ವಕೀಲರಿಗೆ ದೂರವಾಣಿ ಮೂಲಕ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಹಾಗೂ ಕುಟುಂಬಸ್ಥರು ಮತ್ತು ವಕೀಲರಿಗೆ ಪ್ರಾಣ ಬೆದರಿಕೆ ಹಾಕಿರುವ ಆರೋಪಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಸೋಮವಾರ ನ್ಯಾಯಾಲಯದ ಆವರಣದಲ್ಲಿ ಕಲಾಪದಿಂದ ಹೊರಗುಳಿದು ಕೆಲಕಾಲ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ ಮಾತನಾಡಿ, ತಾಲ್ಲೂಕಿನ ಬಸವನಪರ್ತಿ ಗ್ರಾಮದ ಮಂಜುನಾಥ ಬಿನ್ ಸುಬ್ಬರಾಯಪ್ಪ ಎಂಬುವವರು ನರೇಗಾ ಯೋಜನೆಯಡಿ ಗ್ರಾಮದಲ್ಲಿ ಜೆಸಿಬಿ ಮೂಲಕ ರಸ್ತೆ ಕಾಮಗಾರಿ ಮಾಡುತ್ತಿದ್ದು ಜಮೀನಿನ ಮಾಲೀಕ ಈ ಬಗ್ಗೆ ದಾವೆ ಹೂಡಲು ವಕೀಲರಾದ ಬಿ.ಎಂ.ಮಂಜುನಾಥ ಎಂಬುವವರ ಬಳಿ ಚರ್ಚಿಸಿದ್ದರು. ತಮ್ಮ ಕಕ್ಷಿದಾರನ ಪರ ವಕೀಲ ಬಿ.ಎಂ.ಮಂಜುನಾಥ ಎಂಬುವವರು ಸಂಬಂದಪಟ್ಟ ವೈ ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ರವರಿಗೆ ತಕರಾರು ಅರ್ಜಿ ಸಲ್ಲಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪಿಡಿಓ ಸಂಬಂದಪಟ್ಟ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರ ಮಂಜುನಾಥ ಬಿನ್ ಸುಬ್ಬರಾಯಪ್ಪ ಎಂಬುವವರಿಗೆ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದಾರೆ. ಇದರಿಂದ ಕುಪಿತಗೊಂಡ ಗುತ್ತಿಗೆದಾರ ಮಂಜುನಾಥ್ ವಕೀಲ ಬಿ.ಎಂ.ಮಂಜುನಾಥ ರಿಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದೇ ಆಲ್ಲದೇ ವಕೀಲರ ಮನೆ ಬಳಿ ತೆರಳಿ ಕುಟುಂಬಸ್ಥರ ವಿರುದ್ದ ಹಲ್ಲೆಗೆ ಮುಂದಾಗಿ ವಕೀಲರಿಗೆ ಪ್ರಾಣ ಬೆದರಿಕೆ ಹಾಕಿರುವುದನ್ನು ತಾಲ್ಲೂಕು ವಕೀಲರ ಸಂಘ ಖಂಡಿಸುತ್ತದೆ ಎಂದರು.
ಕಕ್ಷಿದಾರರ ಹಿತ ಕಾಪಾಡುವುದು ವಕೀಲರ ಕರ್ತವ್ಯವಾಗಿದ್ದು ತಮ್ಮ ಕರ್ತವ್ಯವನ್ನು ಎಸಗಿದ ವಕೀಲರ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಹಾಗೂ ಪ್ರಾಣ ಬೆದರಿಕೆ ಹಾಕಿರುವ ಆರೋಪಿ ಮಂಜುನಾಥ್ ಬಿನ್ ಸುಬ್ಬರಾಯಪ್ಪ ಎಂಬುವವನನ್ನು ಕೂಡಲೇ ಬಂಧಿಸಿ ಕಾನೂನು ರೀತ್ಯಾ ಶಿಕ್ಷಿಸಬೇಕು ಎಂದು ಒತ್ತಾಯಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್, ವಕೀಲರಾದ ಬೈರಾರೆಡ್ಡಿ, ಬಿ.ಎಂ.ಮಂಜುನಾಥ್, ನಾಗರಾಜ್, ವೆಂಕಟೇಶ್, ನಾಗೇಂದ್ರ ಬಾಬು, ಕೃಷ್ಣ, ವೇಣುಗೋಪಾಲ್, ಶ್ರೀನಿವಾಸ್ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi