
Sidlaghatta : “ಕಂದಾಯ ಇಲಾಖೆಯು ಪವಿತ್ರವಾದ ಮಾತೃ ಇಲಾಖೆ. ಇಲ್ಲಿಗೆ ಬರುವ ಜನಸಾಮಾನ್ಯರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸಬಾರದು. ನೈಜವಾಗಿ ಜನರ ಪರವಾಗಿ ಕೆಲಸ ಮಾಡಿ, ಜನಸ್ನೇಹಿ ಆಡಳಿತ ನೀಡುವುದು ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯ,” ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸೋಮವಾರ ಶಿಡ್ಲಘಟ್ಟ ತಾಲ್ಲೂಕು ಕಚೇರಿಗೆ ಭೇಟಿ ನೀಡಿದ ಅವರು, ಕಡತಗಳ ನಿರ್ವಹಣೆ, ಹಾಜರಾತಿ ಹಾಗೂ ಭೂ ದಾಖಲೆಗಳ ಗಣಕೀಕರಣ ಕಾರ್ಯವನ್ನು ಕೂಲಂಕಷವಾಗಿ ಪರಿಶೀಲಿಸಿದರು. ನಂತರ ಸಾರ್ವಜನಿಕರಿಂದ ನೇರವಾಗಿ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
2 ತಿಂಗಳಲ್ಲಿ ಕಂದಾಯ ದಾಖಲೆಗಳು ನಿಮ್ಮ ಬೆರಳ ತುದಿಗೆ:
ತಾಲ್ಲೂಕಿನಲ್ಲಿ ಭೂ ದಾಖಲೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದ್ದು, ಮುಂದಿನ ಎರಡು ತಿಂಗಳೊಳಗೆ ಶಿಡ್ಲಘಟ್ಟದ ಎಲ್ಲಾ ಮೂಲ ದಾಖಲೆಗಳ ಡಿಜಿಟಲೀಕರಣ ಪೂರ್ಣಗೊಳ್ಳಲಿದೆ. ಇದರಿಂದ ರೈತರು ಕಚೇರಿಗೆ ಬರುವ ಅವಶ್ಯಕತೆಯಿಲ್ಲದೆ, ಮನೆಯಲ್ಲೇ ಕುಳಿತು ದಾಖಲೆಗಳನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ಆಶಾವಾದ ವ್ಯಕ್ತಪಡಿಸಿದರು.
ತೆರಿಗೆ ಕಳ್ಳರ ಮೇಲೆ ಡಿಸಿ ಕಣ್ಣು:
ನಗರಸಭೆಯ ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಮಾತನಾಡಿದ ಅವರು, “ವಾಣಿಜ್ಯ ಕಟ್ಟಡಗಳಿಗೆ ವಸತಿ ತೆರಿಗೆ ಕಟ್ಟುವುದು ಮತ್ತು ಜಾಗದ ವಿಸ್ತೀರ್ಣವನ್ನು ಕಡಿಮೆ ತೋರಿಸಿ ತೆರಿಗೆ ವಂಚಿಸುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಎಲ್ಲಾ ಕಟ್ಟಡಗಳ ಮರು ಪರಿಶೀಲನೆ ನಡೆಸಿ ಬಾಕಿ ಇರುವ ತೆರಿಗೆಯನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಲಾಗುವುದು,” ಎಂದು ಎಚ್ಚರಿಸಿದರು.
ತಹಶೀಲ್ದಾರ್ ಎನ್. ಗಗನಸಿಂಧು, ಗ್ರೇಡ್-2 ತಹಶೀಲ್ದಾರ್ ಮಂಜುನಾಥ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.