲಿ ಈ ಹಿಂದೆಯೂ ಕಳ್ಳತನ ಪ್ರಕರಣಗಳು ನಡೆದಿರುವ ಬಗ್ಗೆ ಮಾಹಿತಿ ಇದೆ ಎಂದು ತಹಶೀಲ್ದಾರ್ ಗಗನಸಿಂಧು ತಿಳಿಸಿದರು. ಐದಾರು ವರ್ಷಗಳ ಹಿಂದೆಯೂ ಇದೇ ದೇವಸ್ಥಾನದಲ್ಲಿ ಕಳ್ಳತನ ನಡೆದಿತ್ತು. ಆಗ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳ ಕೇಬಲ್ಗಳು ಕೋತಿಗಳ ಕಾಟದಿಂದ ಹಾನಿಗೊಳಗಾಗಿದ್ದವು ಎಂದು ಅವರು ವಿವರಿಸಿದರು.
ದೇವಸ್ಥಾನದಲ್ಲಿ ಪದೇ ಪದೇ ಕಳ್ಳತನ ನಡೆದಿದ್ದರೂ ಶಾಶ್ವತ ಭದ್ರತಾ ವ್ಯವಸ್ಥೆ ಕಲ್ಪಿಸದಿರುವ ಬಗ್ಗೆ ಚಿಕ್ಕದಾಸರಹಳ್ಳಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವಸ್ಥಾನಕ್ಕೆ ಸೂಕ್ತ ಭದ್ರತೆ ಒದಗಿಸುವುದರ ಜತೆಗೆ ಹಿಂದಿನ ಕಳ್ಳತನ ಪ್ರಕರಣಗಳನ್ನೂ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಪತ್ತೆಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ.
214 ದೇವಸ್ಥಾನಗಳಿಗೆ ಭದ್ರತೆ ಭರವಸೆ
ಕೃತ್ಯ ಎಸಗಿರುವವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಗಗನಸಿಂಧು ತಿಳಿಸಿದರು. ತಾಲ್ಲೂಕಿನ 214 ಮುಜರಾಯಿ ದೇವಸ್ಥಾನಗಳ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದೂ ಅವರು ಹೇಳಿದರು. ಕೇಬಲ್ಗಳಿಗೆ ಹಾನಿಯಾಗದಂತೆ ಪರ್ಯಾಯ ಹಾಗೂ ಪರಿಣಾಮಕಾರಿ ಭದ್ರತಾ ವ್ಯವಸ್ಥೆ ಅಳವಡಿಸುವ ಕುರಿತು ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
In English: Thieves broke into the Muzrai-department Sri Byatarayaswamy Temple atop the Chikkadasarahalli hill late Saturday night, smashed the donation hundi, and fled with over ₹50,000. Tahsildar Gaganasindhu and police from Sidlaghatta Rural station are investigating, using local leads and CCTV footage. The temple has had repeated thefts before — a previous incident’s CCTV cables were damaged by monkeys and never properly repaired — prompting villager frustration over the lack of permanent security. The tahsildar announced a security upgrade push covering all 214 Muzrai temples in the taluk.
ಬ್ಯಾಟರಾಯಸ್ವಾಮಿ ದೇವಾಲಯದ ಇತಿಹಾಸ ಮತ್ತು ಬ್ರಹ್ಮರಥೋತ್ಸವದ ಬಗ್ಗೆ ಈ ವರದಿಯನ್ನೂ ನೋಡಿ.
ಇದೇ ದೇವಾಲಯದ ಬ್ರಹ್ಮರಥೋತ್ಸವ ಮತ್ತು ತೆಪ್ಪೋತ್ಸವ ಕುರಿತ ವರದಿಯನ್ನೂ ನೋಡಿ.








