ವಾಹನ ಚಾಲನೆಯಲ್ಲಿ ಯಾವುದೇ ರೀತಿಯ ಸಾಹಸಗಳನ್ನು ಮಾಡಲು ಮುಂದಾಗಬಾರದು. ತಮ್ಮ ಪ್ರಾಣದ ಜತೆಗೆ ರಸ್ತೆ ಬಳಸುವ ಪ್ರತಿಯೊಬ್ಬರ ಸುರಕ್ಷತೆಗೆ ಗಮನದಲ್ಲಿಟ್ಟುಕೊಂಡು ವಾಹನ ಚಲಾಯಿಸಬೇಕು ಎಂದು ದಿಬ್ಬೂರಹಳ್ಳಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ವಿಜಯರೆಡ್ಡಿ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ಶನಿವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅವರು ಮಾತ್ನಾಡಿದರು.
ವ್ಯಾಪಕ ವಾಹನಗಳ ಓಡಾಟದಿಂದ ಅಪಘಾತಗಳು ಹೆಚ್ಚುತ್ತಿವೆ. ವಿಪರ್ಯಾಸವೆಂದರೆ ಅಪಘಾತಗಳಲ್ಲಿ ಹೆಚ್ಚಾಗಿ ಸಾವಗೀಡಾಗುತ್ತಿರುವವರು ಯುವಜನರು. ವಾಹನ ಚಲಾಯಿಸುವ ಪ್ರತಿಯೊಬ್ಬರೂ ಪರವಾನಿಗೆಯನ್ನು ಪಡೆದಿರಬೇಕು. ಅಪಘಾತ ನಡೆದ ಸಂದರ್ಭದಲ್ಲಿ ಪರವಾನಿಗೆ ಹೊಂದಿದ್ದರೆ ಜೀವವಿಮೆ ಸಿಗುತ್ತದೆ. ವಾಹನ ಚಲಾಯಿಸುವ ಪ್ರತಿಯೊಬ್ಬರು ಪರವಾನಿಗೆಯನ್ನು ಹೊಂದುವುದು ಅವಶ್ಯಕ ಎಂದರು.
ಸುರಕ್ಷತೆಯಿಂದ ವಾಹನ ಚಲಾಯಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕುಡಿದು ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸುವುದು ಸುರಕ್ಷತೆ ದೃಷ್ಟಿಯಿಂದ ಮಾರಕವಾಗಿದೆ. ಮನೆಯಿಂದ ಹೊರಗೆ ಬಂದವರು ಅಷ್ಟೇ ಸುರಕ್ಷಿತವಾಗಿ ಮನೆ ಸೇರಬೇಕು ಎನ್ನುವ ಭಾವನೆ ಚಾಲಕರಲ್ಲಿರಬೇಕು. ನೀವು ಸಂಚಾರ ನಿಯಮ ಪಾಲನೆ ಮಾಡುವುದರ ಜತೆಗೆ ಇನ್ನೊಬ್ಬರನ್ನು ಸಂಚಾರಿ ನಿಯಮ ಪಾಲನೆಗೆ ಪ್ರೋತ್ಸಾಹಿಸಬೇಕು. ಆಗ ಮಾತ್ರ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯ, ಅದಕ್ಕಾಗಿ ಸಾರ್ವಜನಿಕರು ಅಪಘಾತಗಳ ತಡೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಎಸ್. ಎಂ.ಇ ಶಾಲಾ ವಿದ್ಯಾರ್ಥಿಗಳೊಂದಿಗೆ ಜಾಥಾ ನಡೆಸಿದ ಪೊಲೀಸರು ದಿಬ್ಬೂರಹಳ್ಳಿ ವೃತ್ತದಲ್ಲಿ ವೃತ್ತಾಕಾರದಲ್ಲಿ ನಿಂತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಪೊಲೀಸರಾದ ಚಂದ್ರ, ಮುನಿರಾಜು, ಮಾರಪ್ಪ, ಗ್ರಾಮಸ್ಥರಾದ ಬಾಬಾಜಾನ್, ಸುಬಾನ್ ಸಾಬ್, ಚಿಕ್ಕನರಸಿಂಹಪ್ಪ, ಅಂಬೇಡ್ಕರ್ ಆಟೋ ಚಾಲಕ ಸಂಘದ ಸದಸ್ಯರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -