ಕುರಿ ಮೇಯಿಸಲು ತೆರಳಿದ್ದ ಇಬ್ಬರು ಬಾಲಕರು ಬಚ್ಚನಹಳ್ಳಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದ ಮೂರ್ತಿ ಹಾಗೂ ನಾಗಮಣಿ ದಂಪತಿಗಳ ಮಗ ದರ್ಶನ್(15) ಹಾಗು ಇದೇ ತಾಲ್ಲೂಕಿನ ಕಾಚಹಳ್ಳಿ ಗ್ರಾಮದ ಮಂಜುನಾಥ ಹಾಗೂ ಗಂಗರತ್ನಮ್ಮ ದಂಪತಿಗಳ ಮಗ ಶಿವ(14) ಮೃತ ದುರ್ದೈವಿಗಳಾಗಿದ್ದಾರೆ.
ದರ್ಶನ್ 10 ನೇ ತರಗತಿಯಲ್ಲಿ ಓದುತ್ತಿದ್ದರೆ ಶಿವ 9 ನೇ ತರಗತಿಯಲ್ಲಿ ಓದುತ್ತಿದ್ದು ಕೊರೋನಾ ಹಿನ್ನಲೆಯಲ್ಲಿ ಶಾಲೆಗಳ ಆರಂಭವಾಗದ ಕಾರಣ ಶಿವ ತಮ್ಮ ಸಂಭಂದಿಕರ ಮನೆಗೆ ಬಂದಿದ್ದು ಮಂಗಳವಾರ ಕುರಿ ಮೇಯಿಸಲೆಂದು ದರ್ಶನ್ ಜೊತೆಗೂಡಿ ಹೋಗಿದ್ದಾನೆ.
ಬಚ್ಚನಹಳ್ಳಿಯ ಆಶ್ರಮ ವಸತಿ ಶಾಲೆಯ ಹಿಂಭಾಗದಲ್ಲಿರುವ ಯರ್ರಕುಂಟೆಯ ಹತ್ತಿರ ಕುರಿಗಳನ್ನು ಮೇಯಲು ಬಿಟ್ಟು ಈಜು ಹೊಡೆಯಲು ಕುಂಟೆಗಿಳಿದಿದ್ದ ದರ್ಶನ್ ಹಾಗು ಶಿವ ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ದಿಬ್ಬೂರಹಳ್ಳಿ ಪೊಲೀಸರು ಭೇಟಿ ನೀಡಿ ಮೃತ ದೇಹಗಳನ್ನು ನೀರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.