Kundalagurki, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಬೆಟ್ಟದ ಮೇಲಿರುವ ಶ್ರೀ ವರದಾಂಜನೇಯಸ್ವಾಮಿ ದೇವಾಲಯ ಇದೀಗ ಅಧಿಕೃತವಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ. ಇದರೊಂದಿಗೆ ತಾಲ್ಲೂಕಿನ ಪ್ರವಾಸಿ ತಾಣಗಳ ಸಂಖ್ಯೆ ಎಂಟಕ್ಕೇರಿದೆ.
ಐತಿಹಾಸಿಕ ಹಿನ್ನೆಲೆ ಮತ್ತು ಧಾರ್ಮಿಕ ಮಹತ್ವದಿಂದಲೇ ಪ್ರಸಿದ್ಧಿಯಾಗಿರುವ ಈ ದೇವಾಲಯಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಚಾರ ಹೆಚ್ಚುತ್ತಿದೆ. ಭಕ್ತರ ಈ ನಿರಂತರ ಆಗಮನದಿಂದಾಗಿ ಬೆಟ್ಟದ ಮೇಲಿನ ದೇವಾಲಯಕ್ಕೆ ತೆರಳಲು ಸುಗಮವಾದ ರಸ್ತೆ, ಕುಡಿಯುವ ನೀರು, ವಿದ್ಯುಚ್ಛಕ್ತಿ, ವಿಶ್ರಾಂತಿ ಸ್ಥಳ ಮತ್ತು ನೆರಳಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಇದೀಗ ನಿರೀಕ್ಷೆ ಹೆಚ್ಚಾಗಿದೆ.
ಶಿಡ್ಲಘಟ್ಟ ತಾಲ್ಲೂಕು ಧಾರ್ಮಿಕ ಮತ್ತು ಪ್ರಾಕೃತಿಕ ಸೊಬಗಿನಿಂದ ಕೂಡಿದೆ. ಪಾಪಾಗ್ನಿ ನದಿ ತಟದ ತಲಕಾಯಲಬೆಟ್ಟದ ಶ್ರೀವೆಂಕಟರಮಣಸ್ವಾಮಿ ದೇವಾಲಯ, ಚಿಕ್ಕದಾಸರಹಳ್ಳಿ ಗುಟ್ಟದ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯ, ಬಶೆಟ್ಟಹಳ್ಳಿಯ ಶ್ರೀರಾಮಲಿಂಗೇಶ್ವರಸ್ವಾಮಿ ದೇವಾಲಯ, ಸಾದಲಿಯ ಸಾದಲಮ್ಮ ದೇವಿ ದೇವಾಲಯ, ಒಂಟೂರು ಒಡೆಯನ ಕೆರೆಯ ಶ್ರೀಅನಂತಪದ್ಮನಾಭ ದೇವಾಲಯ ಮುಂತಾದ ಸ್ಥಳಗಳು ಈಗಾಗಲೇ ಪ್ರವಾಸಿ ತಾಣಗಳ ಪಟ್ಟಿಯಲ್ಲಿವೆ. ಈಗ ಕುಂದಲಗುರ್ಕಿಯ ವರದಾಂಜನೇಯಸ್ವಾಮಿ ದೇವಾಲಯ ಸೇರ್ಪಡೆಯಾಗಿ ತಾಲ್ಲೂಕಿನ ಧಾರ್ಮಿಕ ನಕ್ಷೆಗೆ ಮತ್ತೊಂದು ಕಿರೀಟದಂತೆ ಸೇರಿದೆ.
