ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ಮಾತನಾಡಿದರು. ಚುನಾವಣೆಯಲ್ಲಿ ಸೋತರೂ ಜನರ ಆಶೀರ್ವಾದವಿದೆ. ಕ್ಷೇತ್ರದಲ್ಲಿ ಸಮಾಜಸೇವೆಯನ್ನು ಮುಂದುವರೆಸುತ್ತೇನೆ. ಯಾವುದೇ ಸರ್ಕಾರವಿರಲಿ, ಜನರ ಕಷ್ಟಕ್ಕೆ ಸ್ಪಂದಿಸುವುದು ಬಹು ಮುಖ್ಯ. ಆ ಕೆಲಸವನ್ನು ನಿರಂತರವಾಗಿ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷದಿಂದ ಟಿಕೇಟ್ಗಾಗಿ ಪ್ರಯತ್ನಿಸಿದೆ. ಸಿಗಲಿಲ್ಲ. ಪಕ್ಷೇತರನಾಗಿ ಸ್ಪರ್ಧಿಸಿದೆ. 10,986 ಮತಗಳನ್ನು ಕ್ಷೇತ್ರದ ತಂದೆತಾಯಂದಿರು ನೀಡಿ ಆಶೀರ್ವದಿಸಿದ್ದಾರೆ. ನನ್ನ ಪ್ರಾಮಾಣಿಕ ಜನಸೇವೆಗೆ ನೀಡಿರುವ ಮತಗಳು ಕಡಿಮೆಯೇನೂ ಅಲ್ಲ. ಯಾವುದೇ ಮುಖಂಡರ, ಗುಂಪಿನ ಬಲವಿಲ್ಲದ ನನ್ನನ್ನು ನಂಬಿ ಮತ ನೀಡಿದವರಿಗೆ ಋಣಿಯಾಗಿರುತ್ತೇನೆ. ನನ್ನ ವ್ಯಕ್ತಿತ್ವ, ಆಲೋಚನೆ ಬದಲಾಗದು. ಮುಂದಿನ ದಿನಗಳಲ್ಲಿ ಇನ್ನಷ್ಟು ಜನಸೇವೆ ಮಾಡುವ ಮೂಲಕ ಕ್ಷೇತ್ರದ ಎಲ್ಲ ಜನರ ವಿಶ್ವಾಸ ಗಳಿಸುತ್ತೇನೆ. ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ನಂಬಿದ್ದೇನೆ ಎಂದು ಹೇಳಿದರು.
ಇನ್ನಷ್ಟು ಜನಬೆಂಬಲ ಸಿಗಬಹುದೆಂದು ನಾವು ಆಶಿಸಿದ್ದೆವು. ಆದರೆ, ಚುನಾವಣೆ ಎರಡು ದಿನಗಳಿದ್ದಾಗ ಕಾಂಗ್ರೆಸ್ ಪಕ್ಷದವರು ‘ಆಂಜಿನಪ್ಪ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ’ ಎಂದು ಮಾಡಿದ ಅಪಪ್ರಚಾರದಿಂದ ನಮ್ಮ ಆಲೋಚನೆ ತಲೆಕೆಳಗಾಯಿತು. ಜನರ ಪ್ರೀತಿ ಮತವಾಗದೇ ಇರಲು ಮುಖ್ಯ ಕಾರಣ ಅಪಪ್ರಚಾರ. ಯಾರು ಎಷ್ಟೇ ತೇಜೋವಧೆ ಮಾಡಿದರೂ ನಮ್ಮ ಕೆಲಸ ಮಾಡುವ ಉತ್ಸಾಹ ಕಡಿಮೆಯಾಗುವುದಿಲ್ಲ. ಇಂದಲ್ಲ ನಾಳೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ನನಗೆ ನ್ಯಾಯ ಸಿಗುತ್ತದೆ ಎಂಬ ದೃಢ ವಿಶ್ವಾಸವಿದೆ.
ಯಾವುದೇ ಅಹಿತಕರ ಘಟನೆಗೆ ಆಸ್ಪದ ಕೊಡದೇ ಶಾಂತಿಯುತವಾಗಿ ಮತದಾನ ನಡೆದದ್ದು ಒಂದು ಸಾಧನೆಯಾಗಿದೆ. ನಾಗರಿಕರಲ್ಲಿ ನಮ್ಮ ಹಕ್ಕನ್ನು ಚಲಾಯಿಸುವ ಬಗ್ಗೆ ಅರಿವು ಮೂಡಿರುವುದು ಉತ್ತಮ ಬೆಳವಣಿಗೆಯಾಗಿದೆ.
ಎಸ್.ಎನ್.ಕ್ರಿಯಾ ಟ್ರಸ್ಟ್ ಮೂಲಕ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಉಚಿತ ಶಸ್ತ್ರ ಚಿಕಿತ್ಸೆಗಳು, ಸರ್ಕಾರದ ಸವಲತ್ತುಗಳನ್ನು ತಲುಪಿಸುವ ಕಾರ್ಯ, ಕೌಶಲ್ಯ ತರಬೇತಿ, ಮಹಿಳೆಯರಿಗೆ ಹೊಲಿಗೆ ಯಂತ್ರ ಹೀಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸಿದ್ದು, ಅದನ್ನು ಮುಂದುವರೆಸಿಕೊಂಡು ಜನಸೇವೆ ಮಾಡುತ್ತೇನೆಂದು ಹೇಳಿದರು.
ಆನೂರು ದೇವರಾಜ್, ಅಫ್ಸರ್ಪಾಷ, ಹಿತ್ತಲಹಳ್ಳಿ ಕೃಷ್ಣಪ್ಪ, ಅಶ್ವತ್ಥನಾರಾಯಣರೆಡ್ಡಿ, ತುಮ್ಮನಹಳ್ಳಿ ವೆಂಕಟೇಶ್, ದಡಂಘಟ್ಟ ಕೃಷ್ಣಪ್ಪ, ಜಮೀರ್, ಮಳಮಾಚನಹಳ್ಳಿ ಬೈರೇಗೌಡ, ಗೋವಿಂದಪ್ಪ ಹಾಜರಿದ್ದರು.
- Advertisement -
- Advertisement -
- Advertisement -
- Advertisement -