ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶನಿವಾರ ಶ್ರೀ ಎಚ್.ಡಿ.ದೇವೇಗೌಡ ಹಾಗೂ ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ದಿ ಟ್ರಸ್ಟ್ ವತಿಯಿಂದ ತರಿಸಲಾಗಿದ್ದ ಜೀವರಕ್ಷಕ ಔಷಧಿಗಳನ್ನು ಜಿಲ್ಲಾ ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಹಸ್ತಾಂತರಿಸಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿದರು.
ಕ್ಷೇತ್ರದ ಜನರು ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ನಲುಗಿಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರದ ಜನರ ಆರೋಗ್ಯ ಕಾಪಾಡುವುದು ಸೆರಿದಂತೆ ಯಾರೊಬ್ಬರಿಗೂ ಯಾವುದೇ ತೊಂದರೆಯಾಗಬಾರದು ಎನ್ನುವುದು ಟ್ರಸ್ಟಿನ ಅಧ್ಯಕ್ಷ ಬಿ.ಎನ್.ರವಿಕುಮಾರ್ ರ ಆಶಯವಾಗಿದೆ. ಜನರ ಹಿತದೃಷ್ಟಿಯಿಂದ ಸುಮಾರು 20 ಲಕ್ಷ ರೂ ಬೆಲೆಯ ಜೀವರಕ್ಷಕ ಔಷಧಿಗಳನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಅದರಂತೆ ಇದೀಗ ನಗರದ ಆಸ್ಪತ್ರೆಯ ತಾಲ್ಲೂಕು ವೈದ್ಯಾಧಿಕಾರಿಗಳ ನೀಡಿದ್ದ ಪಟ್ಟಿಯಂತೆ ಆಂಟಿಬಯೋಟಿಕ್ ಇಂಜೆಕ್ಷನ್ ಗಳು, ಶ್ವಾಸಕೋಶದ ಇನ್ಫೆಕ್ಷನ್ ತಡೆಯಲು ಬಳಸುವ ಇಂಜೆಕ್ಷನ್ ಗಳು ಸೇರಿದಂತೆ ಎಲ್ಲಾ ಜೀವರಕ್ಷಕ ಇಂಜೆಕ್ಷನ್ ಗಳನ್ನು ಮುಂಬಯಿ, ಪೂನಾ ಮುಂತಾದೆಡೆಗಳಿಂದ ತರಿಸಿ ಕೊಡುತ್ತಿದ್ದೇವೆ. ನಮ್ಮ ಉದ್ದೇಶ ನಮ್ಮ ಜನರಿಗೆ ಉತ್ತಮ ಚಿಕಿತ್ಸೆ ಲಭಿಸಬೇಕು, ಕೊರೊನಾ ದಿಂದ ಕ್ಷೇತ್ರದಾಧ್ಯಂತ ಸಾವು ನೋವುಗಳು ಸಂಭವಿಸುವುದನ್ನು ತಡೆಯುವಲ್ಲಿ ನೆರವಾಗುವುದಾಗಿದೆ ಎಂದರು. ಮುಂಬರುವ ದಿನಗಳಲ್ಲಿ ಡಿಎಚ್ಓ ಹಾಗೂ ಟಿಎಚ್ಓ ಅವರು ಸೂಚಿಸಿದ್ದೇ ಆದರೆ ಪ್ರತಿಯೊಂದು ಕುಟುಂಬಕ್ಕೂ ಆರೋಗ್ಯ ಕಿಟ್ಗಳನ್ನು ಪೂರೈಸಲು ನಾವು ಸಿದ್ದರಿದ್ದೇವೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾ ರಘು ಮಾತನಾಡಿ, ಕೊರೊನಾ ಎರಡನೇ ಅಲೆ ಹಿನ್ನಲೆಯಲ್ಲಿ ರಾಜ್ಯ ಸೇರಿದಂತೆ ದೇಶದಲ್ಲೆಡೆ ಜನ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ಸಹಕಾರಿಯಾಗಲೆಂದು ಟ್ರಸ್ಟ್ ವತಿಯಿಂದ ಅಗತ್ಯ ಜೀವರಕ್ಷಕ ಔಷಧಿಗಳನ್ನು ಇಂದು ಪೂರೈಸಲಾಗಿದೆ. ಈ ಹಿಂದೆ ಇದೇ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಒಂದೊಂದು ಆಂಬ್ಯುಲೆನ್ಸ್ ವಿತರಿಸಲಾಗಿತ್ತು. ಇದೀಗ ಔಷಧಿ ಸೇರಿದಂತೆ ಆರೋಗ್ಯ ಸಿಬ್ಬಂದಿಗಾಗಿ ಮಾಸ್ಕ್ಗಳನ್ನು ವಿತರಿಸಿದ್ದೇವೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರಿಗೆ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಕಲ್ಪಿಸಲು ಟ್ರಸ್ಟ್ ಸಿದ್ದವಾಗಿದೆ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ವಾಣಿ ಮಾತನಾಡಿ, ನಗರದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಅಗತ್ಯವಿರುವ ಔಷಧಿಗಳನ್ನು ಯಾರಾದರೂ ದಾನಿಗಳಿಂದ ಕೊಡಿಸುವಂತೆ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಂಕ್ ಮುನಿಯಪ್ಪ ರ ಬಳಿ ಮನವಿ ಮಾಡಿಕೊಂಡಿದ್ದೆ. ಅದರಂತೆ ಅವರು ಬಿ.ಎನ್.ರವಿಕುಮಾರ್ ರ ಮೂಲಕ ನಾವು ಬೇಡಿಕೆಯಿಟ್ಟಷ್ಟು ಓಷಧಿಗಳನ್ನು ಇಂದು ಪೂರೈಸುವ ಜೊತೆಗೆ ಆರೋಗ್ಯ ಸಿಬ್ಬಂದಿಗೆ ಎನ್ ೯೫ ಮಾಸ್ಕ್ಗಳನ್ನು ಸಹ ನೀಡಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಕಬಾಡಿ ಮಾತನಾಡಿ, ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟುವಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಸಮಾಜ ಸೇವಕರು, ದಾನಿಗಳು ಸಹಕಾರ ನೀಡುತ್ತಿರುವುದು ಸ್ವಾಗತಾರ್ಹ, ಇದರೊಂದಿಗೆ ಜನರ ಸಹಕಾರವೂ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎಸ್.ರಾಜೀವ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ವಿ.ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಕೆ.ರಾಜಶೇಖರ್, ಮಾಜಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್, ಉಪಾಧ್ಯಕ್ಷ ಅಪ್ಸರ್ಪಾಷ, ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್, ಸದಸ್ಯ ಗಜೇಂದ್ರ, ಮುಖಂಡರಾದ ಎಚ್.ಜಿ.ಶಶಿಕುಮಾರ್, ಎಸ್.ಎಂ.ರಮೇಶ್ ಹಾಜರಿದ್ದರು.
Follow ನಮ್ಮ ಶಿಡ್ಲಘಟ್ಟ on
Facebook: https://www.facebook.com/sidlaghatta
Twitter: https://twitter.com/hisidlaghatta
Instagram: https://www.instagram.com/sidlaghatta
Telegram: https://t.me/Sidlaghatta