ಕುಂದಲಗುರ್ಕಿಯ ಸೌಂದರ್ಯ ಮತ್ತು ಮಹತ್ವ
ಹಸಿರು ಪರಿಸರದಿಂದ ಆವರಿಸಲ್ಪಟ್ಟಿರುವ ಕುಂದಲಗುರ್ಕಿ ಬೆಟ್ಟವು ಶಾಂತ ಮತ್ತು ಆಧ್ಯಾತ್ಮಿಕ ವಾತಾವರಣದಿಂದ ಕೂಡಿದೆ. ಬೆಟ್ಟದ ಮೆಟ್ಟಿಲು ಮಾರ್ಗದ ಮೂಲಕ ದೇವಾಲಯ ತಲುಪಬಹುದು. ದೇವಾಲಯದ ತಪ್ಪಲಿನಲ್ಲಿ ಸಮುದಾಯ ಭವನವಿದ್ದು, ಪ್ರತೀ ಶನಿವಾರ ವಿಶೇಷ ಪೂಜೆ ಹಾಗೂ ವಾರದ ಎಲ್ಲಾ ದಿನಗಳಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಭಕ್ತರು, ಪ್ರವಾಸಿಗರು ಹಾಗೂ ಪ್ರಕೃತಿ ಪ್ರೇಮಿಗಳಿಗೆ ಇದು ಶಾಂತ ಮತ್ತು ಶಕ್ತಿ ತುಂಬಿದ ಸ್ಥಳವಾಗಿದೆ.
“ಬೆಟ್ಟಕ್ಕೆ ರಸ್ತೆ ನಿರ್ಮಿಸಬೇಕು”
“ಕುಂದಲಗುರ್ಕಿ ಬೆಟ್ಟವನ್ನು ಪ್ರವಾಸಿ ತಾಣವಾಗಿ ಗುರುತಿಸಿರುವುದು ಸಂತಸದ ವಿಷಯ. ವರ್ಷಗಳ ಹಿಂದೆಯೇ ಈ ಕುರಿತು ಮನವಿ ಮಾಡಿದ್ದೆವು. ಈಗ ದೇವಾಲಯಕ್ಕೆ ತೆರಳಲು ಬೆಟ್ಟದ ಮೇಲಿನ ರಸ್ತೆ ನಿರ್ಮಾಣ ಅತ್ಯಾವಶ್ಯಕ,” ಎಂದು ಯುವ ಮುಖಂಡ ಮುನೀಂದ್ರ (ಕುಂದಲಗುರ್ಕಿ) ಹೇಳಿದರು.
ಶಾಸನಗಳಲ್ಲಿ ಉಲ್ಲೇಖಿತವಾದ ಇತಿಹಾಸ
ಶಾಸನ ತಜ್ಞ ಡಿ.ಎನ್. ಸುದರ್ಶನರೆಡ್ಡಿ ವಿವರಿಸಿದಂತೆ, ಕುಂದಲಗುರ್ಕಿಯ ಉಲ್ಲೇಖ ಕ್ರಿ.ಶ. 810ರ ನಂದಿ ತಾಮ್ರ ಶಾಸನದಲ್ಲಿ ದೊರಕುತ್ತದೆ. ರಾಷ್ಟ್ರಕೂಟ ಚಕ್ರವರ್ತಿ ಮೂರನೇ ಗೋವಿಂದನು ರಾಣಿ ರತ್ನಾವಳಿಯ ಪ್ರೇರಣೆಯಿಂದ ಭೋಗನಂದೀಶ್ವರ ದೇವಾಲಯಕ್ಕೆ ಕುಂದಲಗುರ್ಕಿ ಹಾಗೂ ಕನ್ನಮಂಗಲ ಸೇರಿದಂತೆ ಹಲವು ಪ್ರದೇಶಗಳನ್ನು ದಾನವಾಗಿ ನೀಡಿದ್ದಾನೆ. ಇದರಿಂದ ಈ ಸ್ಥಳದ ಪೌರಾಣಿಕ ಮತ್ತು ಇತಿಹಾಸಿಕ ಮಹತ್ವ ಸ್ಪಷ್ಟವಾಗುತ್ತದೆ.
For Daily Updates WhatsApp ‘HI’ to 7406303366
