ಸಾಹಿತ್ಯ, ಸಂಸ್ಕೃತಿಯನ್ನೊಳಗೊಂಡ ಕಾರ್ಯಕ್ರಮಗಳಿಂದ ಸಂಸ್ಕಾರ, ಅಭಿರುಚಿ, ಪರಸ್ಪರ ಸಹೋದರತೆಯ ಭಾವನೆ ಮೂಡುತ್ತದೆ ಎಂದು ಆನೂರು ಎಸ್.ಎನ್.ಕ್ರಿಯಾ ಟ್ರಸ್ಟ್ನ ಅಧ್ಯಕ್ಷ ಆಂಜಿನಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಆನೂರು ಗ್ರಾಮದ ಲತಾದೇವರಾಜ್ ಅವರ ಮನೆಯಲ್ಲಿ ಸೋಮವಾರ ಸಂಜೆ ತಾಲ್ಲೂಕು ವಚನ ಸಾಹಿತ್ಯ ಪರಿಷತ್ನಿಂದ ನಡೆದ ಮನೆ ಅಂಗಳದಲ್ಲಿ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಪರವಾದ ಯಾವುದೆ ಕಾರ್ಯಕ್ರಮಗಳು ನಗರಕ್ಕೆ ಸೀಮಿತ ಆಗದೆ ಗ್ರಾಮೀಣ ಭಾಗಕ್ಕೂ ವಿಸ್ತರಿಸಬೇಕಿದೆ. ಇದರಿಂದ ಎಲ್ಲ ಕಡೆ ಕನ್ನಡದ ವಾತಾವರಣ ಮೂಡಲು ಸಾಧ್ಯವಾಗಲಿದೆ ಎಂದರು.
ಅದರಲ್ಲೂ ಸಾಹಿತ್ಯ ಎಂದ ಮಾತ್ರಕ್ಕೆ ಕತೆ, ಕವನಗಳ ರಚನೆ, ಸಾಹಿತ್ಯ ರಚನೆ ಎಂದು ಭಾವಿಸಬೇಕಿಲ್ಲ. ಪುಸ್ತಕ ಓದುವುದು, ಬರೆಯುವುದು, ನಮ್ಮ ಮಾತೃ ಭಾಷೆಯನ್ನು ಮನೆಯಲ್ಲೂ, ವ್ಯವಹಾರದಲ್ಲೂ ಬಳಸುವುದು ಸಹ ಸಾಹಿತ್ಯವೇ ಆಗಿದೆ ಎಂದರು.
ವಚನ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಸಿ.ಬಿ.ಹನುಮಂತಪ್ಪ ಮಾತನಾಡಿ, ಬಸವಣ್ಣ ಸೇರಿದಂತೆ ಅನೇಕ ವಚನಕಾರರು ತಮ್ಮ ಬದುಕು ಹೇಗಿರಬೇಕು, ನಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದರ ಬಗ್ಗೆ ವಚನಗಳ ಮೂಲಕ ವಿವರಿಸಿದ್ದಾರೆ.
ಅವರ ವಚನಗಳನ್ನು ಅರ್ಥ ಮಾಡಿಕೊಂಡು ಅದರಂತೆ ನಾವು ಬದುಕಿದರೆ ನಾವೂ ಚೆಂದ, ನಮ್ಮ ಅಕ್ಕ ಪಕ್ಕದವರ ಬದುಕು ಚೆಂದವಾಗುತ್ತದೆ. ಇದರಿಂದ ಇಡೀ ಸಮಾಜವೇ ಸುಖ ಶಾಂತಿ ನೆಮ್ಮದಿಯ ಬದಕು ನಡೆಸುವಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಯುದ್ದ, ತಾಯಿಯ ಮಗುವಿನ ಪ್ರೀತಿ, ಕುಟುಂಬ ವ್ಯವಸ್ಥೆ, ಮರೆಯಾಗುತ್ತಿರುವ ಮಾನವೀಯತೆ, ಕಣ್ಣು ಮುಚ್ಚಿರುವ ನ್ಯಾಯ ವ್ಯವಸ್ಥೆ, ಇಲ್ಲವಾಗುತ್ತಿರುವ ಸಹೋದರತೆ, ಹಣ ದಾಹ, ಮುಂತಾದ ಸಾಮಾಜಿಕ ವಿಚಾರಗಳ ಬಗ್ಗೆ ಕವನಗಳನ್ನು ಕವಿಗಳು ವಾಚಿಸಿದರು.
ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮ ನಡೆಸಲು ಸ್ಥಳಾವಕಾಶ ಮಾಡಿಕೊಟ್ಟ ದೇವರಾಜ್ ದಂಪತಿಗಳನ್ನು ವಚನ ಸಾಹಿತ್ಯ ಪರಿಷತ್ನಿಂದ ಗೌರವಿಸಲಾಯಿತು.
ವಚನ ಸಾಹಿತ್ಯ ಪರಿಷತ್ನ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಹಸಿರು ಸೇನೆ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಎಸ್ಎಫ್ಸಿಎಸ್ ಬ್ಯಾಂಕ್ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಮಳ್ಳೂರು ಹರೀಶ್, ನಾರಾಯಣಸ್ವಾಮಿ, ಚುಟುಕು ಸಾಹಿತ್ಯ ಶಿಕ್ಷಕ ಕೆಂಪಣ್ಣ, ಯುವ ಸೇನೆಯ ಜೆ.ಎಸ್.ವೆಂಕಟಸ್ವಾಮಿ, ಬಿ.ನಾರಾಯಣಪ್ಪ ಹಾಜರಿದ್ದರು.
- Advertisement -
- Advertisement -
- Advertisement -
- Advertisement -