ಸಮತಾ ಸೈನಿಕ ದಳದ ಸದಸ್ಯರ ಮನವಿ
ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದರಲ್ಲಿ ಉತ್ತರಪ್ರದೇಶ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದ್ದು ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಸಮತಾ ಸೈನಿಕ ಧಳದ ಅಧ್ಯಕ್ಷ ಈಧರೆ ಪ್ರಕಾಶ್ ಆಗ್ರಹಿಸಿದರು.
ಉತ್ತರಪ್ರದೇಶದ ಹತ್ರಾಸ್ ನಲ್ಲಿ ನಡೆದ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಸಮತಾ ಸೈನಿಕ ದಳದ ಪದಾಧಿಕಾರಿಗಳು ನಗರದ ಬಸ್ ನಿಲ್ದಾಣದ ಬಳಿಯಿಂದ ಕೋಟೆ ವೃತ್ತ, ಮಯೂರ ವೃತ್ತದ ಮೂಲಕ ತಾಲ್ಲೂಕು ಕಚೇರಿಯವರೆಗೂ ಬೈಕ್ ರ್ಯಾಲಿ ಮೂಲಕ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಕೆ.ಎನ್.ಮಂಜುನಾಥ್ರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಉತ್ತರಪ್ರದೇಶದ ಹತ್ರಾಸ್ನಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾದ ಆರೋಪಿಗಳನ್ನು ಪ್ರಕರಣದಿಂದ ತಪ್ಪಿಸಲು ರಾತ್ರೋ ರಾತ್ರಿ ಮೃತ ದೇಹವನ್ನು ಕುಟುಂಬದವರಿಗೂ ನೀಡದೇ ಹೀನಾಯವಾಗಿ ಸುಟ್ಟುಹಾಕುವ ಮೂಲಕ ಧಾರ್ಮಿಕ ಸಂಪ್ರದಾಯಗಳನ್ನು ಬೂದಿ ಮಾಡಿದ ಅಲ್ಲಿನ ಸರ್ಕಾರದ ಕ್ರಮ ಖಂಡನೀಯ. ಇದು ದೇಶದ ಎಲ್ಲರ ಆತ್ಮಸಾಕ್ಷಿಯನ್ನು ಕಲಕಿದೆ. ಪದೇ ಪದೇ ದೇಶದಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಅಲ್ಲಿನ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಪ್ರಜಾ ಪ್ರಭುತ್ವದ ಕಗ್ಗೊಲೆ ಮಾಡುತ್ತಾ ಅಧಿಕಾರ ನಡೆಸುತ್ತಿರುವ ಉತ್ತರಪ್ರದೇಶದ ಸರ್ಕಾರವನ್ನು ಕೂಡಲೇ ರಾಷ್ಟ್ರಪತಿಗಳು ತಮ್ಮ ಸುಪರ್ಧಿಗೆ ಪಡೆದುಕೊಳ್ಳಬೇಕು. ಅತ್ಯಾಚಾರ ಆರೋಪಿಗಳನ್ನು ಕೂಡಲೇ ಗಲ್ಲಿಗೇರಿಸುವ ಮೂಲಕ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರಪತಿಗಳಿಗೆ ತಾಲ್ಲೂಕು ಆಡಳಿತದ ಮೂಲಕ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮತಾ ಸೈನಿಕ ದಳ ಹಾಗು ಆರ್ಪಿಐ ಜಿಲ್ಲಾಧ್ಯಕ್ಷ ಜಿ.ಸಿ.ವೆಂಕಟರೋಣಪ್ಪ, ಜಿಲ್ಲಾ ಉಪಾಧ್ಯಕ್ಷ ಜಿ.ಈಶ್ವರಪ್ಪ, ಜಿ.ಅಶ್ವತ್ಥಪ್ಪ, ತಾಲ್ಲೂಕು ಮುಖಂಡರಾದ ಮುನಿಆಂಜನಪ್ಪ, ಎಂ.ವಿಜಯ್ಕುಮಾರ್, ವೆಂಕಟೇಶಪ್ಪ, ರಾಮಾಂಜಿನಪ್ಪ ಹಾಜರಿದ್ದರು.
ದಸಂಸ, ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಯುವಪಡೆ ಹಾಗೂ ಕರ್ನಾಟಕ ರಾಜ್ಯ ನಾಯಕರ ಯುವಸೇನೆ ಪ್ರತಿಭಟನೆ

ಉತ್ತರಪ್ರದೇಶದ ಹತ್ರಾಸ್ನಲ್ಲಿ ದಲಿತ ಹೆಣ್ಣು ಮಗುವಿನ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣ ಇಡೀ ವಿಶ್ವವೇ ತಲೆ ತಗ್ಗಿಸುವಂತದ್ದು ಎಂದು ದಸಂಸ ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್ ಹೇಳಿದರು.
ನಗರದ ತಾಲ್ಲೂಕು ಕಚೇರಿ ಮುಂಭಾಗ ಶನಿವಾರ ದಸಂಸ, ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಯುವಪಡೆ ಹಾಗೂ ಕರ್ನಾಟಕ ರಾಜ್ಯ ನಾಯಕರ ಯುವಸೇನೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣ ವಿಫಲವಾಗಿದೆ. ನೆರೆಯ ತೆಲಂಗಾಣದ ಪ್ರಿಯಾಂಕರೆಡ್ಡಿ ರನ್ನು ಹತ್ಯೆಗೈದಿದ್ದ ಆರೋಪಿಗಳನ್ನು ಎನ್ ಕೌಂಟರ್ ಮಾಡಿದ ರೀತಿಯಲ್ಲಿಯೇ ಎನ್ ಕೌಂಟರ್ ಮಾಡಬೇಕಾಗಿತ್ತು. ಆದರೆ ಉತ್ತರ ಪ್ರದೇಶ ಸರ್ಕಾರ ಅಲ್ಲಿನ ಪೊಲೀಸರಿಗೆ ಕುಮ್ಮಕ್ಕು ನೀಡುವ ಮೂಲಕ ಹಂತಕರ ರಕ್ಷಣೆಗೆ ಮುಂದಾಗಿರುವುದು ಖಂಡನೀಯ ಎಂದರು.
ಮಾನ್ಯ ರಾಷ್ಟ್ರಪತಿಗಳು ಸೇರಿದಂತೆ ಪ್ರಧಾನ ಮಂತ್ರಿಗಳು ಅತ್ಯಾಚಾರ ಕೃತ್ಯದಲ್ಲಿ ಪಾಲ್ಗೊಂಡ ಆರೋಪಿಗಳನ್ನು ಗಲ್ಲಿಗೇರಿಸಬೇಕು.
ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಸೇರಿದಂತೆ, ಗೃಹಮಂತ್ರಿ ಹಾಗೂ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವ ಮೂಲಕ ಮೃತ ಹೆಣ್ಣು ಮಗಳ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಮಾನ್ಯ ರಾಷ್ಟ್ರಪತಿಗಳಿಗೆ ಶಿರಸ್ತೇದಾರ್ ಕೆ.ಎನ್.ಮಂಜುನಾಥ್ ಮೂಲಕ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಸಂಘಟನಾ ಸಂಚಾಲಕರಾದ ಟಿ.ಎ.ಚಲಪತಿ, ಎಲ್.ವಿ.ವೆಂಕಟೇಶ್, ಮಾದಿಗ ದಂಡೋರ ಮುಖಂಡ ಜೆ.ಎಂ.ದೇವರಾಜ್, ವಾಲ್ಮೀಕಿ ನಾಐಕರ ಯುವಪಡೆಯ ತಾಲ್ಲೂಕು ಅಧ್ಯಕ್ಷ ಟಿ.ಬಿ.ಮುನಿಕೃಷ್ಣ, ಅಂಬರೀಶ್.ಟಿ, ನಾಯಕರ ಯುವಸೇನೆಯ ಎ.ವೆಂಕಟೇಶ್, ಅಣ್ಣಯ್ಯಪ್ಪ, ಮುನಿಯಪ್ಪ, ಎಚ್.ಎಂ.ಮುರಳಿ ಹಾಜರಿದ್ದರು.







