ದೇಶಾದ್ಯಂತ ಕೊರೊನಾ ಆವರಿಸಿ ಜನ ಸಾವು ಬದುಕಿನ ನಡುವೆ ಸೆಣಸುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಆಹಾರ ಪಡಿತರ ಅಕ್ಕಿಯ ವಿತರಣೆಯನ್ನು 5 ಕೆಜಿ ಯಿಂದ 2 ಕೆಜಿಗೆ ಇಳಿಸುವ ಮೂಲಕ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಎನ್ ಎಸ್ ಯು ಐ ರಾಜ್ಯ ಸಂಚಾಲಕ ಕೆ.ಎನ್.ಮುನೀಂದ್ರ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಪತ್ರ ಚಳುವಳಿ ಕರೆಯ ಮೇರೆಗೆ ತಾಲ್ಲೂಕಿನ ಕುಂದಲಗುರ್ಕಿಯ ಯುವಕರೊಂದಿಗೆ ರಾಜ್ಯಾದ್ಯಂತ ಪಡಿತರ ಅಕ್ಕಿಯನ್ನು 2 ಕೆಜಿ ಯಿಂದ 10 ಕೆಜಿಗೆ ಏರಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಪತ್ರ ಬರೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಅವೈಜ್ಞಾನಿಕ ತೀರ್ಮಾನಗಳಿಂದ ಜನ ಕೊರೊನಾದಿಂದ ಸಾಯುವ ಸ್ಥಿತಿ ಬಂದೊದಗಿದೆ. ಸಾಲದ್ದಕ್ಕೆ ಲಾಕ್ ಡೌನ್, ಕರ್ಫ್ಯೂ ಹೇರಿರುವುದರಿಂದ ಕೂಲಿ ಕಾರ್ಮಿಕರಿಗೆ ಕೆಲಸಗಳಿಲ್ಲದೇ ಒದ್ದಾಡುತ್ತಿರುವ ಇಂತಹ ಸಂದರ್ಭದಲ್ಲಿ ೫ ಕೆಜಿ ನೀಡುತ್ತಿದ್ದ ಅಕ್ಕಿಯನ್ನು ೨ ಕೆಜಿಗೆ ಇಳಿಸಿ ಬಡವರನ್ನು ಹಸಿವಿನಿಂದ ಸಾಯುವ ಸ್ಥಿತಿಗೆ ತಂದಿದ್ದಾರೆ. ಕೂಡಲೇ ಕುಟುಂಬದ ಪ್ರತಿ ವ್ಯಕ್ತಿಗೂ ತಲಾ ಹತ್ತು ಕೆಜಿ ಯಂತೆ ಅಕ್ಕಿಯನ್ನು ವಿತರಿಸಬೇಕು ಎಂದು ಆಗ್ರಹಿಸಿ ಬರೆದ ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಅಂಚೆ ಮೂಲಕ ರವಾನಿಸಿದರು.
ಈ ಸಂದರ್ಭದಲ್ಲಿ ಶಿಡ್ಲಘಟ್ಟ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಚರಣ್, ಯುವ ಮುಖಂಡರಾದ ಭಾಸ್ಕರತೇಜಸ್, ಕೆ.ಎಂ.ಆನಂದ್. ಮುರಳಿ. ಅಶೋಕ. ಹರೀಶ್ ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿಯ ಅಂಚೇ ಕಚೇರಿಯ ಮುಂಭಾಗದಲ್ಲಿ ಎನ್ ಎಸ್ ಯು ಐ ನೇತೃತ್ವದ ಯುವಕರ ತಂಡ ಕುಟುಂಬದ ಪ್ರತಿ ವ್ಯಕ್ತಿಗೂ ತಲಾ ಹತ್ತು ಕೆಜಿ ಯಂತೆ ಅಕ್ಕಿಯನ್ನು ವಿತರಿಸಬೇಕು ಎಂದು ಆಗ್ರಹಿಸಿ ಬರೆದ ಪತ್ರಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಂಚೆ ಮೂಲಕ ರವಾನಿಸಿದರು.