ಪ್ರತಿಯೊಬ್ಬರೂ ಇ ಸಂಜೀವಿನಿ ಓಪಿಡಿ ಆಪ್ ಡೌನ್ ಲಾಡ್ ಮಾಡಿಕೊಳ್ಳುವ ಮೂಲಕ ಮನೆಯಲ್ಲಿ ಕುಳಿತು ತಮ್ಮ ಖಾಯಿಲೆಗೆ ನುರಿತ ವೈದ್ಯರಿಂದ ಸಲಹೆ ಸೂಚನೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ಮೂರ್ತಿ ಹೇಳಿದರು.
ನಗರದ ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಇ ಸಂಜೀವಿನಿ ಟೆಲಿ ಮೆಡಿಸಿನ್ ಸೇವೆಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ದೊರೆತಿದೆ. ರಾಜ್ಯಾದ್ಯಂತ ಸುಮಾರು 700 ಕ್ಕೂ ಹೆಚ್ಚು ವೈದ್ಯರು ಟೆಲಿ ಮೆಡಿಸಿನ್ ಸೇವೆ ನೀಡುತ್ತಿದ್ದಾರೆ. ಟೆಲಿ ಮೆಡಿಸಿನ್ ಸೇವೆಯಿಂದ ವಿನಾಕಾರಣ ಜನರು ಆಸ್ಪತ್ರೆಗಳಿಗೆ ಅಲೆಯುವುದು ತಪ್ಪುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಫೋನ್ಗಳಲ್ಲಿ ಇ ಸಂಜೀವಿನಿ ಆಪ್ ಡೌನ್ಲೋಡ್ ಮಾಡಿಕೊಳ್ಳುವುದರಿಂದ ಮನೆಯಲ್ಲಿಯೇ ಕುಳಿತು ತಮ್ಮ ಹಾಗೂ ತಮ್ಮ ಸಂಬಂಧಿಕರ ಆರೋಗ್ಯ ಸುಧಾರಿಸಿಕೊಳ್ಳಬಹುದು. ಈಗಾಗಲೇ ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇ ಸಂಜೀವಿನಿ ಮೂಲಕ ಟೆಲಿ ಮೆಡಿಸಿನ್ ಸೇವೆ ಬಳಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಲಿದೆ ಎಂದರು.
ಮೊಬೈಲ್ ಮೂಲಕ ಚಿಕಿತ್ಸೆ :
ತಮ್ಮ ಮೊಬೈಲ್ನಲ್ಲಿ ಪ್ಲೇ ಸ್ಟೋರ್ ಮೂಲಕ ಇ ಸಂಜೀವಿನಿ ಆಪ್ ಡೌನ್ ಲೋಡ್ ಮಾಡಿಕೊಂಡಾಗ ಇ ಸಂಜೀವಿನಿ ಮುಖಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನೀಡಿ ಓಟಿಪಿ ಮೂಲಕ ನೋಂದಣಿ ಪಡೆದುಕೊಳ್ಳಬೇಕು. ಬಳಿಕ ನಿಮ್ಮ ಅಥವ ರೋಗಿಯ ಪ್ರಾಥಮಿಕ ಮಾಹಿತಿ ನಮೂದಿಸಿ ಖಾಯಿಲೆ ವಿಧ ಆಯ್ಕೆ ಮಾಡಿದಾಗ ರೋಗಿಯ ಐಡಿ ಹಾಗೂ ಟೋಕನ್ ಸಂಖ್ಯೆ ಸಿಗಲಿದೆ. ಇದನ್ನು ಬಳಸಿ ಲಾಗ್ ಇನ್ ಆದಲ್ಲಿ ಆಪ್ನಲ್ಲಿ ವಿಡಿಯೋ ಕಾಲ್ ಮುಖಾಂತರ ವೈದ್ಯರನ್ನು ಸಂಪರ್ಕಿಸಬಹುದು. ಪ್ರತಿನಿತ್ಯ ಬೆಳಗ್ಗೆ 10 ರಿಂದ ಸಂಜೆ ನಾಲ್ಕು ಗಂಟೆಯವರೆಗೂ ಸೇವೆ ಲಭ್ಯವಿರುತ್ತದೆ. ಸ್ಥಳೀಯ ಆರೋಗ್ಯ ಉಪಕೇಂದ್ರಗಳಿಗೆ ಭೇಟಿ ನೀಡಿಯೂ ಇ ಸಂಜೀವಿನಿಯ ಟೆಲಿ ಮೆಡಿಸಿನ್ ನೆರವು ಪಡೆಯಬಹುದು.
ಡೌನ್ಲೋಡ್ ಮಾಡಿಕೊಳ್ಳಲು : https://play.google.com/store/apps/details?id=in.hied.esanjeevaniopd&hl=en_IN&gl=US