Sidlaghatta : ಒಂದೇ ಭಾರತ ಒಂದೇ ತುರ್ತು ಕರೆ ಪರಿಕಲ್ಪನೆಯ ತುರ್ತು ಸ್ಪಂದನಾ ಬೆಂಬಲ ವ್ಯವಸ್ಥೆಯನ್ನು ಕೇಂದ್ರ ಗೃಹ ಇಲಾಖೆ ಜಾರಿಗೆ ತಂದಿದೆ. ಸಾರ್ವಜನಿಕರು ತುರ್ತು ಕರೆಗಾಗಿ ಪೊಲೀಸ್ ನೆರವು ಪಡೆಯಲು 112 ಸಂಖ್ಯೆಗೆ ಡಯಲ್ ಮಾಡಲು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುನಿಲ್ ಕುಮಾರ್ ತಿಳಿಸಿದರು.
ನಗರದ ಕೋಟೆ ವೃತ್ತದ ಬಳಿ ಪೊಲೀಸರ ಸಂಪರ್ಕಕ್ಕಾಗಿ ಹೊಸದಾಗಿ ಜಾರಿಗೆ ಬಂದಿರುವ 112 ಸಹಾಯವಾಣಿ ಸಂಖ್ಯೆ ಕುರಿತಂತೆ ಪೊಲೀಸರು ಜನರಲ್ಲಿ ಅರಿವು ಮೂಡಿಸಿ ಅವರು ಮಾತನಾಡಿದರು.
ಪೊಲೀಸ್ ನೆರವು, ಅಗ್ನಿಶಾಮಕದಳದ ನೆರವು ಅಥವಾ ಅಂಬ್ಯುಲೆನ್ಸ್ ಸೇವೆ ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲಿ ನೂತನವಾದ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸಾಕು (ERSS) Emergency Response Support System ವ್ಯವಸ್ಥೆಯಡಿ ಎಲ್ಲಿಂದಲೇ ಕರೆ ಬಂದರೂ ತುರ್ತಾಗಿ ಅಲ್ಲಿಗೆ ತಲುಪಿಸಿ ರಕ್ಷಣೆ ಒದಗಿಸಲು ಅನುಕೂಲವಾಗಲಿದೆ. 112ಕ್ಕೆ ಕರೆ ಮಾಡಿದರೆ ನೇರವಾಗಿ ಬೆಂಗಳೂರಿನಿಂದ ಏಕಿಕೃತ ತುರ್ತು ಸ್ಪಂದನಾ ಕೇಂದ್ರದ ಮೂಲಕ ಜಿಲ್ಲಾ ಸಮನ್ವಯ ಕೇಂದ್ರಕ್ಕೆ ಸಂಪರ್ಕಿಸಲಾಗುತ್ತದೆ. ಕರೆ ಸ್ವೀಕರಿಸಿದ ತಕ್ಷಣ ಘಟನಾ ಸ್ಥಳಕ್ಕೆ 15 ರಿಂದ 17 ನಿಮಿಷದಲ್ಲಿ ವಾಹನ ಅಲ್ಲಿಗೆ ತಲುಪುತ್ತದೆ ಎಂದು ಹೇಳಿದರು.
ಎ.ಎಸ್.ಐ ನಾರಾಯಣಸ್ವಾಮಿ, ಮಂಜುನಾಥ್, ಸಾರ್ವಜನಿಕರು ಹಾಜರಿದ್ದರು.