ತಾಲ್ಲೂಕಿನಲ್ಲಿ ಏಳು ವರ್ಷಗಳಿಂದ ಸತತವಾಗಿ ಬರಗಾಲ ಇದೆ. ಒಂದೆಡೆ ಸರ್ಕಾರ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರೆ, ಮತ್ತೊಂದೆಡೆ ಮುತ್ತೂಟ್ ಫೈನಾನ್ಸ್ ನಲ್ಲಿ ರೈತರು ಇಟ್ಟ ಒಡವೆ ಮೇಲೆ ಹೆಚ್ಚಿನ ಬಡ್ಡಿ ಹಾಕಿರುವುದು ಖಂಡನೀಯ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೆಗೌಡ ಆಕ್ರೋಷ ವ್ಯಕ್ತಪಡಿಸಿದರು.
ನಗರದ ರೇಷ್ಮೆ ಮಾರುಕಟ್ಟೆ ಬಳಿ ಇರುವ ಮುತ್ತೂಟ್ ಫೈನಾನ್ಸ್ ಮುಂದೆ ರೈತರು ಹಾಗೂ ಹಸಿರು ಸೇನೆಯ ಮುಖಂಡರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳು ಸತತ ಬರಗಾಲ ಎದುರಿಸುತ್ತಿದ್ದು, ರೈತರು ಬ್ಯಾಂಕ್ಗಳಲ್ಲಿ ತೆಗೆದುಕೊಂಡ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಸರ್ಕಾರ ರೈತರ ಸಾಲ ಮನ್ನಾ ಘೋಷಣೆ ಮಾಡಿದೆ. ಆದರೆ ಮುತ್ತೂಟ್ ಫೈನಾನ್ಸ್ ಕಡಿಮೆ ಬಡ್ಡಿ ದರದ ಆಸೆ ತೋರಿಸಿ ವರ್ಷಕ್ಕೆ ಸುಮಾರು ಶೇ ೨೨ ರಿಂದ ೩೦ ರಷ್ಟು ಬಡ್ಡಿ ವಸೂಲಿ ಮಾಡುತ್ತಿದೆ. ತಾಲ್ಲೂಕಿನ ಗಂಗಾಧರ್ ಎಂಬ ರೈತ ಸುಮಾರು ೨ ವರ್ಷದ ಹಿಂದೆ ೭೦ ಗ್ರಾಂ ಚಿನ್ನ ಗಿರಿವಿ ಇಟ್ಟು ೧,೨೦,೦೦೦ ರೂಗಳ ಹಣ ಪಡೆದಿದ್ದರು. ಬೆಳೆ ಸರಿಯಾಗಿ ಆಗದ ಕಾರಣ ಹಣ ಕಟ್ಟಲು ತೊಂದರೆಯಾಗಿದ್ದು, ಮುತ್ತೂಟ್ ಫೈನಾನ್ಸ್ ಕಡೆಯಿಂದ ಸತತವಾಗಿ ನೋಟಿಸ್ ನೀಡಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ನನ್ನದು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎಂದು ರೈತ ಸಂಘಕ್ಕೆ ಆತ ದೂರು ನೀಡಿದ್ದಾರೆ. ಇದನ್ನು ಖಂಡಿಸಿ ನಾವು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸರ್ಕಾರದ ಸೂಚನೆಯಂತೆ ಹೆಚ್ಚಿನ ಬಡ್ಡಿ ದರ ವಿಧಿಸದೆ ಇದ್ದಲ್ಲಿ ಮುತ್ತೂಟ್ ಫೈನಾನ್ಸ್ ನ ಜಿಲ್ಲೆಯ ಎಲ್ಲಾ ಶಾಖೆಗಳ ಬಳಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಕೂಡಲೇ ಮುತ್ತೂಟ್ ಫೈನಾನ್ಸ್ ನ ಅಧಿಕಾರಿಗಳು ತಮ್ಮ ಮುಖ್ಯಸ್ಥರೊಂದಿಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಮುತ್ತೂಟ್ ಫೈನಾನ್ಸ್ ಜಿಲ್ಲಾ ಕ್ಲಸ್ಟರ್ ವ್ಯವಸ್ಥಾಪಕ ವೆಂಕಟೇಶ್ ಮಾತನಾಡಿ, ಸರ್ಕಾರದ ಅಧಿಸೂಚನೆಯಂತೆ ನಾವು ಬಡ್ಡಿ ದರ ವಿಧಿಸುತ್ತಿದ್ದು, ಈ ವಿಷಯವಾಗಿ ೧೫ ದಿನಗಳ ಕಾಲಾವಕಾಶ ಪಡೆದಿದ್ದೇವೆ. ನಮ್ಮ ಮುಖ್ಯಸ್ಥರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುತ್ತೂಟ್ ಫೈನಾನ್ಸ್ ಅಧಿಕಾರಿಗಳಾದ ಪಿ.ಅರುಣ್, ವಿಜಯ್, ಗುರುಸ್ವಾಮಿ, ಸಿ.ಕೆ.ಶೆಟ್ಟಿ, ರೈತ ಸಂಘದ ಮುಖಂಡರಾದ ತಾದೂರು ಮಂಜುನಾಥ್, ವೇಣುಗೋಪಾಲ್, ಮುನಿನಂಜಪ್ಪ, ಎಸ್.ಎಂ.ನಾರಾಯಣ್ಣಸ್ವಾಮಿ, ಶ್ರೀನಿವಾಸ್, ಹಾಜರಿದ್ದರು.
- Advertisement -
- Advertisement -
- Advertisement -