ಶಿಡ್ಲಘಟ್ಟ ಮೂಲದ ಯುವಕರು ಸೀಮಿತ ಅವಕಾಶಗಳನ್ನೇ ಬಳಸಿಕೊಂಡು ಹಾಡೊಂದನ್ನು ರಚಿಸಿ, ನಿರ್ದೇಶಿಸಿ ಶೂಟಿಂಗ್ ನಡೆಸಿ ಪೇಸ್ ಡಿಜಿಟಲ್ ಆಡಿಯೋ ಸಹಯೋಗದೊಂದಿಗೆ ಬಿಡುಗಡೆಗೊಳಿಸಿದ್ದಾರೆ.
ನಗರದ ಉಲ್ಲೂರುಪೇಟೆಯ ನಿವಾಸಿ ಕೆ.ಎಸ್.ಪುನೀತ್ ಕುಮಾರ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿ.ಎಸ್ಸಿ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ತಾನು ಹಾಗೂ ಸ್ನೇಹಿತರು ಜೊತೆಗೂಡಿ ರಚಿಸಿ, ನಿರ್ಮಿಸಿ, ನಿರ್ದೇಶಿಸಿರುವ “ಕಾಲವೆಂಬೋ ಕಾಲದಲ್ಲಿ” ಎಂಬ ಹಾಡನ್ನು ಬುಧವಾರ ಬಿಡುಗಡೆಗೊಳಿಸಲಾಯಿತು.
“ನಾನು ಬರೆದ ಹಾಡನ್ನು ಗುನುಗುನಿಸುವಾಗ ಕೆಲ ಸ್ನೇಹಿತರು ಈ ಹಾಡನ್ನು ರೆಕಾರ್ಡ್ ಮಾಡಿಸು ಎನ್ನುತ್ತಿದ್ದರು. ಹೇಗೆ ಮಾಡಿಸಬೇಕೆಂದು ತಿಳಿದಿರಲಿಲ್ಲ. ಲಿಖಿತ್ ಶ್ರೀಧರ್ ಎಂಬುವವರ ಮೂಲಕ ಅತಿಶೈ ಜೈನ್ ಅವರ ಪರಿಚಯವಾಯಿತು. ಅವರು ಹಾಡಿಗೆ ಸಂಗೀತ ನೀಡಿ ಸ್ವತಃ ಹಾಡಿ ಅದಕ್ಕೆ ಜೀವತುಂಬಿದರು. ಈ ಸಂದರ್ಭದಲ್ಲಿ ಶರತ್ ಎನ್ನುವವರು ಸಹ ಸಹಾಯ ಮಾಡಿದರು. ಲಿಖಿತ್ ಕುಮಾರ್ ಶ್ರೀಧರ್ ಅವರು ೪ ನಿಮಿಷ ೧೬ ಸೆಕೆಂಡ್ ಗಳ ಸುಶ್ರಾವ್ಯವಾದ ಹಾಡನ್ನು ಸಿದ್ಧಪಡಿಸಿಕೊಟ್ಟರು.
ಹಾಡನ್ನು ಚಿತ್ರೀಕರಣ ಮಾಡಲು ನಟರಿಗಾಗಿ ಫೇಸ್ ಬುಕ್ ಮೂಲಕ ಆಹ್ವಾನಿಸಿದೆ. ಸುಮಾರು ೪೦೦೦ ಕರೆಗಳು ಬಂದವು. ಮನೋಹರ್ ಬ್ರಹ್ಮಾವರ ಮತ್ತು ಎಂ.ವಿ.ಪ್ರಜ್ವಲ ಎಂಬ ಯುವ ಪ್ರತಿಭೆಗಳಿಗೆ ನಟಿಸಲು ಅವಕಾಶ ನೀಡಿದೆ. ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಶ್ರೀಸಾಯಿ ಲೇ ಔಟ್ ನಲ್ಲಿ ನನ್ನ ಕಲ್ಪನೆಯಂತೆ ಹಾಡನ್ನು ಚಿತ್ರೀಕರಣ ಮಾಡಿದೆ. ಕೆನಾನ್ ೫ ಡಿ ಮಾರ್ಕ್ ೪ ಕ್ಯಾಮೆರಾ ಬಳಸಿ ಚಲಪತಿ ಅವರು ವೀಡಿಯೋ ಚಿತ್ರೀಕರಣ ಮಾಡಿಕೊಟ್ಟರು. ಸಂತೋಷ್ ಅವರು ನೃತ್ಯ ಸಂಯೋಜಿಸಿದರು. ಹರೀಶ್ ಅವರು ಆರ್ಥಿಕ ನೆರವನ್ನು ನೀಡಿದರು. ಈ ಆಲ್ಬಮ್ ಹಾಡನ್ನು ಬಿಡುಗಡೆ ಮಾಡಿ ಪ್ರಚಾರ ಮಾಡಿಕೊಡಲು ಪೇಸ್ ಡಿಜಿಟಲ್ ಮ್ಯೂಸಿಕ್ ಕಂಪೆನಿ ಮುಂದೆ ಬಂದಿದ್ದಾರೆ. ಈ ಅನುಭವದಿಂದ ಹೊಸ ಆಲೋಚನೆಗಳು ಮನಸ್ಸಿನಲ್ಲಿ ಮೂಡಿವೆ. ಮುಂದೆ ಅವಕಾಶಗಳು ಲಭಿಸಿದಲ್ಲಿ ಹಾಡು, ಸಾಕ್ಷ್ಯಚಿತ್ರ, ಕಿರುಚಿತ್ರಗಳ ನಿರ್ಮಾಣ, ನಿರ್ದೇಶನ ಮಾಡುವ ಬಯಕೆಯಿದೆ” ಎಂದು ಪುನೀತ್ ಕುಮಾರ್ ತಿಳಿಸಿದರು.
“ಕಾಲವೆಂಬೋ ಕಾಲದಲ್ಲಿ” ಹಾಡು ಯೂಟ್ಯೂಬ್ ನಲ್ಲಿ ಪೇಸ್ ಆಡಿಯೋ ಡಿಜಿಟಲ್ ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದೆ.
https://youtu.be/2b5mNTD5Xxk
- Advertisement -
- Advertisement -
- Advertisement -







