ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ವತಿಯಿಂದ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ವೇದಿಕೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್ ಮಾತನಾಡಿದರು.
ಸಾಧನೆಯ ಹಾದಿ ಸುಗಮವಲ್ಲ. ಛಲವಿದ್ದವರು ಮಾತ್ರ ಆ ಹಾದಿಯಲ್ಲಿ ಸಾಗಲು ಸಾಧ್ಯ. ಮರಳಿ ಯತ್ನವ ಮಾಡು ಎಂಬ ಮಾತಿನಂತೆ ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಬಲ್ಲದು ಎಂದು ಅವರು ತಿಳಿಸಿದರು.
ಒಳ್ಳೆಯ ಗುಣವನ್ನು ಯಾರಲ್ಲೇ ಕಂಡರೂ ಗೌರವಿಸಿ, ಅನುಸರಿಸಬೇಕು. ಗುಣಕ್ಕೆ ಮತ್ಸರ ಬೇಡ. ಪೋಷಕರು ಮಕ್ಕಳಿಗೆ ಒತ್ತಡ ಹಾಕದೇ ಅವರ ವಿಷಯಾಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಿ. ನನ್ನ ಬದುಕಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ್ದರೂ ಮುಂದೆ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದಪದಕವನ್ನು ಪಡೆದೆ. ಡಾ.ಎಚ್.ನರಸಿಂಹಯ್ಯ ಅವರಿಂದ ಸ್ವಾವಲಂಬನೆ, ಮಾನವೀಯ ಹಾಗೂ ಗಾಂಧೀ ತತ್ವಗಳನ್ನು ಕಲಿತೆ. ಮೊದಲು ಪತ್ರಕರ್ತನಾಗಿದ್ದು, ನಂತರ ಯು.ಪಿ.ಎಸ್.ಸಿ ಪರೀಕ್ಷೆ ಪಾಸ್ ಮಾಡಿ ಐ.ಪಿ.ಎಸ್ ಆದೆ. ನನ್ನ ಬದುಕಿನ ಚಿತ್ರಣ ನೀಡುತ್ತಿರುವ ಉದ್ದೇಶ ನಿರಂತರ ಪ್ರಯತ್ನ ಮತ್ತು ಛಲದಿಂದ ಸಾಧಕರಾಗಲು ಸಾಧ್ಯ ಎಂಬುದನ್ನು ಈಗಿನ ವಿದ್ಯಾರ್ಥಿಗಳಿಗೆ ತಿಳಿಸುವುದಾಗಿದೆ ಎಂದು ನುಡಿದರು.
ಬಸವನಗುಡಿ ಕ್ಷೇತ್ರದ ವಿಧಾನಸಭಾ ಸದಸ್ಯ ರವಿಸುಬ್ರಮಣ್ಯ ಮಾತನಾಡಿ, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಬ್ರಾಹ್ಮಣ ಸಮುದಾಯದ ಆಶಯದಂತೆ ಈ ದಿನ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ವತಿಯಿಂದ ಎಲ್ಲಾ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುತ್ತಿರುವುದು ಅಭಿನಂದನೀಯ. ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗಲೆಂದು ವಿವಿಧ ಕ್ಷೇತ್ರಗಳ ಸಾಧಕರನ್ನು ಸಹ ಕರೆಸಿ ಸನ್ಮಾನಿಸಲಾಗುತ್ತಿದೆ. ಸಾಧಕರಿಂದ ಪ್ರೇರಣೆ ಪಡೆಯಿರಿ. ಮಾರ್ಗದರ್ಶನ ಪಡೆಯಿರಿ, ಅನುಕರಣೆ ಮಾಡಿ. ಗುರಿಯೆಡೆಗೆ ಸದಾ ಕನಸನ್ನು ಕಾಣಿ. ಪ್ರಯತ್ನ ಬಿಡದಿರಿ. ಕೀಳರಿಮೆಯಿಂದ ಹೊರಬನ್ನಿ. ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ ಮತ್ತು ನೈತಿಕ ಮೌಲ್ಯ ಇರಬೇಕು. ತಂದೆ ತಾಯಿ ಗುರುಗಳು ಹೆಮ್ಮೆ ಪಡುವ ಸಾಧನೆ ಮಾಡಬೇಕು. ವಿದ್ಯಾರ್ಥಿ ಜೀವನ ತಪಸ್ಸಿದ್ದಂತೆ. ವಿದೇಶಿ ವಿದ್ಯಾರ್ಥಿಗಳು ನಮ್ಮ ದೇಶದಲ್ಲಿ ಬಂದು ಓದುವ ವಾತಾವರಣ ಮುಂದಿನ ದಿನಗಳಲ್ಲಿ ಆಗಬೇಕೆಂದು ನಮ್ಮ ಪ್ರಧಾನಿಗಳು ಕಾರ್ಯಯೋಜನೆ ಹಮ್ಮಿಕೊಂಡಿದ್ದಾರೆ. ಮುಂದಿನ ಸುವರ್ಣಕಾಲಕ್ಕೆ ವಿದ್ಯಾರ್ಥಿಗಳು ಸನ್ನದ್ಧರಾಗಿ ಎಂದರು.
ಬೆಳಗ್ಗೆ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಪ್ಪತ್ತಮೂರು ಮಂದಿ ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಜನಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಎನ್.ಶ್ರೀನಿವಾಸಮೂರ್ತಿ, ಡಾ.ಡಿ.ಟಿ.ಸತ್ಯನಾರಾಯಣರಾವ್, ಬಿ.ಎನ್.ಸುಧಾಕರ್, ಪಿ.ಶ್ರೀಪತಿ ಮತ್ತು ಬಿ.ಕೆ.ರಮೇಶ್ ಅವರನ್ನು ಸನ್ಮಾನಿಸಲಾಯಿತು.
ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್, ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎಸ್.ಅಟ್ಟೂರು ವೆಂಕಟೇಶ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ಎಂ.ವಾಸುದೇವರಾವ್, ಎ.ಎಸ್.ರವಿ, ವಿ.ಕೃಷ್ಣ, ಎನ್.ಶ್ರೀಕಾಂತ್, ಎಸ್.ಸತೀಶ್, ಎಚ್.ವಿ.ನಾಗೇಂದ್ರ, ಪಿ.ಶ್ರೀಕಾಂತ್, ಎಸ್.ಆರ್.ಸಕಲೇಶಕುಮಾರ್, ನಗರಸಭಾ ಸದಸ್ಯೆ ಚಿತ್ರಾ ಮನೋಹರ್, ಲಕ್ಷ್ಮೀನಾರಾಯಣ್ ಹಾಜರಿದ್ದರು.
- Advertisement -
- Advertisement -
- Advertisement -







