ವಿಶ್ವ ಗ್ಲಾಕೋಮಾ ಸಪ್ತಾಹದ ಅಂಗವಾಗಿ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ, ಅಂಧತ್ವ ಮತ್ತು ದೃಷ್ಟಿದೋಷ ನಿಯಂತ್ರಣ ವಿಭಾಗ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಮಂಗಳವಾರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಜನಜಾಗೃತಿ ಜಾಥಾ ನಡೆಸಿದರು. ಜಾಥಾಕ್ಕೆ ಕಣ್ಣಿನ ತಜ್ಞ ಡಾ.ಧರ್ಮೇಂದ್ರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ನೇತ್ರ ವಿಭಾಗದ ಡಾ.ಧರ್ಮೇಂದ್ರ, ಗ್ಲಾಕೋಮ ರೋಗವು ಸದ್ದಿಲ್ಲದೆ ಕಣ್ಣಿನ ದೃಷ್ಟಿಯನ್ನು ಕುಂದಿಯುತ್ತದೆ. ಗ್ಲಾಕೋಮಾವನ್ನು ಪ್ರಾಥಮಿಕ ಹಂತದಲ್ಲೆ ತಪಾಸಣೆ ಮತ್ತು ಚಿಕಿತ್ಸೆ ಮಾಡಿಸಿಕೊಳ್ಳುವುದರ ಮೂಲಕ ಸಾರ್ವಜನಿಕರು ತಮ್ಮ ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ದೃಷ್ಟಿ ನರ ಮತ್ತು ದೃಷ್ಟಿ ಕ್ಷೇತ್ರದ ಬದಲಾವಣೆಗಳೊಂದಿಗೆ ಮುಂದುವರೆದ ಆಪ್ಟಿಕ್ ನ್ಯೂರೋಪಥಿ ದೋಷವೇ ಗ್ಲಾಕೋಮಾ. ಗ್ಲಾಕೋಮಾದಲ್ಲಿ ಕಂಡುಬರುವ ಇಂಥ ಎಲ್ಲ ಬದಲಾವಣೆಗಳು ಮಾರ್ಪಡಿಸಲು ಸಾಧ್ಯವಾಗದೆ ಇರುವಂಥದ್ದು. ಈ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ಇದನ್ನು ನಿಯಂತ್ರಿಸಬಹುದು. 40 ವರ್ಷಗಳ ಮೇಲ್ಪಟ್ವರು ಆಪ್ಟಿಕ್ ನರ್ವ್ನ ಎಚ್ಚರಿಕೆಯ ಮೌಲ್ಯ ಮಾಪನ ಮತ್ತು ಕಣ್ಣಿನ ಒತ್ತಡದ ಮಾಪನ ಸೇರಿದಂತೆ ಅಗಾಗ ಸಮಗ್ರ ನೇತ್ರ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಮುಖ್ಯ. ಆದ್ದರಿಂದ ಈ ವಯೋಮಾನಕ್ಕೆ ಮೇಲ್ಪಟ್ಟ ಎಲ್ಲರೂ ಗ್ಲಾಕೋಮಾ ತಪಾಸಣೆಗೆ ಒಳಪಡಬೇಕಾದುದು ಕಡ್ಡಾಯ. ಮಕ್ಕಳಿಗೂ ಗ್ಲಾಕೋಮಾ ಹಾನಿ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಈ ರೋಗ ಮಕ್ಕಳಲ್ಲಿ ಕಂಡುಬಂದರೆ ತಕ್ಷಣ ಚಿಕಿತ್ಸೆ ಕೊಡಿಸಬೇಕು. ಇಲ್ಲದಿದ್ದರೆ, ಅವರ ಜೀವನದಲ್ಲಿ ಅಂಧತ್ವದ ಕತ್ತಲು ಕವಿಯುತ್ತದೆ ಎಂದು ವಿವರಿಸಿದರು.
ಸರಸ್ವತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ವಿಶ್ವ ಗ್ಲಾಕೋಮಾ ಸಪ್ತಾಹದ ಅಂಗವಾಗಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ನೇತ್ರ ವಿಭಾಗದ ಮೀನಾಕ್ಷಿ, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಾದ ಲೋಕೇಶ್, ಲವಕುಮಾರ್, ನಂದಿನಿ, ವಿಜಯಾ, ಮಂಗಳಾ, ಚೈತ್ರಾ ಹಾಜರಿದ್ದರು.
- Advertisement -
- Advertisement -
- Advertisement -







