ನಗರ ಪ್ರದೇಶವನ್ನು ಮಾಲಿನ್ಯ ಮುಕ್ತಮಾಡುವ ಉದ್ದೇಶದಿಂದ ನಗರದ ವಿವಿಧ ವಾರ್ಡುಗಳಲ್ಲಿ, ಶಾಲೆಗಳ ಆವರಣ, ಸ್ಮಶಾನದ ಬಳಿ ಹಾಗೂ ರಸ್ತೆ ಬದಿಗಳಲ್ಲಿ ಒಟ್ಟಾರೆ ಎಂಟು ಸಾವಿರ ವಿವಿಧ ಜಾತಿಯ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಚಿಲಕಲನೇರ್ಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಶಶಿಧರ್ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅರಣ್ಯ ಇಲಾಖೆ, ತಾಲ್ಲೂಕು ಆಡಳಿತ ಹಾಗೂ ನಗರಸಭೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಅವರು ಗಿಡವನ್ನು ನೆಟ್ಟು ಮಾತನಾಡಿದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಹೋರಾಡುವ ಸಂಕಲ್ಪವನ್ನು ಈ ಬಾರಿ ಎಲ್ಲಾ ರಾಷ್ಟ್ರಗಳೂ ಮಾಡಲಿವೆ. ಹನಿಹನಿಗೂಡಿದರೆ ಹಳ್ಳ ಎಂಬಂತೆ, ನಮ್ಮದೂ ಇದರಲ್ಲಿ ಅಳಿಲಿನ ಪಾತ್ರವಿರಲಿ. ಪ್ಲಾಸ್ಟಿಕ್ ಬಳಕೆ ಮಾಡದಿರೋಣ. ಗಿಡವನ್ನು ನೆಟ್ಟು ಪೋಷಿಸಿ ಹಸಿರನ್ನು ಬೆಳೆಸುವುದನ್ನು ಹವ್ಯಾಸ ಮಾಡಿಕೊಳ್ಳೋಣ ಎಂದರು.
ನಗರದ ಪ್ರತಿಯೊಂದು ವಾರ್ಡಿಗೂ ಗಿಡಗಳನ್ನು ನೀಡುತ್ತಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಗಿಡ ಬೆಳೆಸುವುದೂ ಜವಾಬ್ದಾರಿಯಾಗಿದೆ. ಮುಂದಿನ ವರ್ಷಕ್ಕೆ ಗಿಡವನ್ನು ಚೆನ್ನಾಗಿ ಬೆಳೆಸಿ ಹೆಚ್ಚು ಪ್ರಗತಿಯನ್ನು ಕಂಡವರಿಗೆ ಪ್ರೋತ್ಸಾಹಕರವಾಗಿ ಗೌರವಿಸಲಾಗುವುದು. ಹಸಿರು ಅಭಿಯಾನವನ್ನು ಬೆಳೆಸಲು, ಪ್ರತಿಯೊಬ್ಬರಲ್ಲೂ ಗಿಡ ಮರ ಬೆಳೆಸಲು ಮನಸ್ಸಾಗುವಂತೆ ಪ್ರೋತ್ಸಾಹಿಸಲು ಈ ರೀತಿ ಮಾಡುತ್ತಿದ್ದೇವೆ. ಗಿಡ ನೆಡುವುದು ಕೇವಲ ಈ ದಿನಕ್ಕೆ ಸೀಮಿತಬಾಗಬಾರದು, ಅದು ನಿರಂತರ ಪ್ರಕ್ರಿಯೆ ಎಂದು ಹೇಳಿದರು.
ಬಹಳಷ್ಟು ಹಣ್ಣು ಬಿಡುವ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇವು ಕೇವಲ ಮನುಷ್ಯರಿಗಷ್ಟೇ ಉಪಯುಕ್ತವಲ್ಲ. ಪಕ್ಷಿ, ಕೀಟ, ಚಿಟ್ಟೆ ಮುಂತಾದ ಜೀವಿಗಳೂ ಇದ್ದರಷ್ಟೇ ನಮ್ಮ ಪರಿಸರ ಸುಂದರ ಮತ್ತು ನಮ್ಮ ಅಸ್ಥಿತ್ವಕ್ಕೆ ಅರ್ಥ ಬರುವುದು ಎಂದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ, ವಲಯ ಅರಣ್ಯ ಅಧಿಕಾರಿ ಶ್ರೀಲಕ್ಷ್ಮಿ, ನಗರಸಭೆ ಆಯುಕ್ತ ಚಲಪತಿ, ಅಮ್ಜದ್, ಆರ್.ಶ್ರೀನಿವಾಸ್, ಇಲ್ಲು, ಬಾಬು, ಹಫೀಜುಲ್ಲ, ಶ್ರೀನಿವಾಸ್, ಮಹಬೂಬ್ ಪಾಷ, ಅಕ್ರಂ, ವೆಂಕಟೇಶ್, ಸಂತೋಷ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -