ಆದಷ್ಟು ಶೀಘ್ರವಾಗಿ ಹಂಡಿಗನಾಳ ಗ್ರಾಮ ಪಂಚಾಯ್ತಿಯನ್ನು ಬಯಲು ಶೌಚಾಲಯ ಮುಕ್ತವನ್ನಾಗಿಸಲು ಪಣತೊಟ್ಟಿದ್ದು, ಅದಕ್ಕಾಗಿ ಶೌಚಾಲಯ ನಿರ್ಮಿಸಿಕೊಳ್ಳಲು ವಿವಿಧ ರೀತಿಯಲ್ಲಿ ಅನುಕೂಲಗಳನ್ನು ಕಲ್ಪಿಸಿಕೊಡುತ್ತಿದ್ದೇವೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಬುಧವಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇನ್ನೂ ಶೌಚಾಲಯವನ್ನು ನಿರ್ಮಿಸಿಕೊಳ್ಳದವರಿಗೆ ಸೂಚನಾ ಪತ್ರವನ್ನು ನೀಡಿ ಅವರ ಮನವೊಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಶೌಚಾಲಯವನ್ನು ನಿರ್ಮಿಸಿಕೊಳ್ಳಲು ಮಂಜೂರಾತಿಯನ್ನು ನೀಡಲಾಗಿದೆ. ಆದರೂ ಶೌಚಾಲಯವನ್ನು ನಿರ್ಮಿಸಿಕೊಂಡಿಲ್ಲದವರಿಗೆ ಶೌಚಾಲಯವನ್ನು ನಿರ್ಮಿಸಿಕೊಳ್ಳದಿದ್ದಲ್ಲಿ ಪಡಿತರ ಹಾಗೂ ಇನ್ನಿತರ ಸೌಲಭ್ಯಗಳು ಸಿಗದಂತಾಗುತ್ತವೆ. ಶೌಚಾಲಯವನ್ನು ನಿರ್ಮಿಸಿಕೊಳ್ಳಲು ಬೇರೇನಾದರೂ ಅಡಚಣೆಯಿದ್ದಲ್ಲಿ ಅದನ್ನು ಜನಪ್ರತಿನಿಧಿಗಳ ಸಹಕಾರದಿಂದ ಪರಿಹರಿಸಲಾಗುವುದು. ಅಪ್ಪೇಗೌಡನಹಳ್ಳಿ, ಲಕ್ಕಹಳ್ಳಿ, ಪೈಲಹಳ್ಳಿ, ಕುರಿಬಚ್ಚನಪಡೆ, ಎಲ್.ಮುತ್ತುಗದಹಳ್ಳಿ ಗ್ರಾಮಗಳಲ್ಲಿನ ಶೌಚಾಲಯವಿರದವರಿಗೆ ಅದರ ಅಗತ್ಯದ ಬಗ್ಗೆ ಮನವೊಲಿಸುತ್ತಿದ್ದೇವೆ ಎಂದು ಹೇಳಿದರು.
ಗ್ರಾಮ ಪಂಚಾಯ್ತಿ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿ, ಎರಡು ವರ್ಷಗಳ ಹಿಂದೆ ನಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಶೌಚಾಲಯವನ್ನು ಹೊಂದಿರದ ಮನೆಗಳು 1,300 ಇದ್ದವು. ಈಗ 187 ಇವೆ. ಈ ದಿನ ಆ ಮನೆಗಳ ಬಳಿ ತೆರಳಿ ಅವರ ಸಮಸ್ಯೆಗಳನ್ನು ತಿಳಿದು ಶೌಚಾಲಯ ನಿರ್ಮಿಸಿಕೊಳ್ಳಲು ಬೇಕಾದ ಸಹಾಯವನ್ನು ಒದಗಿಸುತ್ತಿದ್ದೇವೆ. ನಮ್ಮ ಗುರಿ ಬಯಲು ಶೌಚಾಲಯ ಮುಕ್ತ ಗ್ರಾಮ ಪಂಚಾಯ್ತಿಯನ್ನು ಮಾಡುವುದಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಮುನಿಯಪ್ಪ, ಪಿಡಿಒ ಅಂಜನ್ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ಕರ ವಸೂಲಿಗಾರ ಶ್ರೀನಿವಾಸ್, ಚನ್ನೇಗೌಡ, ಸಂಪತ್, ಶ್ರೀರಾಮ್, ದಾಸಪ್ಪ, ಮುನಿರಾಜು, ಅಂಬರೀಷ್, ನರಸಿಂಹಮೂರ್ತಿ ಹಾಜರಿದ್ದರು.