ಮಾವು ಬೆಳೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಹೆಚ್ಚಿನ ಲಾಭ ಪಡೆಯಲು ಉತ್ತೇಜಿಸುವ ಸಲುವಾಗಿ ಬೆಳೆಗಾರರಿಗೆ ಬೇಸಾಯ ಕ್ರಮಗಳ ಕುರಿತು ಕಾರ್ಯಾಗಾರವನ್ನು ಮಾಡಲಾಗುತ್ತಿದೆ ಎಂದು ಮಾವು ಬೆಳಗಾರರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ತಿಳಿಸಿದರು.
ತಾಲ್ಲೂಕಿನ ಗೊರಮಿಲ್ಲಹಳ್ಳಿ ಗ್ರಾಮದ ದೊಡ್ಡಮುನಿಯಮ್ಮನವರ ತೋಟದಲ್ಲಿ ಶನಿವಾರ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಬೆಂಗಳೂರು ಮತ್ತು ಮಾವು ಅಭಿವೃದ್ಧಿ ಕೇಂದ್ರ ಚಿಂತಾಮಣಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಾವಿನಲ್ಲಿ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತಾಂತ್ರಿಕ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಈಗೀಗ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದೆ. ಮಾವಿನಲ್ಲಿ ವಿವಿಧ ಮಾದರಿಯ ತಳಿಗಳಿದ್ದು ಈ ಹಣ್ಣುಗಳಿಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ. ಮಾವು ರಫ್ತು ಮಾಡಲು ಇರುವ ಅವಕಾಶವನ್ನು ಬಳಸಿಕೊಳ್ಳಬೇಕಿದೆ. ಆಧುನಿಕ ತಂತ್ರಜ್ಞಾನ ಪ್ರಯೋಜನ ಪಡೆದು ಯಾವ ಮಾದರಿ ಬೆಳೆ ಬೆಳೆದರೆ ಹೆಚ್ಚು ಇಳುವರಿ ಪಡೆಯಬಹುದು ಹಾಗೂ ಆರ್ಥಿಕವಾಗಿ ಮುಂದೆ ಬರಬಹುದು ಎಂಬ ಬಗ್ಗೆ ಬೆಳೆಗಾರರು ತಿಳಿದುಕೊಳ್ಳಬೇಕಿದೆ ಎಂದು ಹೇಳಿದರು.
ಮಾವು ಬೆಳೆಗಾರರಿಗೆ ಸರ್ಕಾರ ಸಹ ಹಲವಾರು ಸೌಲಭ್ಯಗಳ ಮೂಲಕ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಹನಿ ನೀರಾವರಿ ಸೌಕರ್ಯ ಅಳವಡಿಕೆ, ಕ್ರಿಮಿನಾಶಕಗಳ ಖರೀದಿ ಸೇರಿದಂತೆ ಇತರೆ ಚಟುವಟಿಕೆಗಳಿಗೆ ಸಹಾಯಧನವನ್ನು ತೋಟಗಾರಿಕೆ ಇಲಾಖೆ ಮೂಲಕ ಒದಗಿಸುತ್ತಿದೆ. ಈ ಪ್ರಯೋಜನ ಪಡೆದುಕೊಳ್ಳಬೇಕು. ಹಾನಿಕಾರವಲ್ಲದ ಉಪಚಾರ ಕ್ರಮಗಳ ಮೂಲಕ ಹಣ್ಣು ಮಾಗಿಸುವ ಪ್ರಕ್ರಿಯೆ ಅನುಸರಿಸಬೇಕು. ವೈವಿಧ್ಯಮಯ ತಳಿಗಳನ್ನು ಬೆಳೆಯುವ ಮೂಲಕ ಹೆಚ್ಚು ಲಾಭ ಪಡೆಯಬೇಕು ಎಂದರು.
ತೋಟಗಾರಿಕೆ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ, ರೋಗ ಮತ್ತು ಕೀಟನಾಶಕ ತಜ್ಞ ಮುರಳಿ ಮೋಹನ್, ತೋಟಗಾರಿಕೆಯ ಅಧಿಕಾರಿ ಚಂದೇಗೌಡ, ಡಾ. ಶಿವಾನಂದ ಮತ್ತು ಮಾವು ಬೆಳೆಗಾರರು ಹಾಜರಿದ್ದರು.
- Advertisement -
- Advertisement -
- Advertisement -







