ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯಲು ಬರುವಂತಹ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕಗಳನ್ನು ವಸೂಲಿ ಮಾಡುತ್ತಿರುವ ಬಗ್ಗೆ ಹಲವಾರು ದೂರುಗಳು ಕೇಳಿ ಬರುತ್ತಿದ್ದು, ಪಾರದರ್ಶಕತೆ ಕಾಪಾಡದಿರುವ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಹೇಳಿದರು.
ನಗರದ ಬಿ.ಆರ್.ಸಿ.ಕೇಂದ್ರದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಖಾಸಗಿ ಶಾಲಾ ಮುಖ್ಯಶಿಕ್ಷಕರುಗಳ ಸಭೆಯಲ್ಲಿ ಅವರು ಮಾತನಾಡಿದರು.
ಖಾಸಗಿ ಮತ್ತು ಅನುಧಾನಿತ ಶಾಲೆಗಳಲ್ಲಿ ಸರ್ಕಾರ ನಿಗಧಿಪಡಿಸಿರುವ ಶುಲ್ಕಕಿಂತ ಹೆಚ್ಚಿನ ಹಣವನ್ನು ಸಂಗ್ರಹ ಮಾಡುತ್ತಿದ್ದಾರೆ ಹಾಗೂ ವಸೂಲಿ ಮಾಡುತ್ತಿರುವ ಶುಲ್ಕಗಳಿಗೆ ರಸೀದಿಗಳನ್ನು ನೀಡುತ್ತಿಲ್ಲವೆಂಬ ದೂರುಗಳು ಕೇಳಿಬರುತ್ತಿವೆ. ಆದ್ದರಿಂದ ಇಲಾಖೆಯಿಂದ ಕಟ್ಟಿನಿಟ್ಟಿನ ಆದೇಶಗಳು ಬಂದಿದ್ದು, ಯಾವ ಶಾಲೆಯಲ್ಲಿ ಸರ್ಕಾರಿ ಮಾನದಂಡಗಳನ್ನು ನಿರ್ವಹಿಸುವುದಿಲ್ಲವೋ ಅಂತಹ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸಲಾಗುತ್ತದೆ.
ಶಾಲೆಯಲ್ಲಿ ನಿಗದಿಪಡಿಸಿರುವ ಶುಲ್ಕದ ಬಗ್ಗೆ ಹಾಗೂ ಶಾಲೆಯಲ್ಲಿ ಲಭ್ಯವಿರುವ ಸೀಟುಗಳು, ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಗಳನ್ನು ಕಡ್ಡಾಯವಾಗಿ ಶಾಲೆಯ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮಕ್ಕಳಿಗೆ ನಿಗದಿ ಪಡಿಸಿರುವ ಸರ್ಕಾರದ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.
ಎಸ್.ಸಿ.ಎಸ್.ಟಿ. ಮತ್ತು ಗುಂಪು ೦೧ ಮಕ್ಕಳಿಂದ ಯಾವುದೇ ಶುಲ್ಕವನ್ನು ವಸೂಲಿ ಮಾಡುವಂತಿಲ್ಲ, ಎಲ್.ಕೆ.ಜಿ.ಮತ್ತು ಒಂದನೇ ತರಗತಿಯನ್ನು ಹೊರತುಪಡಿಸಿ, ಉಳಿದೆಲ್ಲಾ ಮಕ್ಕಳು ಗಳಿಸಿಕೊಂಡಿರುವ ಅಂಕಗಳನ್ನು ಆಧರಿಸಿ ಆಯ್ಕೆ ಪಟ್ಟಿಯನ್ನು ತಯಾರು ಮಾಡಬೇಕು. ಅನುದಾನಿತ, ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ೫ ನೇ ತರಗತಿಯವರೆಗೆ ಬೋದನೇತರ ಶುಲ್ಕ ಹಾಗೂ ಬೋದನಾ ಶುಲ್ಕ, ವಿಶೇಷ ಅಭಿವೃದ್ಧಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದ್ದು, ಅನುದಾನರಹಿತ ಶಾಲೆಗಳಲ್ಲಿ ವಿಶೇಷ ಅಭಿವೃದ್ಧಿ ಶುಲ್ಕವಾಗಿ ೬೦೦ ರೂಪಾಯಿಗಳನ್ನು ನಿಗದಿಪಡಿಸಬಹುದು, ೬ ರಿಂದ ೮ ನೇ ತರಗತಿಯವರೆಗೆ ಬೋದನೇತರ ಶುಲ್ಕ ೩೮ ರೂ ಆರ್.ಟಿ.ಇ.ಅನ್ವಯ, ಭೋಧನಾ ಶುಲ್ಕವಿಲ್ಲ, ವಿಶೇಷ ಅಭಿವೃದ್ಧಿ ಶುಲ್ಕ ೫೦೦, ಅನುದಾನ ರಹಿತ ಶಾಲೆಗಳಲ್ಲಿ ೬೦೦ ರೂಪಾಯಿಗಳು, ೯ ರಿಂದ ೧೦ ನೇ ತರಗತಿಯ ಮಕ್ಕಳಿಗೆ ಬೋಧನೇತರ ಶುಲ್ಕ ೧೮೫ ರೂಪಾಯಿಗಳು, ವಿಶೇಷ ಅಭಿವೃದ್ಧಿ ಶುಲ್ಕ ೫೦೦, ಅನುದಾನರಹಿತ ಶಾಲೆಗಳಲ್ಲಿ ಬೋಧನೇತರ ಶುಲ್ಕ ೧೮೫ ರೂಪಾಯಿಗಳನ್ನು ಮಾತ್ರ ವಸೂಲಿ ಮಾಡಬೇಕು, ವಿದ್ಯಾರ್ಥಿಗಳಿಂದ ಪಡೆದ ಹಣಕ್ಕೆ ಕಡ್ಡಾಯವಾಗಿ ಅಧಿಕೃತ ರಸೀತಿಯನ್ನು ನೀಡಬೇಕು, ಯಾವುದೇ ಚೀಟಿಗಳಲ್ಲಿ ಬರೆದುಕೊಡುವಂತಿಲ್ಲವೆಂದು ಎಚ್ಚರಿಕೆ ನೀಡಿದರು.
ತಾಲ್ಲೂಕಿನ ವಿವಿಧ ಅನುದಾನಿತ ಮತ್ತು ಖಾಸಗಿ ಶಾಲೆಗಳ ಮುಖ್ಯಸ್ಥರು ಹಾಗೂ ಮುಖ್ಯಶಿಕ್ಷಕರುಗಳು ಸಭೆಯಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -