ತಾಲ್ಲೂಕಿನ ಹಂಡಿಗನಾಳದ ಈರಣ್ಣ ಕೆಂಪಣ್ಣ ಕಲ್ಯಾಣ ಮಂಟಪದಲ್ಲಿ ಈರಣ್ಣ ಕೆಂಪಣ್ಣ ದೇವಾಲಯ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಆರನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಈರಣ್ಣ ಕೆಂಪಣ್ಣ ದೇವಾಲಯ ಟ್ರಸ್ಟ್ ನ ಅಧ್ಯಕ್ಷ ನಿವೃತ್ತ ಐ.ಪಿ.ಎಸ್ ಅಧಿಕಾರಿ ಎನ್.ನಾಗರಾಜ್ ಮಾತನಾಡಿದರು.
ಪ್ರತಿಯೊಬ್ಬರಲ್ಲೂ ಒಂದು ವ್ಯಕ್ತಿತ್ವ ಇರುತ್ತದೆ. ಇದನ್ನು ಗುರುತಿಸುವಂತ ಕೆಲಸವಾಗಬೇಕು. ಇನ್ನೊಬ್ಬರನ್ನು ಅನುಕರಣೆ ಮಾಡುವ ಬದಲು ತಮ್ಮದೇ ಆದ ಭಿನ್ನ ವ್ಯಕ್ತಿತ್ವದಿಂದ ನಮ್ಮನ್ನು ನಾವು ರೂಡಿಸಿಕೊಳ್ಳಬೇಕು. ಜೀವನದ ಗುರಿ ಮುಟ್ಟಲು ಹಲವು ದಾರಿಗಳಿವೆ. ಏನೇ ಅಡೆತಡೆ ಬಂದರೂ ಯಶಸ್ಸಿನ ದಡ ಸೇರುತ್ತೇನೆ ಎಂಬ ದೃಢ ನಿರ್ಧಾರ ಇಂದಿನ ಮಕ್ಕಳಲ್ಲಿ ಬೇಕಾಗಿದೆ, ನಮ್ಮ ಮೇಲೆ ನಮಗೆ ವಿಶ್ವಾಸ ಇರಬೇಕು ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್ ಮಾತನಾಡಿ, ಕಲಿಕೆ ಎಂಬುವುದಕ್ಕೆ ಕೊನೆ ಎಂಬುದಿಲ್ಲ. ಅದು ನಿರಂತರ ಪ್ರಕ್ರಿಯೆ, ಮನುಷ್ಯ ಹುಟ್ಟಿನಿಂದ ಸಾಯೊವರೆಗೂ ಒಂದಲ್ಲ ಒಂದು ವಿಷಯವನ್ನು ಕಲಿಯುತ್ತಲೇ ಸಾಗುತ್ತಾನೆ. ಆದರೆ, ಮಕ್ಕಳು ಕಲಿಕೆಯಲ್ಲಿ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ವಿಷಯದ ಬಗ್ಗೆ ಪ್ರಶ್ನೆ ಮಾಡುವುದರಿಂದ ಹೆಚ್ಚೆಚ್ಚು ಮಾಹಿತಿ ಲಭ್ಯವಾಗುತ್ತದೆ ಎಂದರು.
ಈಚೆಗೆ ನಿಧನರಾದ ಟ್ರಸ್ಟ್ ನ ಗೌರವಾಧ್ಯಕ್ಷರಾಗಿದ್ದ ಆನೂರು ಪಿ.ವಿ.ನಾಗರಾಜ್ ಹಾಗೂ ಗುಡಿಜಾತ್ರೆ ಸಮಿತಿ ಸದಸ್ಯ ವಿಕ್ರಂ ಅವರಿಗೆ ಈ ಸಂದರ್ಭದಲ್ಲಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಈರಣ್ಣ ಕೆಂಪಣ್ಣ ದೇವಾಲಯ ಒಕ್ಕಲಿನ ಕುಟುಂಬಗಳ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಆರ್.ಕುಶಾಲಿನಿ, ಜಿ.ಆರ್.ವರ್ಷಿತ, ಮುನೇಗೌಡ ಅವರನ್ನು ಗೌರವಿಸಲಾಯಿತು.
ಈರಣ್ಣ ಕೆಂಪಣ್ಣ ದೇವಾಲಯ ಟ್ರಸ್ಟ್ ಉಪಾಧ್ಯಕ್ಷ ಆರ್.ರವಿ, ಕಾರ್ಯದರ್ಶಿ ಅಶ್ವತ್ಠಯ್ಯ, ಮುನಿರಾಜು, ಮುನಿಸ್ವಾಮಿಗೌಡ, ಡಾ.ನವೀನ್, ರಾಜಗೋಪಾಲ್, ದೇವರಾಜ್, ನಂಜಪ್ಪ, ರಮೇಶ್, ರಾಜಣ್ಣ, ಮಂಜುನಾಥ್, ಬಿ.ಎಂ.ಜಯರಾಮ್, ಗೋವಿಂದರಾಜು, ರಾಮದಾಸ್ ಹಾಜರಿದ್ದರು.