ಪೌರ ಕಾರ್ಮಿಕರ ವೇತನ ಸಮಸ್ಯೆ, ನಗರದ ಸ್ವಚ್ಚತೆ, ವಾರ್ಡುಗಳಲ್ಲಿರುವ ಕುಡಿಯುವ ನೀರು, ಬೀದಿ ದ್ವೀಪಗಳ ಸಮಸ್ಯೆ ಪರಿಹಾರವಾಗುವವರೆಗೂ ನಗರಸಭೆಯಲ್ಲಿ ಯಾವುದೇ ಸಭೆ ನಡೆಯಲು ಅವಕಾಶ ನೀಡುವುದಿಲ್ಲ ಎಂದು ನಗರಸಭೆ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಶನಿವಾರ ನಡೆಯಿತು.
ನಗರಸಭೆ ಅಧ್ಯಕ್ಷ ಅಫ್ಸರ್ಪಾಷ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ನಗರಸಭೆ ಸಾಮಾನ್ಯಸಭೆಯಲ್ಲಿ ಭಾಗವಹಿಸಿದ ಬಹುತೇಕ ನಗರಸಭೆ ಸದಸ್ಯರು ತಮ್ಮ ತಮ್ಮ ವಾರ್ಡುಗಳಲ್ಲಿರುವ ಸಮಸ್ಯೆಗಳ ಬಗ್ಗೆ ಮಾತಾಡಿ ಸಭೆ ಬಹಿಷ್ಕರಿಸಿ ಹೊರನಡೆದರು.
ಕಳೆದ ೧೧ ತಿಂಗಳಿಂದಲೂ ಪೌರ ಕಾರ್ಮಿಕರಿಗೆ ನಗರಸಭೆಯಿಂದ ಸಂಬಳ ನೀಡಿಲ್ಲ. ನಗರದಾದ್ಯಂತ ಒಳಚರಂಡಿ ತುಂಬಿ ಹೋಗಿದ್ದು ಅಲ್ಪ ಪ್ರಮಾಣದ ಮಳೆಯಾದರೂ ಯುಜಿಡಿ ನೀರು ರಸ್ತೆ ಹಾಗೂ ಮನೆಗಳಿಗೆ ನುಗ್ಗುತ್ತದೆ. ಈ ಬಗ್ಗೆ ಸಾಕಷ್ಟು ಭಾರಿ ಅಧಿಕಾರಿಗಳಿಗೆ ತಿಳಿಸಿದರೂ ನಮ್ಮಲ್ಲಿ ಯುಜಿಡಿ ವಾಹನ ಇಲ್ಲ ಬೇರೆಡೆಯಿಂದ ತರಿಸಬೇಕು ಎನ್ನುತ್ತಾರೆ. ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿರುವ ಜನ ನಮ್ಮನ್ನು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹೀಗಾದರೇ ಜನತೆಗೆ ನಾವು ಏನು ಉತ್ತರಿಸಬೇಕು ಎಂದು ಸದಸ್ಯ ಕೇಶವಮೂರ್ತಿ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷರನ್ನು ಪ್ರಶ್ನಿಸಿದರು.
ಸದಸ್ಯ ಎಸ್.ರಾಘವೇಂದ್ರ ಮಾತನಾಡಿ, ಅಧ್ಯಕ್ಷರು ಹಾಗೂ ಅಧಿಕಾರಿಗಳು ಶಾಮೀಲಾಗಿ ನಗರೋತ್ಥಾನ ೩ ಯೋಜನೆಯಡಿ ತಮಗೆ ಬೇಕಾದ ವಾರ್ಡುಗಳಲ್ಲಿ ಮಾತ್ರ ಕಾಮಗಾರಿ ಮಾಡಿಸುತ್ತಿದ್ದಾರೆ. ನಗರೋತ್ಥಾನ ೩ ಯೋಜನೆಯಡಿ ನಗರದಾದ್ಯಂತ ಮಾಡುವುದಾದರೆ ಮಾಡಿ ಇಲ್ಲವಾದಲ್ಲಿ ಎಲ್ಲಿಯೂ ಮಾಡಬೇಡಿ ಎಂದರು.
