Sidlaghatta : ಶಿಡ್ಲಘಟ್ಟ ನಗರದ ಗೃಹ ರಕ್ಷಕ ದಳದ (Home Guards)ನೂತನ ಕಟ್ಟಡದ ಉದ್ಘಾಟನೆಯನ್ನು (Inauguration) ಸೋಮವಾರ ಚಿಂತಾಮಣಿ ವೃತ್ತ ಅಡಿಷಿನಲ್ ಎಸ್ಪಿ ಕುಶಾಲ್ ಚೌಕ್ಸೆ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಎಲೆಮರೆಯ ಕಾಯಿಯಂತೆ ಗೃಹರಕ್ಷಕರು ಸಮಾಜದ ಆಸ್ತಿ ಪಾಸ್ತಿ ಹಾಗೂ ಜನರ ಜೀವ ರಕ್ಷಣೆಯಲ್ಲಿ ವರ್ಷದ ಎಲ್ಲಾ 365 ದಿನವೂ ನಿರಂತರವಾಗಿ ಕೆಲಸ ಮಾಡುತ್ತಿರುತ್ತಾರೆ. ಅವರು ಯಾವತ್ತೂ ಮುನ್ನಲೆಗೆ ಬರುವುದೇ ಇಲ್ಲ. ಕನಿಷ್ಠ ಗೌರವ ಧನಕ್ಕೆ ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕರು ನಿಜವಾಗಿಯೂ ಅಭಿನಂದನೆಗೆ ಅರ್ಹರು ಎಂದು ತಿಳಿಸಿದರು.
ಈ ಹಿಂದೆ ಟೌನ್ ಪೋಲಿಸ್ ಠಾಣೆ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡವನ್ನು ಗೃಹ ರಕ್ಷಕ ಕಚೇರಿಯನ್ನಾಗಿ ಬದಲಾಯಿಸಿರುವುದು ಸಂತೋಷವಾಗುತ್ತಿದೆ. ನಿಮ್ಮ ಮುಂದಿನ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ನಡೆಸಲು ಕಚೇರಿಯ ಸದ್ಬಳಿಕೆಯಾಗಲಿ ಎಂದು ಹೇಳಿದರು.
ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಕಾರಾಗೃಹ ಇಲಾಖೆ, ಸಾರಿಗೆ ಇಲಾಖೆ ಹೀಗೆ ಹತ್ತು ಹಲವು ಇಲಾಖೆಗಳಲ್ಲಿ ದಿನ ನಿತ್ಯ ಸೇವೆ ಸಲ್ಲಿಸುವುದರ ಜೊತೆಗೆ, ಪ್ರಾಕೃತಿಕ ದುರಂತಗಳು ಮತ್ತು ಮಾನವ ನಿರ್ಮಿತ ದುರಂತಗಳ ಸಮಯದಲ್ಲಿ ಆಪತ್ ಬಾಂಧವರಂತೆ ಗೃಹರಕ್ಷಕರು ಸೇವೆ ಮಾಡುತ್ತಾರೆ. ತುರ್ತು ಪರಿಸ್ಥಿತಿಯಲ್ಲಿ ಪೋಲಿಸರೊಂದಿಗೆ ಸಹಕಾರ ನೀಡಿ ಶಾಂತಿ ಸುವ್ಯವಸ್ಥೆ ಕಾಪಾಡಲು ಗೃಹ ರಕ್ಷಕ ದಳ ಸದಾ ನಾಗರೀಕರ ಸೇವೆ ಮಾಡುತ್ತಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೃಹ ರಕ್ಷಕ ದಳದ ಸಮಾದೇಷ್ಟ ಸುರೇಶ್ ಮಾತನಾಡಿ, ಪೋಲಿಸರಿಗೂ ಗೃಹ ರಕ್ಷಕ ಇಲಾಖೆಗೂ ಅವಿನಾಭಾವ ಸಂಬಂಧ ಇದೆ. ಪೋಲಿಸರ ಎಲ್ಲಾ ರೀತಿಯ ಕರ್ತವ್ಯಗಳಲ್ಲಿ ಗೃಹ ರಕ್ಷಕರೂ ಸಮನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಾರೆ. ನೂತನ ಕಟ್ಟಡದ ನಿರ್ವಹಣೆಯ ಹೊಣೆ ಎಲ್ಲಾ ಗೃಹ ರಕ್ಷಕರದ್ದಾಗಿದೆ. ಸಮಯ ಪರಿಪಾಲನೆ ಅತಿ ಮುಖ್ಯವಾದದ್ದು. ಶಿಡ್ಲಘಟ್ಟ ಘಟಕ ಉತ್ತಮ ಹೆಸರು ಪಡೆಯಬೇಕೆಂದು ತಿಳಿಸಿದರು.
ಅವಿಭಾಜ್ಯ ಜಿಲ್ಲೆಯ ಕಂಪನಿ ಕಮಾಂಡರ್ ರೂಪಸಿರಮೇಶ್ ಪ್ರಾಸ್ತಾವಿಕ ಭಾಷಣ ಮಾಡಿ ನಗರದ ಗೃಹ ರಕ್ಷಕ ದಳ ನಡೆದು ಬಂದ ಹಾದಿ ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ಅತ್ಯುತ್ತಮ ಘಟಕ ಎಂದು ರಾಜ್ಯ ಮಟ್ಟದಲ್ಲಿ ಎರಡು ಬಾರಿ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದೇ ರೀತಿಯಲ್ಲಿ ಮುಂದುವರೆಯಬೇಕೆಂದು ಹೇಳಿದರು.
ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಸತೀಶ್, ಅಗ್ನಿಶಾಮಕ ದಳದ ಅಧಿಕಾರಿಗಳಾದ ರಾಮಕೃಷ್ಣಯ್ಯ, ಕದಿರಪ್ಪ, ರೇಷ್ಮೆ ಮಾರುಕಟ್ಟೆಯ ನಿರ್ದೇಶಕ ಶ್ರೀನಿವಾಸ್, ನರಸಿಂಹಯ್ಯ, ಭಾನುಪ್ರಕಾಶ್, ಪ್ರಭಾರಿ ಘಟಕಾಧಿಕಾರಿ ರಾಜೇಂದ್ರ ಪ್ರಸಾದ್, ಪ್ಲಟೂನ್ ಕಮಾಂಡರ್ ನಾರಾಯಣ ಸ್ವಾಮಿ, ವಿ.ಅಣ್ಯಪ್ಪ, ಎಚ್.ಎನ್.ಮುನಿರಾಜು, ಎಂ.ಮುರಳಿಧರ್, ಎಸ್.ರವಿಚಂದ್ರ, ಎಸ್.ಅಶ್ವಿನಿ, ಎಂ.ಎಂ.ಇಂದ್ರಮ್ಮ, ವೆಂಕಟೇಶ್ವರಿ ಹಾಜರಿದ್ದರು.