Home News ಸಿದ್ಧರಾಮಯ್ಯ ಎತ್ತಿನಹೊಳೆ ನೀರು ಹರಿಸಿದರೆ ರಾಜಕೀಯ ಸನ್ಯಾಸ

ಸಿದ್ಧರಾಮಯ್ಯ ಎತ್ತಿನಹೊಳೆ ನೀರು ಹರಿಸಿದರೆ ರಾಜಕೀಯ ಸನ್ಯಾಸ

0

Sidlaghatta : “ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಧಿಕಾರದಲ್ಲಿರುವ ಅವಧಿಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯಡಿ ನೀರು ಹರಿಸಿದರೆ ನಾನು ರಾಜಕೀಯ ಸನ್ಯಾಸ ಪಡೆಯುತ್ತೇನೆ” ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಅವರು ಸವಾಲು ಹಾಕಿದ್ದಾರೆ.

ನಗರದ ಬಿಜೆಪಿ ಸೇವಾ ಸೌಧದಲ್ಲಿ ಬುಧವಾರ ನಡೆದ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರ ನೋಂದಣಿ ಕುರಿತ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಮುಖ್ಯಮಂತ್ರಿ ಬಂಗಾರಪೇಟೆಯಲ್ಲಿ ನೀಡಿದ ಹೇಳಿಕೆಯಲ್ಲಿ — ಎರಡು ವರ್ಷಗಳಲ್ಲಿ ಎತ್ತಿನಹೊಳೆ ನೀರು ಹರಿಸುತ್ತೇವೆ ಎಂದಿದ್ದಾರೆ. ಆದರೆ ಈ ಯೋಜನೆಯ ಮೂಲ ಉದ್ದೇಶವೇ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವುದು. ಇಂದಿಗೆ ಯೋಜನೆಯ ಉದ್ದೇಶವೇ ಮರೆತುಬಿಟ್ಟಿದ್ದಾರೆ. ಯೋಜನೆಯ ವೆಚ್ಚವನ್ನು ₹8,835 ಕೋಟಿ ರೂ.ದಿಂದ ₹30,000 ಕೋಟಿ ರೂ.ವರೆಗೆ ಏರಿಸಿದ್ದು ಮಾತ್ರ ಅವರ ಸಾಧನೆ!” ಎಂದು ಟೀಕಿಸಿದರು.

ನಾರಾಯಣಸ್ವಾಮಿ ಮುಂದುವರಿಸಿ, “ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವಿನ ಸಂವಹನ ಸಂಪೂರ್ಣ ಕುಸಿದಿದೆ. ಮುಖ್ಯಮಂತ್ರಿಯವರ ದುರಹಂಕಾರದಿಂದಾಗಿ ರಾಜ್ಯದ ಅಭಿವೃದ್ಧಿ ಯೋಜನೆಗಳು ಹಿಂದುಳಿದಿವೆ. ರಾಜ್ಯ ಬಡವಾಗುತ್ತಿದೆ” ಎಂದು ಆರೋಪಿಸಿದರು.

ಅವರು ಬಿಜೆಪಿ ಪರವಾಗಿ ವಿಶ್ವಾಸ ವ್ಯಕ್ತಪಡಿಸಿ, “ಎನ್‌ಡಿಎಗೆ ಈಗ ಶುಕ್ರದೆಸೆ ಪ್ರಾರಂಭವಾಗಿದೆ. ಗ್ರಾಮ ಪಂಚಾಯಿತಿ ಇಂದಿನಿಂದ ಬಿಬಿಎಂಪಿ ತನಕ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಗೆಲುವು ಸಾಧಿಸುತ್ತದೆ. ಮುಂದಿನ ಸರ್ಕಾರ ನಮ್ಮದ್ದಾಗಲಿದೆ” ಎಂದು ಹೇಳಿದರು.

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಕುರಿತು ಅವರು ಟೀಕಿಸಿ, “ಪಂಚ ಗ್ಯಾರಂಟಿ ಎಂಬ ಛೂಮಂತ್ರ ಹೇಳುತ್ತಾ ಜನರ ಗಮನ ತಪ್ಪಿಸುತ್ತಿದ್ದಾರೆ. ಯುವನಿಧಿ ಯೋಜನೆ ರಾಜ್ಯದ ಕೇವಲ 3% ನಿರುದ್ಯೋಗಿ ಪದವೀಧರರಿಗೂ ಸಿಕ್ಕಿಲ್ಲ. ಜಿಲ್ಲೆಯ ಪ್ರಕಾರ ಎಷ್ಟು ಜನರಿಗೆ ಸಹಾಯಧನ ನೀಡಲಾಗಿದೆ ಎಂಬ ಮಾಹಿತಿ ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮಾತನಾಡಿದ ಅವರು, “ಭಾರತ್ ಪೆಟ್ರೋಲಿಯಂನ ನಿವೃತ್ತ ಅಧಿಕಾರಿಯ ಮಗಳ ಶವ ಸಾಗಣೆಯ ವೇಳೆ ಲಂಚ ಪಡೆಯಲಾಗಿದೆ — ಇದು ಸಿದ್ಧರಾಮಯ್ಯ ಸರ್ಕಾರದ ಕಾರ್ಯವೈಖರಿಯ ನಿದರ್ಶನ. ಜನರ ಆಕ್ರೋಶ ಉಕ್ಕುತ್ತಿದೆ, ಶೀಘ್ರದಲ್ಲೇ ಜನ ಬೀದಿಗಿಳಿಯುವರು” ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ, “ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಧರಣಿ ನಡೆಸುತ್ತಿರುವಾಗ ರಾಜ್ಯಾಧ್ಯಕ್ಷ ಬಿ.ವೈ. ರಾಘವೇಂದ್ರ ಅವರು ಅವರ ಜೊತೆ ನಿಂತಿದ್ದಾರೆ. ಇಂತಹ ಜನಪರ ನಾಯಕರಿಂದಲೇ ರಾಜ್ಯದ ನಿಜವಾದ ಅಭಿವೃದ್ಧಿ ಸಾಧ್ಯ,” ಎಂದರು.

ಸಭೆಯಲ್ಲಿ ಚಿಂತಾಮಣಿ ಬಿಜೆಪಿ ಮುಖಂಡ ವೇಣುಗೋಪಾಲ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ, ಮಾಜಿ ಅಧ್ಯಕ್ಷ ಸುರೇಂದ್ರಗೌಡ, ನರೇಶ್ ಹಾಗೂ ಇತರ ಬಿಜೆಪಿ ಮುಖಂಡರು ಹಾಜರಿದ್ದರು.

For Daily Updates WhatsApp ‘HI’ to 7406303366

Namma Sidlaghatta WhatsApp Channel

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version