ಹಕ್ಕಿಪಿಕ್ಕಿ ಕಾಲೋನಿಯವರಿಗೆ ಸರ್ಕಾರದಿಂದ ದವಸ ಧಾನ್ಯ ನೀಡುವುದಲ್ಲದೆ ಅವರ ಆರೋಗ್ಯ ಭದ್ರತೆಯನ್ನು ಸಹ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಲತಾ ಭರವಸೆ ನೀಡಿದರು.
ತಾಲ್ಲೂಕಿನ ವಿವಿದೆಡೆ ಇರುವ ಕೋವಿಡ್ ಕೇರ್ ಸೆಂಟರುಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಕಂಟೈನ್ ಮೆಂಟ್ ಪ್ರದೇಶಗಳನ್ನು ಭಾನುವಾರ ಭೇಟಿ ನೀಡಿ ಪರಿಶಿಲನೆ ನಡೆಸಿದ ಅವರು ಸಾದಲಿಯ ಹಕ್ಕಿಪಿಕ್ಕಿ ಜನರು ತಮ್ಮ ಕಷ್ಟಗಳನ್ನು ತೋಡಿಕೊಂಡ ಸಂದರ್ಭದಲ್ಲಿ ಮಾತನಾಡಿದರು.
ವಿವಿದೆಡೆ ಹೋಗಿ ವ್ಯಾಪಾರ ಮಾಡಿಕೊಂಡು ಬದುಕುವ ಹಕ್ಕಿಪಿಕ್ಕಿ ಜನರಿಗೆ ಕೊರೊನಾದಿಂದಾಗಿ ಬಹಳ ಕಷ್ಟವಾಗಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಗ್ರಾಮ
ಪಂಚಾಯಿತಿಯಿಂದ ಈಗಾಗಲೇ ದಿನಸಿ ಸಾಮಗ್ರಿಗಳ ನೆರವನ್ನು ನೀಡಲಾಗಿದೆ. ನೀವುಗಳು ಭಯ, ಅತಂಕ ಪಡುವ ಅಗತ್ಯವಿಲ್ಲ. ನಿಮಗೆ ಅಗತ್ಯ ನೆರವನ್ನು ನೀಡುತ್ತೇವೆ ಎಂದು ಧೈರ್ಯ ತುಂಬಿದರು.
ತಾಲ್ಲೂಕಿನ ಕೊಂಡಪ್ಪಗಾರಹಳ್ಳಿ (ಪುರಭೈರನಹಳ್ಳಿ)ಯ ಬಳಿಯಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ತಾಲ್ಲೂಕಿನ ಎರಡನೇ ಕೋವಿಡ್ ಕೇರ್ ಸೆಂಟರನ್ನಾಗಿ ಸಿದ್ಧಪಡಿಸಿರುವುದನ್ನು ಪರಿಶೀಲಿಸಿದರು. ಅಲ್ಲಿ ರೋಗಿಗಳಿಗೆ ಔಷಧಿ, ಆಹಾರ, ನೀರು, ಶುಚಿತ್ವದ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.
ಈ.ತಿಮ್ಮಸಂದ್ರದ ಈಗ್ಲೆಟ್ ಗ್ರಾಮದಲ್ಲಿನ ಕಂಟೈನ್ ಮೆಂಟ್ ಪ್ರದೇಶಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಪಿಡಿಒ ಅವರನ್ನು ಕಾರ್ಯಪಡೆಯ ಕಾರ್ಯವೈಖರಿಯ ಕುರಿತಾಗಿ ಪ್ರಶ್ನಿಸಿದರು. ಪಿಡಿಒ ತನ್ವೀರ್ ಅಹಮದ್ ಅವರು ಎಂಟು ಮಂದಿಯ ಕಾರ್ಯಪಡೆಯ ಸದಸ್ಯರು ಗ್ರಾಮದ ಜನರ ಆರೋಗ್ಯದ ಬಗ್ಗೆ ಮಾಹಿತಿ ಹಾಗೂ ಅರಿವು ನೀಡುವುದಲ್ಲದೆ, ಕಂಟೈನ್ ಮೆಂಟ್ ಪ್ರದೇಶದ ಮನೆಗಳವರಿಗೆ ದಿನಸಿ ನೀಡುತ್ತಿರುವುದನ್ನು ವಿವರಿಸಿದರು.
ಈ.ತಿಮ್ಮಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆವರಣದಲ್ಲಿ ಗಿಡವನ್ನು ನೆಟ್ಟರು. ಆಸ್ಪತ್ರೆಯ ಮುಂದಿನ ಉದ್ಯಾನವನ ಮತ್ತು ಔಷಧಿವನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಪೊಲೀಸ್ ಎಸ್.ಪಿ ಮಿಥುನ್ ಕುಮಾರ್, ಪಿಡಿಒ ತನ್ವೀರ್ ಅಹಮದ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -