ಹೊಸದಾಗಿ ಆಯ್ಕೆಯಾದ ಶಾಸಕರೊಂದಿಗೆ ಸಮಾಲೋಚಿಸಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಸಲಹಾ ಸಮಿತಿಯನ್ನು ರಚನೆ ಮಾಡಿ. ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸಿ ಎಂದು ರೇಷ್ಮೆ ಕೃಷಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ ಸಲಹೆ ನೀಡಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಮಂಗಳವಾರ ರೇಷ್ಮೆ ಕೃಷಿ ಹಿತರಕ್ಷಣಾ ಸಮಿತಿ ಸದಸ್ಯರು ಮತ್ತು ರೈತ ಸಂಘದ ಸದಸ್ಯರ ನಿಯೋಗ ರೇಷ್ಮೆ ಗೂಡಿನ ಮಾರುಕಟ್ಟೆಯ ಉಪ ನಿರ್ದೇಶಕರನ್ನು ಭೇಟಿ ಮಾಡಿ ಸಮಸ್ಯೆಗಳ ನಿವಾರಣೆಗೆ ಸಲಹೆಗಳನ್ನು ನೀಡಿದರು.
ಶಿಡ್ಲಘಟ್ಟದ ಶಾಸಕರು ರೇಷ್ಮೆ ಖಾತೆಯ ಸಚಿವರಾಗಿದ್ದ ಅನುಭವವಿದೆ. ಆರನೆಯ ಬಾರಿ ಶಾಸಕರಾಗಿದ್ದಾರೆ. ಸ್ಥಳೀಯ ರೇಷ್ಮೆ ಗೂಡಿನ ಮಾರುಕಟ್ಟೆಯ ಸಮಸ್ಯೆಗಳು ಅವರಿಗೆ ತಿಳಿದಿದೆ. ಹಾಗಾಗಿ ಅವರ ನೇತೃತ್ವದಲ್ಲಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೈತರು ರೀಲರುಗಳನ್ನೊಳಗೊಂಡ ಸಲಹಾ ಸಮಿತಿಯನ್ನು ರಚನೆ ಮಾಡಿ.
ಸ್ವಚ್ಛತೆಗೆ ಆದ್ಯತೆಯನ್ನು ನೀಡಿ, ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಉತ್ತಮ ಶುದ್ಧನೀರಿನ ಘಟಕವನ್ನು ಅಳವಡಿಸಿ, ರೇಷ್ಮೆ ಗೂಡನ್ನು ಸಾಗಿಸುವ ಬುಟ್ಟಿಗಳನ್ನು ತರಿಸಿ, ಶೌಚಾಯ ಸರಿಪಡಿಸಿ ಎಂದು ಹೇಳಿದರು.
ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ರೈತರಿಗೆ ವಿಶ್ರಾಂತಿ ಗೃಹ ಬೇಕಿದೆ, ಮಾರುಕಟ್ಟೆಗೆ ಬರುವ ರಸ್ತೆ ಸಮರ್ಪಕವಾಗಿಲ್ಲ, ಮಾರುಕಟ್ಟೆಯಲ್ಲಿ ಬ್ಯಾಂಕ್ ಬೇಕಿದೆ. ಹಣವನ್ನು ರೈತರ ಖಾತೆಗೆ ವರ್ಗಾಯಿಸುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯ ಉಪ ನಿರ್ದೇಶಕ ಸುಭಾಷ್ ಬಿ ಸಾತೇನಹಳ್ಳಿ ಮಾತನಾಡಿ, ಚುನಾವಣೆಯ ಕಾರ್ಯಭಾರದಿಂದ ಸ್ವಚ್ಛತೆಗೆ ಗಮನ ಹರಿಸಲಾಗಿರಲಿಲ್ಲ. ಈಗ ಮಾರುಕಟ್ಟೆಯ ಸ್ವಚ್ಛತೆಗೆ ಆದ್ಯತೆ ನೀಡಿದ್ದೇವೆ. ಕೆಲ ದಿನಗಳಲ್ಲಿ ದೊಡ್ಡ ಶುದ್ಧ ನೀರಿನ ಘಟಕವನ್ನು ಸ್ಥಾಪಿಸಲಾಗುತ್ತದೆ. ನಾಳೆಯಿಂದಲೇ ಹೊಸ ಬುಟ್ಟಿಗಳನ್ನು ನೀಡಲಾಗುತ್ತಿದೆ. ರೇಷ್ಮೆ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳನ್ನು ಕರೆಸಿ ಶೌಚಾಲಯ ನಿರ್ಮಿಸಲಾಗುವುದು. ಇರುವ ಕಟ್ಟಡದಲ್ಲಿಯೇ ರೈತರ ವಿಶ್ರಾಂತಿ ಗೃಹಕ್ಕೆ ಸ್ಥಳವನ್ನು ಮಾಡಿ ಅದರಲ್ಲಿ ಶೌಚಾಲಯ ವ್ಯವಸ್ಥೆ ಮಾಡಿಕೊಡುತ್ತೇವೆ. ಮಾರುಕಟ್ಟೆಗೆ ಬರಲು ಪರ್ಯಾಯ ದಾರಿಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸುತ್ತೇವೆ. ಬ್ಯಾಂಕ್ ಹಾಗೂ ಕ್ಯಾಶ್ ಲೆಸ್ ವ್ಯವಹಾರ ಅನುಷ್ಠಾನದ ಹಂತದಲ್ಲಿದೆ ಎಂದು ಹೇಳಿದರು.
ರೈತಸಂಘದ ಕೆಂಪಣ್ಣ, ಮುನಿನಂಜಪ್ಪ, ಕೃಷ್ಣಪ್ಪ, ನಾರಾಯಣಸ್ವಾಮಿ, ಗೋಪಾಲ್, ಗೋವಿಂದ್, ಪುಟ್ಟಮೂರ್ತಿ, ಮೂರ್ತಿ, ಅಧಿಕಾರಿಗಳಾದ ಶಶಿಧರ್, ಬೈರಪ್ಪ, ಕುಮಾರಸ್ವಾಮಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -