
Sidlaghatta : “ವಂದೇ ಮಾತರಂ ಎಂಬುದು ಭಾರತೀಯರ ಪಾಲಿಗೆ ಕೇವಲ ಗೀತೆಯಲ್ಲ, ಅದೊಂದು ಮಂತ್ರ. ಆ ಧ್ವನಿ ಕೇಳಿದರೆ ಮೈ ರೋಮಾಂಚನಗೊಂಡು ದೇಶಪ್ರೇಮ ತಂತಾನೇ ಉಕ್ಕುತ್ತದೆ,” ಎಂದು ಕೋಲಾರ ಜಿಲ್ಲಾ ಸಂಘ ಸಂಚಾಲಕ ಗೋವಿಂದರಾಜು ಬಣ್ಣಿಸಿದರು.
ನಗರದ ಕೋಟೆ ವೃತ್ತದಲ್ಲಿ ಹಿಂದೂ ಸಮಾಜೋತ್ಸವ ವ್ಯವಸ್ಥಾಪನಾ ಸಮಿತಿಯು ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
“ಕಳೆದ ವರ್ಷ ಅಯೋಧ್ಯೆಯ ರಾಮಮಂದಿರಕ್ಕೆ 11 ಕೋಟಿ ಭಕ್ತರು ಭೇಟಿ ನೀಡಿದ್ದಾರೆ. ಈ ಹಿಂದೆ ವಿದೇಶಿ ಗಣ್ಯರಿಗೆ ತಾಜ್ ಮಹಲ್ ಪ್ರತಿಮೆಯನ್ನು ಸ್ಮರಣಿಕೆಯಾಗಿ ನೀಡಲಾಗುತ್ತಿತ್ತು, ಆದರೆ ಇಂದು ರಾಮಮಂದಿರದ ಪ್ರತಿಮೆಯನ್ನು ಗೌರವದಿಂದ ನೀಡಲಾಗುತ್ತಿದೆ. ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ಗೆ ವರ್ಷಕ್ಕೆ 70 ಲಕ್ಷ ಜನ ಬಂದರೆ, ರಾಮಮಂದಿರಕ್ಕೆ 11 ಕೋಟಿ ಜನ ಬಂದಿರುವುದು ಹಿಂದೂ ಧರ್ಮದ ಮೇಲಿನ ನಂಬಿಕೆಗೆ ಸಾಕ್ಷಿ,” ಎಂದು ಅವರು ಅಭಿಪ್ರಾಯಪಟ್ಟರು.
RSSಗೆ 100ರ ಸಂಭ್ರಮ: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಈ ಉತ್ಸವ ಹಮ್ಮಿಕೊಳ್ಳಲಾಗಿದೆ. “ಸಾಮಾನ್ಯವಾಗಿ ನೂರು ವರ್ಷ ಎಂದರೆ ವೃದ್ಧಾಪ್ಯ ಎನ್ನುತ್ತಾರೆ, ಆದರೆ RSS ಪಾಲಿಗೆ ಈ 100 ವರ್ಷ ಎನ್ನುವುದು ಇನ್ನೂ ಎಳೆ ಪ್ರಾಯವಿದ್ದಂತೆ,” ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು. ಸಾರಿಗೆ ಬಸ್ ನಿಲ್ದಾಣದಿಂದ ಆರಂಭವಾದ ಮೆರವಣಿಗೆಯಲ್ಲಿ ಭಾರತ ಮಾತೆಯ ಭಾವಚಿತ್ರ, ರಾರಾಜಿಸಿದ ಭಗವಾಧ್ವಜಗಳು, ಡೊಳ್ಳು-ತಮಟೆಗಳ ನಿನಾದ ಮತ್ತು ಕಳಶ ಹೊತ್ತ ಮಹಿಳೆಯರು ಮೆರಗು ನೀಡಿದರು. ಮೆರವಣಿಗೆಯ ಉದ್ದಕ್ಕೂ ‘ಭಾರತ ಮಾತಾ ಕೀ ಜೈ’ ಘೋಷಣೆಗಳು ಮುಗಿಲು ಮುಟ್ಟಿದ್ದವು. ಶಸ್ತ್ರಸಜ್ಜಿತ ಪೊಲೀಸರ ಬಿಗಿ ಬಂದೋಬಸ್ತ್ನಲ್ಲಿ ಶಾಂತಿಯುತವಾಗಿ ಕಾರ್ಯಕ್ರಮ ನೆರವೇರಿತು.