ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್ ಬಳಿಯ ಬಾಲಾಜಿ ಕಲ್ಯಾಣಮಂಟಪದಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಶಾಲಾ ಶಿಕ್ಷಣ ಗುಣಮಟ್ಟ ಸುಧಾರಣೆಗಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯಾಗಾರದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಯೋಜನಾ ಉಪಸಮನ್ವಯಾಧಿಕಾರಿ ಜಯರಾಮರೆಡ್ಡಿ ಮಾತನಾಡಿದರು.
ಓದು, ಬರಹ, ಮೂಲಭೂತ ಗಣಿತವನ್ನು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಮನಸ್ಸಿಗೆ ನಾಟುವಂತೆ ಕಲಿಸಿದಲ್ಲಿ ಮುಂದಿನ ತರಗತಿಗಳಿಗೆ ಏನೂ ಸಮಸ್ಯೆ ಉಂಟಾಗದು ಎಂದು ಅವರು ತಿಳಿಸಿದರು.
ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುವ ಸರ್ಕಾರಿ ಶಿಕ್ಷಕರು ವ್ಯತ್ಯಾಸವನ್ನು ಗಮನಿಸಬೇಕು. ಆತ್ನವಿಮರ್ಶೆಗಿದು ಸಕಾಲ. ಶಿಕ್ಷಕರ ಶಾಲಾ ಅವಧಿ ಇತರ ಕೆಲಸಗಳಿಗೆ ಬಳಕೆಯಾಗುತ್ತಿದೆ. ಕಲಿಕಾ ಅವಧಿಯಲ್ಲಿ ಇತರ ಕೆಲಸಗಳಿಗೆ ಶಿಕ್ಷಕರ ಬಳಕೆಯಾಗದಿರಲಿ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಶಿವಣ್ಣರೆಡ್ಡಿ ಮಾತನಾಡಿ, ಶಿಕ್ಷಕರೆಂದರೆ ಹಿಂದಿನಿಂದಲೂ ಸಮಾಜದಲ್ಲಿ ಉತ್ತಮ ಭಾವನೆಯಿದೆ. ಶಿಕ್ಷಕರನ್ನು ಮೌಲ್ಯಮಾಪನ ಮಾಡುವವರು ವಿದ್ಯಾರ್ಥಿಗಳು. ಮಕ್ಕಳಿಗೆ ಹೊಸಹೊಸದನ್ನು ಕಲಿಸಿದಲ್ಲಿ ಅವರು ಜೀವನಪರ್ಯಂತ ನೆನೆಸಿಕೊಳ್ಳುತ್ತಾರೆ. ಆದರ್ಶದ ಈ ವೃತ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಾಧ್ಯತೆಗಳಿವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು, ಅಕ್ಷರದಾಸೋಹ ಸಹ ನಿರ್ದೇಶಕ ಆಂಜನೇಯಲು, ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಈ.ಭಾಸ್ಕರಗೌಡ, ಶಿಕ್ಷಣ ಸಂಯೋಜಕ ಲಕ್ಷ್ಮೀನರಸಿಂಹಗೌಡ, ಶಿಕ್ಷಣಾಧಿಕಾರಿ ಶಿವಲಿಂಗಯ್ಯ ಹಾಜರಿದ್ದರು.
- Advertisement -
- Advertisement -
- Advertisement -







