ರೈತರ ಮೇಳ ಮತ್ತು ಕೃಷಿ ವಸ್ತು ಪ್ರದರ್ಶನ

0
185

ತಾಲ್ಲೂಕಿನ ಸೊಣ್ಣೇನಹಳ್ಳಿಯಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಣ್ಣು ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ರೈತರ ಮೇಳ ಮತ್ತು ಕೃಷಿ ವಸ್ತು ಪ್ರದರ್ಶನದಲ್ಲಿ ವಿಜ್ಞಾನಿ ಡಾ.ನಳಿನಿ ಮಾತನಾಡಿದರು.
ನಮ್ಮ ಶ್ರೀಮಂತಿಕೆಯು ನಮ್ಮ ಜಮೀನಿನ ಮಣ್ಣನ್ನು ಅವಲಂಬಿಸಿರುತ್ತದೆ. ಮಣ್ಣಿನ ಆರೋಗ್ಯಕ್ಕೆ ನಾವು ಗಮನ ಕೊಡುತ್ತಿಲ್ಲ. ವಿಷವನ್ನು ಹಾಕಿ ಎರೆಹುಳು ಸೇರಿದಂತೆ ಸಕಲ ಸೂಕ್ಷ್ಮಾಣು ಜೀವಿಗಳನ್ನೂ ಸಾಯಿಸಿದ್ದೇವೆ. ಇವತ್ತು ರಾಸಾಯನಿಕ ಬಳಸಿದ ಭೂಮಿಗೆ ನೀರು ಹಿಡಿದಿಡಲು ಆಗುತ್ತಿಲ್ಲ ಎಂದು ಅವರು ತಿಳಿಸಿದರು.
ಹಿಂದೆ ನಮ್ಮ ರೈತರಿಗೆ ಯಾವ ರೀತಿ ಕೃಷಿ ಮಾಡಬೇಕೆನ್ನುವುದು ಗೊತ್ತಿತ್ತು. ಅಕ್ಕಡಿ ಬೆಳೆಗಳನ್ನು ಹಾಕುತ್ತಿದ್ದರು. ಅವುಗಳ ಎಲೆಗಳು ಬಿದ್ದು ಭೂಮಿಗೆ ಹಾಸಿಗೆಯಂತಾಗುತ್ತಿತ್ತು. ಬಿದ್ದ ನೀರನ್ನು ಮಣ್ಣು ಹೀರಿಕೊಳ್ಳುತ್ತಿತ್ತು. ಆದರೆ ಈಗ ಹಸಿರುಕ್ರಾಂತಿಯ ದುಷ್ಪರಿಣಾಮ ದಶಕಗಟ್ಟಲೆ ರಾಸಾಯನಿಕ ಹಾಕಿದ ಮಣ್ಣಿನಲ್ಲಿ ಬಿದ್ದ ನೀರು ಇಂಗುವುದು ಕಷ್ಟವಾಗಿದೆ. ಭೂಮಿಯಲ್ಲಿ ನೀರು ಇಂಗಬೇಕಾದರೆ ಸಾವಯವ ಪದಾರ್ಥ ಇರಲೇಬೇಕು. ಆದ್ದರಿಂದ ಮಳೆನೀರಿನ ಕೊಯ್ಲು ಜೊತೆಗೆ ಸಾವಯವ ಸಮಗ್ರ ಬೇಸಾಯ ಪದ್ಧತಿಯ ಕಡೆಗೆ ರೈತರು ಮರಳಬೇಕು ಎಂದರು.
ನಮ್ಮ ಆರೋಗ್ಯಕರ ಭೂಮಿಯಲ್ಲಿನ ಕೋಟ್ಯಾಂತರ ಸೂಕ್ಷ್ಮಾಣು ಜೀವಿಗಳಿಗೆ ನಾವು ಸಾವಯವ ಗೊಬ್ಬರ ಕೊಡಬೇಕು, ಗಿಡಗಳಿಗಲ್ಲ. ಈ ಜೀವಿಗಳಿಗೆ ರಸಗೊಬ್ಬರಕ್ಕೆ ಹೊಂದಿಕೊಂಡು ಬದುಕುವ ಶಕ್ತಿಯಿಲ್ಲ. ಕೃಷಿಯನ್ನು ಲಾಭದಾಯಕವಾಗಿ ಮಾಡುವಲ್ಲಿ ಮಣ್ಣಿನ ಆರೋಗ್ಯ ಪ್ರಮುಖ ಪಾತ್ರವಹಿಸುತ್ತದೆ. ಫಲವತ್ತಾದ ಮಣ್ಣು ಬೆಳೆಗಳಿಗೆ ಬೇಕಾದ ಎಲ್ಲಾ 16 ಪೋಷಕಾಂಶಗಳನ್ನು ಸರಿಯಾದ ಪ್ರಮಾಣ, ಬೇಕಾದ ರೂಪದಲ್ಲಿ ಹಾಗೂ ಸಮಯದಲ್ಲಿ ಪೂರೈಸುವಂತಿರಬೇಕು. ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳಲು ಕಾಲ ಕಾಲಕ್ಕೆ ಹೇಗೆ ಆರೋಗ್ಯ ತಪಾಸಣೆ ಮಾಡಿಸುತ್ತಾನೊ ಹಾಗೆಯೇ, ಮಣ್ಣುಗಳ ಗುಣಧರ್ಮಗಳಲ್ಲಿ ಹಾಗೂ ಫಲವತ್ತತೆಯಲ್ಲಿ ಸ್ಥಳದಿಂದ ಸ್ಥಳಕ್ಕೆ ವಿಭಿನ್ನತೆಯಿದ್ದು ಇದನ್ನು ಸರಿದೂಗಿಸಿ ಕಾಲ ಕಾಲಕ್ಕೆ ಮಣ್ಣಿನ ಆರೋಗ್ಯವನ್ನು ತಿಳಿಯಲು ಮಣ್ಣು ಪರೀಕ್ಷೆ ಅತ್ಯಗತ್ಯವಾಗಿರುತ್ತದೆ ಎಂದು ಹೇಳಿದರು.
ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಟಿ.ಎಸ್.ಭಾಸ್ಕರ್ ರೆಡ್ಡಿ ಮಾತನಾಡಿ, ರೈತರು ತಮ್ಮ ಜಮೀನಿನ ಮಣ್ಣನ್ನು ಹೊರಹೋಗದಂತೆ ಕಾಪಾಡಿಕೊಳ್ಳಬೇಕು. ಬಿದ್ದ ಮಳೆ ನೀರನ್ನು ಹೊರಹೋಗಲು ಬಿಡಬಾರದು. ಗಿಡಮರಗಳನ್ನು ಸಾಕಷ್ಟು ಬೆಳೆಯಲು ಮುಂದಾಗಬೇಕು. ಎಲ್ಲಾ ಸಿರಿ ಸಂಪತ್ತು ಇರುವುದೆ ಹೊಲದ ಬದುವಿನಲ್ಲಿ. ಶ್ರೀಗಂಧ, ಹೆಬ್ಬೇವು, ಸಿಲ್ವರ್ ಓಕ್, ನಿಂಬೆ, ತೆಂಗು ಎಲ್ಲವನ್ನೂ ಬದುವಿನಲ್ಲಿ ಹಾಕಿದರೆ ಕೃಷಿಗೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತದೆ. ರೈತರು 12 ತಿಂಗಳು ಕೆಲಸ ಇರುವಂತೆ ಕೃಷಿ ಮಾಡಬೇಕು ಎಂದು ನುಡಿದರು.
ಸಹಾಯಕ ತೋಟಗಾರಿಕಾ ನಿರ್ದೇಶಕ ರಮೇಶ್ ಮಾತನಾಡಿ, ಗೋಡಂಬಿ, ನೇರಳೆ, ಕಡಿಮೆ ನೀರಿಗೆ ಬೆಳೆಯುವ ಬಾಳೆ, ಸೀತಾಫಲ ಮುಂತಾದ ವೈವಿಧ್ಯ ಬೆಳೆಗಳನ್ನು ಬೆಳೆಯುವ ಮೂಲಕ ಹಲವು ರೀತಿಯಲ್ಲಿ ಆದಾಯ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಣ್ಣು ಆರೋಗ್ಯ ಅಭಿಯಾನದ ಮಣ್ಣು ಆರೋಗ್ಯ ಚೀಟಿಯನ್ನು ರೈತರಿಗೆ ವಿತರಿಸಲಾಯಿತು. ಸಿರಿಧಾನ್ಯಗಳು ಹಾಗೂ ಅವುಗಳಿಂದ ತಯಾರಾದ ಆಹಾರ ಪದಾರ್ಥಗಳು, ರೈತರಿಗೆ ಉಅಪಯುಕ್ತ ಯಂತ್ರೋಪಕರಣಗಳ ಪ್ರದರ್ಶನವನ್ನು ನಡೆಸಲಾಗಿತ್ತು.
ದೇವರಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ತಾಲ್ಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಮಂಜುನಾಥರೆಡ್ಡಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಎಚ್.ರಾಮಕೃಷ್ಣಪ್ಪ, ಸಹಾಯಕ ಕೃಷಿ ನಿರ್ದೇಶಕ ಡಾ.ಎಸ್.ವಿ.ಮಂಜುನಾಥ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜಿ.ಬಿ.ಮಾಲತೇಶ್, ಆತ್ಮಾ ಯೋಜನಾಧಿಕಾರಿ ಅಶ್ವಥನಾರಾಯಣ, ಶ್ರೀನಿವಾಸ್, ಎಸ್.ಎಂ.ನಾರಾಯಣಸ್ವಾಮಿ, ನಿರಂಜನ್ ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!