95% ರಷ್ಟು ಕೃಷಿ ಸಾಲವನ್ನೇ ಬ್ಯಾಂಕ್ ನೀಡಿ ರೈತಸ್ನೇಹಿಯಾಗಿ ಗ್ರಾಮೀಣ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ನಮ್ಮ ಗ್ರಾಹಕರು ಹಾಗೂ ಬಂಡವಾಳದಾರರೂ ಕೂಡ ರೈತರೇ ಆಗಿದ್ದು, ಬ್ಯಾಂಕ್ ನ ಹೊಸ ಯೋಜನೆಗಳು ಗ್ರಾಹಕರನ್ನು ತಲುಪಲೆಂದು “ರಿಟೇಲ್ ಹಬ್ಬ” ಆಚರಿಸುತ್ತಿದ್ದೇವೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ವಿಶ್ವನಾಥ್ ತಿಳಿಸಿದರು.
ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಿಡ್ಲಘಟ್ಟ ಶಾಖೆಯ ವತಿಯಿಂದ ಆಯೋಜಿಸಿದ್ದ “ರಿಟೇಲ್ ಹಬ್ಬ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 85 ಶಾಖೆಗಳನ್ನು ಗ್ರಾಮೀಣ ಬ್ಯಾಂಕ್ ಹೊಂದಿದ್ದು, 5,200 ಕೋಟಿ ವಹಿವಾಟನ್ನು ಹೊಂದಿದೆ. ಬ್ಯಾಂಕ್ ರೈತರ ಜೊತೆಯಾಗಿಯೇ ಸದಾ ಇರುತ್ತದೆ. ಹೊಸ ಸಾಲಕ್ಕೆ ಅನುವು ಮಾಡಿಕೊಡಲು ಸುಸ್ತಿ ಸಾಲ ಯೋಜನೆ ಸಹ ಇದೆ. ಅಡಮಾನ ಸಾಲ, ಗೃಹ ನಿರ್ಮಾಣಕ್ಕೆ ಸಾಲ, ವಾಹನ ಖರೀದಿಸಲು ಸಾಲ, ವಿದ್ಯಾಭ್ಯಾಸಕ್ಕೆ ಸಾಲ ನೀಡುವುದಲ್ಲದೆ, ಸರ್ಕಾರದ ವಿವಿಧ ಯೋಜನೆಗಳನ್ನು ಸಹ ಜನರಿಗೆ ತಲುಪಿಸಲಿದ್ದೇವೆ. ವಿವಿಧ ರೀತಿಯ ವಿಮಾ ಯೋಜನೆಗಳಿವೆ. ಇವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಿಡ್ಲಘಟ್ಟ ಶಾಖೆಯ ಹಿರಿಯ ವ್ಯವಸ್ಥಾಪಕ ಎಂ.ಎಸ್.ರಮೇಶ್ ಮಾತನಾಡಿ, ಗ್ರಾಹಕರಿಗೆ ಅದರಲ್ಲೂ ರೈತರಿಗೆ ಹೆಚ್ಚು ಸೇವೆ, ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಡ್ಡಿ ಹಾಗೂ ವಿವಿಧ ಶುಲ್ಕಗಳ ದರವನ್ನು ಕಡಿತಗೊಳಿಸಿದ್ದೇವೆ. ಕೃಷಿ ಅವಧಿ ಸಾಲ ಹೆಚ್ಚು ನೀಡಲಿದ್ದೇವೆ. ಕೃಷಿ ಮೇಳಗಳನ್ನು ಸಹ ಆಯೋಜಿಸುತ್ತೇವೆ ಎಂದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಾದ ಸಂಗಮೇಶ್ ಪ್ರಸಾದ್, ಎ.ನವೀನ್ ಕುಮಾರ್, ಬ್ಯಾಂಕ್ ಸಿಬ್ಬಂದಿ ರಾಮಸತ್ಯನಾರಾಯಣ, ಶ್ರೀಕಾಂತ್, ತಿರುಮಲೇಶ್, ದೇವರಾಜ್, ಚಂದ್ರಶೇಖರ್ ಹಾಜರಿದ್ದರು.