ತಾಲ್ಲೂಕಿನ ಕನ್ನಮಂಗಲದಲ್ಲಿ “ಮಕ್ಕಳ ಹಬ್ಬದ” ಪ್ರಯುಕ್ತ ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸರ್ಕಾರಿ ಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿದರು.
ರಕ್ತದಾನದಿಂದ ಮತ್ತೊಬ್ಬರ ಪ್ರಾಣ ಉಳಿಸುವ ಜತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ. ಈಗಾಗಲೇ ಶಿಡ್ಲಘಟ್ಟ ನಗರದಲ್ಲಿ ಒಂದು ಸಾವಿರ ಯೂನಿಟ್ ಗೂ ಹೆಚ್ಚು ರಕ್ತ ಸಂಗ್ರಹಿಸುವ ಮೂಲಕ ಮಾನವೀಯತೆಯನ್ನು ಪ್ರದರ್ಶಿಸಿದ್ದೇವೆ ಎಂದು ಅವರು ತಿಳಿಸಿದರು.
ರಕ್ತದ ಅಗತ್ಯ ಉಂಟಾದಾಗ ಜಾತಿ, ಕೋಮುಗಳನ್ನು ಲೆಕ್ಕಹಾಕುವುದಿಲ್ಲ. ಅಗತ್ಯ ಇರುವವರಿಗೆ ರಕ್ತ ನೀಡಿದರೆ ಜೀವ ಉಳಿಸಿದ ಭಾಗ್ಯ ದೊರೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಕ್ತದಾನ ಮಾಡಲು ಮುಂದಾಗಬೇಕು. ವೈದ್ಯಕೀಯ ಚಿಕಿತ್ಸೆಗಳು ದುಬಾರಿಯಾಗುತ್ತಿರುವ ದಿನಗಳಲ್ಲಿ ಗ್ರಾಮಗಳಿಗೆ ಬಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುವುದು ಉಪಯುಕ್ತವಾಗಿದೆ. ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
45 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ರಕ್ತದಾನಿಗಳಿಗೆ ಪ್ರಶಂಸಾಪತ್ರವನ್ನು ನೀಡಿದರು. ಗ್ರಾಮಸ್ಥರು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಚಿಕಿತ್ಸೆ ಪಡೆದರು.
ಭಾರತೀಯ ರೆಡ್ ಕ್ರಾಸ್ ಸೊಸೈಟಿ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಮುಖ್ಯ ಶಿಕ್ಷಕ ಚೌಡರೆಡ್ಡಿ, ವೈದ್ಯರಾದ ಡಾ.ಮಂಜುನಾಥಪ್ರಸಾದ್, ಡಾ.ಇವಾನ್, ಡಾ.ಅಪರ್ಣ, ಡಾ.ನಿಪಾನ್, ಡಾ.ಸ್ನೇಹ, ಯಲಹಂಕದ ಕೃಷ್ಣದೇವರಾಯ ಡೆಂಟಲ್ ಕಾಲೇಜಿನ ವೈದ್ಯರು, ಮಂಜು ನೇತ್ರಾಲಯದ ವೈದ್ಯರು ಹಾಜರಿದ್ದರು.