Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಈ ವರ್ಷ ಮುಂಗಾರು ಮಳೆಗಾಲದ ಅವಧಿಯಲ್ಲಿ ವಾಡಿಕೆ ಮಳೆ ಬೀಳದೆ ಇದುವರೆಗೂ ಬಿತ್ತನೆಕಾರ್ಯ ಆಗಿಲ್ಲ. ಹಾಗಾಗಿ ಸರ್ಕಾರ ಕೂಡಲೆ ಬರ ಘೋಷಣೆ ಮಾಡಿ ಬರ ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮಕ್ಕೆ ಮುಂದಾಗಬೇಕೆಂದು ಜೀವಿಕ ಸಂಘಟನೆಯ ತಾಲ್ಲೂಕು ಸಂಚಾಲಕ ಪಿ.ಶ್ರೀನಿವಾಸ್ ಆಗ್ರಹಿಸಿದ್ದಾರೆ.
ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲ್ಲೂಕಿನಲ್ಲಿ ಶೇ 70-80 ಮಂದಿ ಕೃಷಿಯನ್ನು ನಂಬಿದ್ದು ಮಳೆಯ ಅಭಾವದಿಂದ ಈ ವರ್ಷ ಬಿತ್ತನೆ ಕಾರ್ಯ ನಡೆದೇ ಇಲ್ಲ ಎಂದರು. ಇದರಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ರಾಸುಗಳಿಗೆ ಮೇವಿನ ಕೊರತೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜೀವಿಕ ಸಂಘಟನೆಯ ಪ್ರಮುಖ ಬೇಡಿಕೆಗಳೇನು?
- ಬರ ಘೋಷಣೆ ಮಾಡಿ ಪಹಣಿ ಹೊಂದಿರುವ ಪ್ರತಿ ರೈತನಿಗೂ 50 ಸಾವಿರ ಪರಿಹಾರ ನೀಡಬೇಕು
- ಪ್ರತಿ ಗ್ರಾಮದಲ್ಲೂ ತೊಟ್ಟಿ ನಿರ್ಮಿಸಿ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು
- ನರೇಗಾದಲ್ಲಿ ಕೂಲಿ ದಿನಗಳನ್ನು ಹಾಗೂ ಕೂಲಿ ಹಣವನ್ನು ಹೆಚ್ಚಿಸಬೇಕು
- ನ್ಯಾಯ ಬೆಲೆ ಅಂಗಡಿಗಳ ಮೂಲಕ ಅಕ್ಕಿ, ರಾಗಿ ಮಾತ್ರವಲ್ಲದೆ ದಿನಸಿ ಪದಾರ್ಥಗಳನ್ನೂ ರಿಯಾಯಿತಿ ದರದಲ್ಲಿ ವಿತರಿಸಬೇಕು
- ಪ್ರತಿ ಹೋಬಳಿಯಲ್ಲೂ ಮೇವಿನ ಬ್ಯಾಂಕುಗಳನ್ನು ತೆರೆಯಬೇಕು
- ಬೆಳೆ ವಿಮೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ, ವಿಮೆ ಕಟ್ಟಿದ ಎಲ್ಲ ರೈತರಿಗೂ ಪರಿಹಾರ ಸಿಗುವಂತೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಎಸ್.ಗೊಲ್ಲಹಳ್ಳಿಯ ನರಸಿಂಹಪ್ಪ, ಲುಂಬಿನಿ ಎಜುಕೇಷನ್ ಅಂಡ್ ಡೆವಲಪ್ಮೆಂಟ್ ಟ್ರಸ್ಟ್ ನ ಅಧ್ಯಕ್ಷ ಮೂರ್ತಿ ಮೈತ್ರಿ, ಜೀವಿಕ ಸಂಘಟನೆಯ ಮುನಿಯಪ್ಪ ಹಾಜರಿದ್ದರು. ಇತ್ತೀಚೆಗೆ ರೈತ ಸಂಘ ಕೂಡ ತಾಲ್ಲೂಕನ್ನು ಬರಗಾಲ ಪೀಡಿತ ಎಂದು ಘೋಷಿಸಿ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿತ್ತು.
In English: Jeevika Sanghatana taluk convener P. Srinivas has demanded the Karnataka government immediately declare Sidlaghatta taluk drought-affected, citing failed monsoon sowing this year. Demands include ₹50,000 compensation per farmer, cattle drinking-water tanks in every village, more NREGA work days and wages, subsidised groceries via ration shops, and fodder banks in every hobli.
FAQ
ಬರ ಘೋಷಣೆಯನ್ನು ಯಾರು ಕೋರಿದ್ದಾರೆ?
ಜೀವಿಕ ಸಂಘಟನೆಯ ತಾಲ್ಲೂಕು ಸಂಚಾಲಕ ಪಿ.ಶ್ರೀನಿವಾಸ್ ಈ ಬೇಡಿಕೆ ಮುಂದಿಟ್ಟಿದ್ದಾರೆ.
ಬರ ಘೋಷಣೆಯಾದರೆ ಮುಂದೇನು?
ಸರ್ಕಾರ ಬರ ಘೋಷಿಸಿದರೆ ರೈತರಿಗೆ ಪರಿಹಾರ ಧನ, ಜಾನುವಾರುಗಳಿಗೆ ಮೇವು-ನೀರಿನ ವ್ಯವಸ್ಥೆ ಹಾಗೂ ನರೇಗಾ ಕೂಲಿ ಹೆಚ್ಚಳದಂತಹ ಕ್ರಮಗಳನ್ನು ನಿರೀಕ್ಷಿಸಲಾಗಿದೆ.