ಇನ್ನು ನಗರೋತ್ಥಾನ ೩ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಅಂದಾಜುಪಟ್ಟಿ, ಗುತ್ತಿಗೆದಾರರ ವಿವರ, ಗುಣಮಟ್ಟ ಕಾಯ್ದಿರಿಸಿಕೊಳ್ಳಲು ವಿಧಿಸಿರುವ ನಿಬಂಧನೆ ಹಾಗು ಅಧಿಕಾರಿಗಳ ಜವಾಬ್ದಾರಿಯ ವಿವರಗಳನ್ನು ಎಲ್ಲಾ ಸದಸ್ಯರಿಗೆ ನೀಡಬೇಕು ಎಂದು ಒತ್ತಾಯಿಸಿ ಸುಮಾರು ೧೮ ಮಂದಿ ಸದಸ್ಯರು ಸಹಿ ಹಾಕಿರುವ ಮನವಿಯನ್ನು ಪೌರಾಯುಕ್ತರಿಗೆ ಸಲ್ಲಿಸಿದರು.
ವರ್ಷಕ್ಕೊಂದು ಕರೆಯುವ ಸಭೆಯಲ್ಲಾದರೂ ಅಧಿಕಾರಿಗಳು ಸದಸ್ಯರಿಗೆ ಸೂಕ್ತ ಮಾಹಿತಿ ನೀಡುತ್ತಾರೆ ಎಂದರೆ ಅದೂ ಇಲ್ಲದೇ ಸಭೆಯಲ್ಲಿ ಬೇಕಾ ಬಿಟ್ಟಿ ಉತ್ತರ ನೀಡುವುದು ಸರಿಯಲ್ಲ. ಹೀಗಾದರೆ ಸಭೆ ಮಾಡುವ ಜರೂರತ್ತಾದರೂ ಏನು ಎಂದು ಪ್ರಶ್ನಿಸಿದ ಸದಸ್ಯರು ಸಭೆ ಬಹಿಷ್ಕರಿಸಿ ಹೊರನಡೆದರು.
ಸಭೆ ಬಹಿಷ್ಕರಿಸಿದ ಸದಸ್ಯರ ಪೈಕಿ ೧೮ ಜನ ಸದಸ್ಯರು ನಗರಸಭೆ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಗರಸಭೆ ಅಧ್ಯಕ್ಷ ಅಫ್ಸರ್ಪಾಷ ತಮ್ಮ ಅಧಿಕಾರಾವಧಿಯಲ್ಲಿ ಕೋಟ್ಯಾಂತರ ಅಕ್ರಮ ಕಾಮಗಾರಿಗಳ ಹೆಸರಿನಲ್ಲಿ ಹಣ ಲಪಟಾಯಿಸಿದ್ದಾರೆ. ಅಕ್ರಮ ಕಾಮಗಾರಿಗಳ ಬಿಲ್ ಸೃಷ್ಠಿಸಿ ಹಣ ಪಡೆದಿದ್ದಾರೆ. ಶಿಡ್ಲಘಟ್ಟ ಪುರಸಭೆಯ ಸ್ವತ್ತುಗಳನ್ನು ತಮ್ಮ ಹಿಂಬಾಲಕರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ. ನಗರಸಭೆಯ ಶೇ ೨೪.೧೦ ರ ಎಸ್ಸಿ ಎಸ್ಟಿ ಅನುದಾನದ ಹಣವನ್ನು ನಕಲಿ ದಾಖಲೆ ಸೃಷ್ಟಿ ಮಾಡಿರುವುದು ಹಾಗೂ ನಗರಸಭೆಗೆ ಕಾಯ್ದಿರಿಸಿರುವ ಎರಡು ಎಕರೆ ಹನ್ನೊಂದು ಗುಂಟೆ ಪ್ರದೇಶವನ್ನು ನಗರಸಭೆ ಸ್ವಾಧೀನಕ್ಕೆ ಪಡೆಯದೇ ಜಮೀನಿನ ಮಾಲೀಕರ ಜೊತೆ ಶಾಮೀಲಾಗಿ ಅಕ್ರಮ ಎಸಗಿರುವ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಗರಸಭೆ ಮುಂಬಾಗ ಧರಣಿ ಮಾಡುವುದಾಗಿ ಎಚ್ಚರಿಸಿದರು.
ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಸದಸ್ಯರಾದ ಸುಗುಣ ಲಕ್ಮಿನಾರಾಯಣ, ಪಿ.ಕೆ.ಕಿಷನ್, ಎಸ್.ರಾಘವೇಂದ್ರ, ಶಬಾನ, ಸರಳಾ, ಲಕ್ಮಯ್ಯ, ಸಂದ್ಯಾ, ಎಂ.ವಿ.ವೆಂಕಟಸ್ವಾಮಿ, ಎಚ್.ಎಸ್.ನಯಾಜ್, ಸುಮಿತ್ರಾ, ಎಲ್.ಸುನಿತಾ, ವಹೀದಾಕೌಸರ್, ನಸ್ರೀನ್ತಾಜ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -