Home News ಅಮ್ಮನಕೆರೆಗೆ ಎಚ್‌ಎನ್ ವ್ಯಾಲಿಯ ನೀರು ಶೀಘ್ರದಲ್ಲಿ ಬರಲಿದೆ

ಅಮ್ಮನಕೆರೆಗೆ ಎಚ್‌ಎನ್ ವ್ಯಾಲಿಯ ನೀರು ಶೀಘ್ರದಲ್ಲಿ ಬರಲಿದೆ

0
hn valley water sidlaghatta

ಶಿಡ್ಲಘಟ್ಟ ನಗರದಲ್ಲಿನ ಪ್ರವಾಸಿ ಮಂದಿರದಲ್ಲಿ ಎಚ್‌ಎನ್ ವ್ಯಾಲಿಯ ಯೋಜನೆಯಡಿ ಅಮ್ಮನಕೆರೆಗೆ ನೀರು ಹರಿಸುವ ಕಾರ‍್ಯ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಶಾಸಕ ವಿ.ಮುನಿಯಪ್ಪ ಅವರು ಕರೆದಿದ್ದ ಅಧಿಕಾರಿಗಳ ಅನೌಪಚಾರಿಕ ಸಭೆಯಲ್ಲಿ ಎಚ್‌ಎನ್ ವ್ಯಾಲಿ ಯೋಜನೆಯ ಇಂಜಿನಿಯರ್ ಪ್ರದೀಪ್ ಅವರು ಮಾಹಿತಿ ನೀಡಿದರು.

ಈಗಾಗಲೆ ಶಿಡ್ಲಘಟ್ಟ ತಾಲ್ಲೂಕಿನ ಗುಡಿಹಳ್ಳಿ ಕೆರೆಗೆ ನೀರು ಹರಿದು ಬರುತ್ತಿದ್ದು ಮುಂದಿನ ವಾರದಲ್ಲಿ ನಗರ ಹೊರವಲಯದ ಅಮ್ಮನಕೆರೆಗೆ ಗುಡಿಹಳ್ಳಿಯ ಕೆರೆಯಿಂದ ಎಚ್‌ಎನ್ ವ್ಯಾಲಿಯ ನೀರು ಹರಿದು ಬಿಡಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಖಾತ್ರಿಪಡಿಸಿದರು.

ಎಚ್‌ಎನ್ ವ್ಯಾಲಿ ಯೋಜನೆಯಡಿ ಬರುವ ಕೆರೆಗಳಲ್ಲಿ ಕೆರೆಗಳು ತುಂಬುವ ತನಕ ಕಾಯದೆ ಶೇ 50ರಷ್ಟು ತುಂಬಿದರೆ ಸಾಕು, ಮುಂದಿನ ಕೆರೆಗಳಿಗೆ ತೂಬು ಮೂಲಕ ನೀರು ಹರಿಸಲು ಸಚಿವರ ಆದೇಶವಿದ್ದು ಅದರಂತೆ ಅಮ್ಮನಕೆರೆಗೆ ಮುಂದಿನ ವಾರ ನೀರು ಹರಿಸಲು ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಆದರೆ ಕೆರೆ ಅಂಗಳದಲ್ಲಿ ಜಂಗಲ್ ತೆಗೆಯುವುದು, ಸಮಾಧಿ ಸ್ಥಳವನ್ನು ಗುರ್ತಿಸುವುದು, ಕೆರೆಯ ಅಂಗಳವನ್ನು ಸಮತಟ್ಟು ಮಾಡುವಂತ ಕೆಲ ಕೆಲಸಗಳು ಬಾಕಿ ಇದ್ದು ಆ ಕೆಲಸಗಳು ಸಂಪೂರ್ಣವಾಗಿ ಆಗಬೇಕಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಎಚ್‌ಎನ್ ವ್ಯಾಲಿ ಯೋಜನೆಯ ಯೋಜನಾಧಿಕಾರಿ ಕೋಟೇಶ್ವರ ರಾವ್ ಮಾತನಾಡಿ, ಕೆರೆಯಲ್ಲಿನ ಜಾಲಿ ಮರಗಳನ್ನು ತೆಗೆಯಲು ಟೆಂಡರ್ ಪಡೆದಿದ್ದ ವ್ಯಕ್ತಿಯು ನಿಧಾನಗತಿಯಲ್ಲಿ ಮರಗಳನ್ನು ತೆರವುಗೊಳಿಸುವ ಕಾರ‍್ಯ ಮಾಡಿದ್ದರಿಂದ ಮರಗಳ ತೆರವು ಕಾರ‍್ಯ ತಡವಾಯಿತು. ಇದೀಗ ಎಲ್ಲ ಮರಗಳನ್ನು ತೆರವುಗೊಳಿಸಿದ್ದು ಸಣ್ಣ ಪುಟ್ಟ ಗಾತ್ರದ ಮರ ಜಂಗಲ್ ಮಾತ್ರ ಉಳಿದುಕೊಂಡಿದೆ. ಅವುಗಳನ್ನು ತೆಗೆದು ನೆಲವನ್ನು ಸಮತಟ್ಟು ಮಾಡಿಕೊಳ್ಳುವ ಕಾರ‍್ಯ ಆಗಬೇಕಿದ್ದು ಆ ಕೆಲಸವನ್ನು ಎಚ್‌ಎನ್ ವ್ಯಾಲಿ ಯೋಜನೆಯಲ್ಲೆ ಕೈಗೊಳ್ಳಲಾಗುವುದು ಎಂದರು.

ಜತೆಗೆ ಕೆರೆಯ ಅಂಚಿನಲ್ಲಿ ಸಮಾಧಿಗಳಿದ್ದು ಅವುಗಳ ಸರ್ವೆ ಕಾರ‍್ಯ ಮಾಡಿಸಿ ಆ ಜಾಗವನ್ನು ಬಿಟ್ಟು ಉಳಿದ ಜಾಗಕ್ಕೆ ತಡೆ ಗೋಡೆ ನಿರ್ಮಾಣ ಮಾಡುವ ಕಾರ‍್ಯ ಆಗಬೇಕಿದ್ದು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೆ ಪತ್ರ ಬರೆದಿದ್ದು ಆ ಕೆಲಸವೂ ವಾರದಲ್ಲಿ ಮುಗಿಯಲಿದೆ ಎಂದರು.

ಇನ್ನು ಕೆರೆಯಲ್ಲಿನ ಮರಗಳನ್ನು ಈಗಾಗಲೆ ತೆಗೆಯಲಾಗಿದೆ. ಇನ್ನುಳಿದ ಮರಗಳನ್ನು ತೆಗೆಯದೆ ಇನ್ನುಳಿದ ಕೆಲಸವನ್ನು ಮಾಡಿಕೊಳ್ಳಲು ನಮ್ಮ ಇಲಾಖೆಯಿಂದ ಏನೂ ತಕರಾರು ಇಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದರು.

ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ವಿ.ಮುನಿಯಪ್ಪ ಅವರು, ಕಳೆದ ತಿಂಗಳು ಜಿಲ್ಲೆಗೆ ಭೇಟಿ ನೀಡಿದ್ದ ಸಚಿವ ಮಾಧುಸ್ವಾಮಿ ಅವರ ಬಳಿ ಚರ್ಚಿಸಿದಂತೆ ಅಮ್ಮನಕೆರೆಗೆ ನೀರು ಹರಿಸುವ ಕಾರ‍್ಯ ಪ್ರಗತಿಯಲ್ಲಿದೆ. ಅಂದು ನೀಡಿದ ಗಡುವಿನ ಒಳಗೆ ನೀರು ಹರಿಸಲೆಬೇಕೆಂದು ತಾಕೀತು ಮಾಡಿದರು.

ಇದೀಗ ನೀಡಿದ ಎಲ್ಲ ಮಾಹಿತಿಯಂತೆ ಮುಂದಿನ ವಾರದಲ್ಲಿ ನೀರು ಹರಿಸುವ ಬಗ್ಗೆ ಸ್ಪಷ್ಟಪಡಿಸಿದ್ದು ಯಾವುದೆ ಕಾರಣಕ್ಕೂ ಅದು ತಪ್ಪಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿ ಮುಂದಿನ ವಾರ ಅಮ್ಮನಕೆರೆಗೆ ನೀರು ಹರಿಯಲೇಬೇಕೆಂದು ಒತ್ತಾಯಿಸಿದರು.

ಅರಣ್ಯ ಅಧಿಕಾರಿಗಳಾದ ಸುರೇಶ್, ದಿವ್ಯ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version