ನಗರದ ವಾಸವಿ ಶಾಲಾ ಆವರಣದಲ್ಲಿ ಮೂರನೇ ವಾರ್ಡಿನ 150 ಬಡ ಕುಟುಂಬಗಳಿಗೆ ಭಾನುವಾರ ದಿನಸಿ ಪದಾರ್ಥಗಳ ಕಿಟ್ ವಿತರಿಸಿ ನಗರಸಭಾ ಸದಸ್ಯೆ ಚಿತ್ರಾ ಮನೋಹರ್ ಮಾತನಾಡಿದರು.
ಕೊರೊನಾ ಹಿಮ್ಮೆಟ್ಟಿಸುವ ಉದ್ದೇಶದಿಂದ ಸರ್ಕಾರ ಲಾಕ್ ಡೌನ್ ಮಾಡಿದೆ. ಆದರೆ ಇದರಿಂದಾಗಿ ಸಾಕಷ್ಟು ಮಂದಿ ಆರ್ಥಿಕವಾಗಿ ತೊಂದರೆಗೊಳಗಾಗಿದ್ದಾರೆ. ಅವರಿಗೆ ನೆರವಾಗುವ ಉದ್ದೇಶದಿಂದ ಅಗತ್ಯ ದಿನಸಿ ಪದಾರ್ಥಗಳನ್ನು ವಿತರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಊಹೆಗೂ ನಿಲುಕದ ಈ ರೋಗ ವಿಶ್ವವೆಲ್ಲಾ ವ್ಯಾಪಿಸಿದೆ. ಅದಕ್ಕೆ ಔಷಧಿ ಕಂಡುಹಿಡಿಯುವವರೆಗೂ ಕಷ್ಟವಾದರೂ ಸರಿ ರೋಗ ಬರದಂತೆ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸರ್ಕಾರ ಹಾಗೂ ಆರೋಗ್ಯ ಇಲಾಖೆ ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಎಂದು ಹೇಳಿದರು.
ನಗರಸಭಾ ಸದಸ್ಯರಾದ ಎಲ್.ಅನಿಲ್ ಕುಮಾರ್, ಮುನಿರಾಜು, ಮಂಜುನಾಥ್, ಕೃಷ್ಣಮೂರ್ತಿ, ನಗರಸಭಾ ಸಿಬ್ಬಂದಿ ಮುರಳಿ, ಮಧುಲತಾ, ವೇದಮೂರ್ತಿ ಹಾಜರಿದ್ದರು.







