ವಿವಿಧ ಭೂಮಿ, ಸ್ಮಶಾನ ಹಾಗೂ ನಿವೇಶನ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಜಾಂಭವ ಯುವ ಸೇನೆಯ ಪದಾಧಿಕಾರಿಗಳು ಸೋಮವಾರ ತಹಶೀಲ್ದಾರ್ ಗಗನಸಿಂಧು ಅವರಿಗೆ ಮನವಿ ಸಲ್ಲಿಸಿದರು.
ಬೆಳ್ಳೂಟಿ ಗ್ರಾಮದ ಸ್ಮಶಾನ ಜಾಗವನ್ನು ಲೇಔಟ್ಗೆ ಸೇರಿಸಿ ರಸ್ತೆ ನಿರ್ಮಿಸಿರುವುದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಜಾಗಗಳಲ್ಲಿ ವಾಸವಿರುವ ದಲಿತ ಕುಟುಂಬಗಳಿಗೆ ಅಕ್ರಮ–ಸಕ್ರಮ ಯೋಜನೆ ಹಾಗೂ 94-ಸಿ, 94-ಸಿಸಿ ಅಡಿಯಲ್ಲಿ ವಾಸದ ಹಕ್ಕುಪತ್ರಗಳನ್ನು ವಿತರಿಸಬೇಕು. ಸ್ವಾಧೀನಾನುಭವದಲ್ಲಿರುವ ಸರ್ವೆ ಸಂಖ್ಯೆ 50, 53 ಮತ್ತು 57ರ ಸಾಗುವಳಿದಾರರಿಗೆ ದರ್ಕಾಸ್ತು ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಯಲಗಹಳ್ಳಿ ಕಾಲೋನಿಯ ಹೇಳೂರು–ಪಾತೂರು ಗ್ರಾಮಠಾಣೆ ಜಾಗ ಒತ್ತುವರಿಗೆ ಒಳಗಾಗಿದ್ದು, ಅದನ್ನು ತೆರವುಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು. ಯಲಗಹಳ್ಳಿ ಗ್ರಾಮದಲ್ಲಿ ಗ್ರಾಮಠಾಣೆ ಇಲ್ಲದಿರುವುದರಿಂದ ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲಿನ ಸ್ಮಶಾನ ಜಾಗಕ್ಕೂ ಸ್ಕೆಚ್ ಹಾಗೂ ಪಾಣಿ ದಾಖಲೆಗಳಿಲ್ಲದೆ ಒತ್ತುವರಿ ನಡೆದಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.
ಗಾಂಡ್ಲಚಿಂತೆ ಗ್ರಾಮದ ಸ್ಮಶಾನ ಜಾಗದ ಒತ್ತುವರಿ ತೆರವು ಕುರಿತು ಈ ಹಿಂದೆ ಅರ್ಜಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ದಬರಗಾನಹಳ್ಳಿ ಗ್ರಾಮದಲ್ಲಿ ಸ್ಮಶಾನವಿಲ್ಲದ ಕಾರಣ ಸರ್ಕಾರಿ ಜಾಗವನ್ನು ಗುರುತಿಸಿ ಸ್ಮಶಾನಕ್ಕೆ ಮೀಸಲಿಡಬೇಕು. ಗ್ರಾಮದ ಸರ್ವೆ ಸಂಖ್ಯೆ 8ರಲ್ಲಿ ಇರುವ 1.3 ಎಕರೆ ಗೋಮಾಳ ಜಮೀನಿನಲ್ಲಿ ಜಾಂಭವ ಸಮುದಾಯದವರಿಗೆ ಖಾಲಿ ನಿವೇಶನ ನಿರ್ಮಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಕಸಬಾ ಹೋಬಳಿಯ ನಲ್ಲಿಮರದಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 39ರ ಜಮೀನಿನಲ್ಲಿ ಹಾದು ಹೋಗುವ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಗಗನಸಿಂಧು ಅವರು, ಮನವಿಯಲ್ಲಿರುವ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ, ತಾಲ್ಲೂಕು ಆಡಳಿತದ ವ್ಯಾಪ್ತಿಯಲ್ಲಿ ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡು ಅಗತ್ಯ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಾಂಭವ ಯುವ ಸೇನೆಯ ರಾಜ್ಯಾಧ್ಯಕ್ಷ ರಮೇಶ್ ಚಕ್ರವರ್ತಿ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಆರ್. ಶ್ರೀನಿವಾಸ್, ಉಪಾಧ್ಯಕ್ಷ ಮುನಿಕೃಷ್ಣಪ್ಪ, ಕಾಚಹಳ್ಳಿ ಮುನಿಯಪ್ಪ, ನಗರ ಘಟಕದ ಅಧ್ಯಕ್ಷ ನರೇಂದ್ರ, ದೇವಪ್ಪ, ಸತೀಶ್, ಡಿ. ಕುಮಾರ್, ಅರುಣ್, ವೆಂಕಟೇಶಪ್ಪ, ಆಕಾಶ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.
Summary: Jamboja Yuva Sene office-bearers submitted a memorandum to Sidlaghatta Tahsildar Gaganasindhu on Monday, demanding resolution of land, cemetery and site (nivesana) disputes across several villages — including cemetery land encroachment in Belluti, Yalagahalli and Gandlachinthe, missing cemetery land in Dabaraganahalli, occupancy rights for Dalit families on government land, and clearance of a public road encroachment in Nallimaradahalli. The Tahsildar assured priority action within the taluk administration’s scope.







