
Sidlaghatta : ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ (DCC) ಬ್ಯಾಂಕ್ನ ನಿರ್ದೇಶಕರಾಗಿ ಶಿಡ್ಲಘಟ್ಟದ ಡಾಲ್ಫಿನ್ ಸ್ಕೂಲ್ ನಾಗರಾಜ್ ಅವಿರೋಧ ಆಯ್ಕೆಯಾಗಿದ್ದು ಅವರ ಅಭಿಮಾನಿಗಳು, ಬೆಂಬಲಿಗರು ಶಿಡ್ಲಘಟ್ಟದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಶಿಡ್ಲಘಟ್ಟ ತಾಲೂಕಿನ SFCS ಬ್ಯಾಂಕುಗಳ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್ನ ನಿರ್ದೇಶಕ ಸ್ಥಾನಕ್ಕೆ ಡಾಲ್ಫಿನ್ ಸ್ಕೂಲ್ ನಾಗರಾಜ್ ಮತ್ತು ದಿಬ್ಬೂರಹಳ್ಳಿಯ ಡಿ.ಎಚ್.ನಾಗರಾಜ್ ನಾಮ ಪತ್ರ ಸಲ್ಲಿಸಿದ್ದರು. ಈ ಪೈಕಿ ಡಿ.ಎಚ್.ನಾಗರಾಜ್ ತಮ್ಮ ನಾಮಪತ್ರ ವಾಪಸ್ ಪಡೆದಿದ್ದು ಡಾಲ್ಫಿನ್ ನಾಗರಾಜ್ ಮಾತ್ರ ಕಣದಲ್ಲಿ ಉಳಿದು ಅವಿರೋಧ ಆಯ್ಕೆ ಆಗಿದ್ಧಾರೆ.
ನಾಗರಾಜ್ ಶಿಡ್ಲಘಟ್ಟಕ್ಕೆ ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು, ಬೆಂಬಲಿಗರು ನಗರದ ಕೋಟೆ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಾಗರಾಜ್ಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಹೂ ಹಾರ ಹಾಕಿ ಅಭಿನಂದಿಸಿದರು.
ಈ ವೇಳೆ ಮಾತನಾಡಿದ ನಾಗರಾಜ್, ಡಿಸಿಸಿ ಬ್ಯಾಂಕ್ಗೆ ನನ್ನನ್ನು ಎಲ್ಲ ಪಕ್ಷದ ಮುಖಂಡರು ಕೂಡ ಅವಿರೋಧ ಆಯ್ಕೆ ಮಾಡಲು ಸಹಕರಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಮೇಲೂರು ರವಿಕುಮಾರ್ ಸೇರಿದಂತೆ ಎಲ್ಲ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರು, ಎಸ್ಎಫ್ಸಿಎಸ್ ಬ್ಯಾಂಕುಗಳ ಅಧ್ಯಕ್ಷರು, ಕಾರ್ಯದರ್ಶಿಗಳು ನನಗೆ ಬೆಂಬಲ ನೀಡಿದ್ದು ಅವರ ನಿರೀಕ್ಷೆಯಂತೆ ಕಾರ್ಯನಿರ್ವಹಿಸುತ್ತೇನೆ ಎಂದರು.
ಡಿಸಿಸಿ ಬ್ಯಾಂಕ್ಗೆ ಕಳೆದ ಅವಧಿಯಲ್ಲಿ ನಾನು ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದು ಈ ತಾಲೂಕಿಗೆ ಕೋಟ್ಯಂತರ ರೂಪಾಯಿಗಳನ್ನು ಸಾಲವಾಗಿ ಕೊಡಿಸಿದ್ದೆ. ಎಲ್ಲ ಎಸ್ಎಫ್ಸಿಎಸ್ ಬ್ಯಾಂಕುಗಳ ಮೂಲಕ ಸ್ವ ಸಹಾಯ ಸಂಘಗಳು, ರೈತರಿಗೆ ಕೋಟ್ಯಂತರ ರೂಪಾಯಿಗಳ ಸಾಲ ಕೊಡಿಸಿದ್ದೆ. ಈ ಬಾರಿ ಎಲ್ಲ ಪಕ್ಷಗಳ ಮುಖಂಡರು ಕೂಡ ನನ್ನನ್ನ ಅವಿರೋಧ ಆಯ್ಕೆ ಆಗುವಂತೆ ಮಾಡಿದ್ದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಾತೀತವಾಗಿ ಇನ್ನಷ್ಟು ಮಂದಿ ರೈತರು, ಸ್ವ ಸಹಾಯ ಸಂಘಗಳಿಗೆ ಸಾಲ ಇನ್ನಿತರೆ ಸವಲತ್ತುಗಳನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.