Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜರುಗಹಳ್ಳಿ ಕಾಲೋನಿ ಮೂಲಸೌಕರ್ಯಗಳ ಕೊರತೆಯಿಂದ ಹಲವು ವರ್ಷಗಳಿಂದ ಸಂಕಷ್ಟ ಎದುರಿಸುತ್ತಿದೆ.
In English: Jarugahalli Colony under Dibburahalli gram panchayat has been facing years of neglect — most of its 28 streetlights are non-functional, drains are choked with sewage and garbage, and a drinking water pipeline damaged during drainage works has stayed unrepaired for about 15 days. Residents, situated next to a forest area, say officials have taken no action despite repeated complaints to the panchayat development officer.
ಅರಣ್ಯ ಪ್ರದೇಶದ ಪಕ್ಕದಲ್ಲಿರುವ ಈ ಕಾಲೋನಿಯಲ್ಲಿ ಬೀದಿ ದೀಪಗಳು ಕೆಟ್ಟುಹೋಗಿದ್ದು, ಚರಂಡಿಗಳು ಕೊಳಚೆ ನೀರು ಹಾಗೂ ಕಸದಿಂದ ತುಂಬಿಕೊಂಡಿವೆ. ಇದರಿಂದ ನಿವಾಸಿಗಳು ರಾತ್ರಿ ವೇಳೆ ಭಯದಲ್ಲೇ ಬದುಕುವಂತಾಗಿದೆ.
ಕಾಲೋನಿಯಲ್ಲಿ ಸುಮಾರು 28 ವಿದ್ಯುತ್ ಕಂಬಗಳಿಗೆ ಬೀದಿ ದೀಪಗಳನ್ನು ಅಳವಡಿಸಲಾಗಿದ್ದರೂ, ಬಹುತೇಕ ಎಲ್ಲಾ ದೀಪಗಳು ಕೆಟ್ಟು ಹೋಗಿವೆ. ಪರಿಣಾಮ ಸಂಜೆ ಬಳಿಕ ಇಡೀ ಪ್ರದೇಶ ಕತ್ತಲಲ್ಲಿ ಮುಳುಗುತ್ತದೆ. ಅರಣ್ಯ ಪ್ರದೇಶದ ಸಮೀಪವಿರುವುದರಿಂದ ಕತ್ತಲಿನಲ್ಲಿ ಸಂಚರಿಸಲು ನಿವಾಸಿಗಳು ಆತಂಕ ಪಡುತ್ತಿದ್ದಾರೆ. ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ರಾತ್ರಿ ವೇಳೆ ಮನೆಯಿಂದ ಹೊರಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರ ಜೊತೆಗೆ ಕಾಲೋನಿಯ ಚರಂಡಿಗಳು ಕೊಳಚೆ ನೀರು ಮತ್ತು ಕಸದಿಂದ ತುಂಬಿಕೊಂಡಿದ್ದು, ನೀರು ಸರಾಗವಾಗಿ ಹರಿಯದೆ ರಸ್ತೆಗಳ ಬದಿಯಲ್ಲೇ ನಿಂತಿದೆ. ಕೊಳಚೆ ನೀರಿನಿಂದ ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಸ್ವಚ್ಛತೆ ಮರೀಚಿಕೆಯಾಗಿರುವುದರಿಂದ ನಿವಾಸಿಗಳ ಆರೋಗ್ಯದ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಕಾಮಗಾರಿ ವೇಳೆ ಹಾನಿಗೊಳಗಾದ ಪೈಪ್ ಲೈನ್
ಚರಂಡಿ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಜೆಸಿಬಿ ಯಂತ್ರದಿಂದ ಕುಡಿಯುವ ನೀರಿನ ಪೈಪ್ ಲೈನ್ ಹಾನಿಗೊಳಗಾಗಿದೆ. ಪೈಪ್ ಲೈನ್ ಹಾನಿಗೊಳಗಾಗಿ ಸುಮಾರು 15 ದಿನಗಳು ಕಳೆದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಪೈಪ್ ಲೈನ್ ದುರಸ್ತಿಗೆ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಲ್ಲಿ ಅನುದಾನ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.
“ಚರಂಡಿ ಕಾಮಗಾರಿ ಮಾಡಲು ಜೆಸಿಬಿ ಬಳಸುವ ವೇಳೆ ಪೈಪ್ಲೈನ್ ಕಿತ್ತುಹೋಗಿದೆ. 15 ದಿನಗಳಿಂದ ಸಮಸ್ಯೆ ಇದ್ದರೂ ಇನ್ನೂ ದುರಸ್ತಿ ಮಾಡಿಲ್ಲ. ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸುವ ಪ್ರಯತ್ನವಾಗಿಲ್ಲ” ಎಂದು ನಿವಾಸಿ ಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
“ಕಾಲೋನಿಯಲ್ಲಿ 28ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿವೆ. ಆದರೆ ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ರಾತ್ರಿ ವೇಳೆ ಇಡೀ ಗ್ರಾಮ ಕತ್ತಲಲ್ಲಿ ಮುಳುಗುತ್ತದೆ. ಅರಣ್ಯ ಪ್ರದೇಶದ ಪಕ್ಕದಲ್ಲಿರುವುದರಿಂದ ಯಾವುದೇ ಅಪಾಯ ಸಂಭವಿಸಿದರೆ ಯಾರು ಹೊಣೆ?” ಎಂದು ನಿವಾಸಿ ಮುನಿಕೃಷ್ಣ ಪ್ರಶ್ನಿಸಿದರು.
“ಚರಂಡಿಗಳಲ್ಲಿ ಕಸ ಹಾಗೂ ಕೊಳಚೆ ನೀರು ತುಂಬಿಕೊಂಡಿದೆ. ದುರ್ವಾಸನೆ ತಾಳಲಾರದಂತಾಗಿದೆ. ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಸ್ವಚ್ಛತೆ ಮಾಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ” ಎಂದು ನಿವಾಸಿ ವೆಂಕಟೇಶ್ ಆರೋಪಿಸಿದರು.
ಪಿಡಿಒ ಗಮನಕ್ಕೆ ತಂದರೂ ಕ್ರಮವಿಲ್ಲ
ಕಾಲೋನಿಯ ಸಮಸ್ಯೆಗಳನ್ನು ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರ ಗಮನಕ್ಕೆ ಹಲವು ಬಾರಿ ತಂದಿದ್ದರೂ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದಿ ದೀಪಗಳ ದುರಸ್ತಿ, ಚರಂಡಿಗಳ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ ಸೇರಿದಂತೆ ತುರ್ತು ಅಗತ್ಯಗಳನ್ನು ಈಡೇರಿಸಬೇಕು. ಅರಣ್ಯ ಪ್ರದೇಶದ ಪಕ್ಕದಲ್ಲಿರುವ ಕಾಲೋನಿಗೆ ರಾತ್ರಿ ವೇಳೆ ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸಿ, ನಿವಾಸಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ, ಶೀಘ್ರವೇ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

