ಹೂಕುಂಡ, ದೀಪ, ಮನೆ, ಹೂಗಳು, ಉಯ್ಯಾಲೆ, ಪೆನ್ಸ್ಟ್ಯಾಂಡ್, ಫೋಟೋ ಫ್ರೇಮ್, ಚೈನೀಸ್ ಬೆಲ್, ಟೆಡ್ಡಿ ಬೇರ್, ಬೊಕೆ, ದೇವರ ಪಟ, ಓಲೆ ಮುಂತಾದ ಕಲಾಕೃತಿಗಳು ಮಕ್ಕಳಿಂದ ತಯಾರಾಗಿ ಪ್ರದರ್ಶಿಸಲಾಗಿತ್ತು. ಮಕ್ಕಳ ಪೋಷಕರು ತಮ್ಮ ಮಕ್ಕಳ ಕಲಾಚಾತುರ್ಯಕ್ಕೆ ಬೆರಗಾಗಿದ್ದರು.
ಕಳೆದ ಜೂನ್ ತಿಂಗಳಿನಲ್ಲಿ ತಾಲ್ಲೂಕು ಘಟಕದಿಂದ ‘ಕಸದಿಂದ ರಸ’ ಎಂಬ ವಿವಿಧ ಪ್ರಕಾರಗಳ ಕರಕುಶಲ ಕಲೆಯ ಶಿಬಿರವನ್ನು ಪ್ರಾರಂಭಿಸಲಾಗಿತ್ತು. ಶಿಬಿರವು ಹನ್ನೆರಡು ವಾರಗಳ ಕಾಲ ಪ್ರತಿ ಶನಿವಾರ ಮತ್ತು ಭಾನುವಾರದಂದು ಸಂಜೆ 4 ರಿಂದ 6 ಗಂಟೆಯವರೆಗೂ ನಡೆದಿದ್ದು, ಕಲಿತ ಕಲೆಯಿಂದ ತಯಾರಿಸಿರುವ ಕಲಾಕೃತಿಗಳನ್ನು 25 ಮಂದಿ ಶಿಬಿರಾರ್ಥಿಗಳು ಭಾನುವಾರ ಗೌಡರ ಬೀದಿಯ ದಾಸಪ್ಪನವರ ಪಾರ್ಥಸಾರಥಿ ಅವರ ಮನೆಯಲ್ಲಿ ಪ್ರದರ್ಶಿಸಿದ್ದರು.
ಸಂಪನ್ಮೂಲ ವ್ಯಕ್ತಿ ಲತಾ ಮಂಜುನಾಥ್ ಅವರು ತ್ಯಾಜ್ಯ ಎಂದು ಬಿಸಾಡುವ ತೆಂಗಿನ ಚಿಪ್ಪು, ರದ್ದಿ ಕಾಗದ, ಐಸ್ಕ್ರೀಮ್ ಚಮಚ, ಹತ್ತಿ ಮುಂತಾದ ಹಲವು ವಸ್ತುಗಳಿಂದ ವೈವಿಧ್ಯಮಯ ಕಲಾಕೃತಿಗಳನ್ನು ತಯಾರಿಸುವ ಬಗ್ಗೆ ಆಸಕ್ತ 25 ಮಂದಿ ಮಕ್ಕಳಿಗೆ 12 ವಾರಗಳು ಉಚಿತವಾಗಿ ಕಲಿಸಿದ್ದರು.
‘ಮೂರನೆಯ ತರಗತಿಯಿಂದ ಹಿಡಿದು 10ನೇ ತರಗತಿಯ ಮಕ್ಕಳವರೆಗೂ ಈ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಮತ್ತು ಕರಕುಶಲ ಕಲೆಯನ್ನು ಕಲಿಯುವುದರಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ. ಬುದ್ಧಿ ಚುರುಕಾಗುತ್ತದೆ ಮತ್ತು ಜೀವನೋತ್ಸಾಹ ಮೂಡುತ್ತದೆ. ಮಕ್ಕಳಿಗೆ ಉಪಯುಕ್ತ ಕಲೆಯನ್ನು ಕಲಿಸುವುದೂ ಕನ್ನಡದ ಕೆಲಸವೆಂದೇ ತಾಲ್ಲೂಕು ಕಸಾಪ ವತಿಯಿಂದ ಈ ಶಿಬಿರವನ್ನು ಉಚಿತವಾಗಿ ನಡೆಸಲಾಗಿತ್ತು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಹೇಳಿದರು.
ಮುಂದಿನ ವಾರ ಶಿಬಿರದ ಮುಕ್ತಾಯ ಕಾರ್ಯಕ್ರಮದಲ್ಲಿ ಕಲಿತ ಮಕ್ಕಳಿಗೆ ಕ.ಸಾ.ಪ ತಾಲ್ಲೂಕು ಘಟಕದ ವತಿಯಿಂದ ಪ್ರಮಾಣಪತ್ರ ಮತ್ತು ಉತ್ತಮ ಕಲಾಕೃತಿಗಳನ್ನು ಪ್ರದರ್ಶಿಸಿದವರಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ತಿಳಿಸಿದರು.
ರೂಪ ಪಾರ್ಥಸಾರಥಿ, ಮಂಜುನಾಥ್, ರಾಮಕೃಷ್ಣ, ದೇವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -